newsics.com | ನ್ಯೂಸಿಕ್ಸ್
ನವದೆಹಲಿ: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ‘ವಿಕಸಿತ ಭಾರತ-ಉದ್ಯೋಗ ಮತ್ತು ಜೀವನೋಪಾಯ ಮಿಷನ್ ಗ್ಯಾರಂಟಿ (ಗ್ರಾಮೀಣ) ಕಾಯ್ದೆ, 2025’ (VB-G RAM-G) ಇಂದಿನಿಂದ (ಜುಲೈ 1) ದೇಶಾದ್ಯಂತ ಅಧಿಕೃತವಾಗಿ ಜಾರಿಗೆ ಬಂದಿದೆ.
ಈ ಹೊಸ ಕಾಯ್ದೆಯಡಿ ಪರಿಷ್ಕೃತಗೊಂಡಿರುವ ದಿನಗೂಲಿ ದರಗಳನ್ನು ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವಾಲಯವು ಪ್ರಕಟಿಸಿದೆ.
ಕೂಲಿ 327.4 ರೂಪಾಯಿಗೆ ಏರಿಕೆ
ಹೊಸ ಯೋಜನೆಯಡಿ ರಾಷ್ಟ್ರೀಯ ಸರಾಸರಿ ದಿನಗೂಲಿಯನ್ನು ದಿನಕ್ಕೆ 327.4 ರೂಪಾಯಿಗಳಿಗೆ ಹೆಚ್ಚಿಸಲಾಗಿದೆ. ಈ ಮೊದಲು ನರೇಗಾ (MNREGA) ಯೋಜನೆಯಡಿ ಇದು 298.8 ರೂಪಾಯಿ ಆಗಿತ್ತು. ಅಂದರೆ, ಸರಾಸರಿ ಕೂಲಿಯಲ್ಲಿ ದಿನಕ್ಕೆ 28.6 ರೂಪಾಯಿಗಳಷ್ಟು ಏರಿಕೆಯಾಗಿದ್ದು, ದೇಶಾದ್ಯಂತ ಒಟ್ಟಾರೆ ಶೇಕಡಾ 10 ಕ್ಕಿಂತ ಹೆಚ್ಚು ಕೂಲಿ ಹೆಚ್ಚಳವಾದಂತಾಗಿದೆ. ಯಾರಿಗೂ ಕನಿಷ್ಠ ಕೂಲಿಗಿಂತ ಕಡಿಮೆ ಸಿಗಬಾರದು ಎಂಬ ಉದ್ದೇಶದಿಂದ ಕನಿಷ್ಠ ಮಧ್ಯಂತರ ಮೂಲ ಕೂಲಿ ದರವನ್ನು ದಿನಕ್ಕೆ 300 ರೂಪಾಯಿ ಎಂದು ನಿಗದಿಪಡಿಸಲಾಗಿದೆ.
100ರ ಬದಲಿಗೆ ಇನ್ಮುಂದೆ 125 ದಿನಗಳ ಕೆಲಸ!
ಹೊಸ ಕಾಯ್ದೆಯ ಪ್ರಕಾರ, ಅರ್ಹ ಗ್ರಾಮೀಣ ಕುಟುಂಬಗಳಿಗೆ ವರ್ಷದಲ್ಲಿ ಸಿಗುತ್ತಿದ್ದ ಉದ್ಯೋಗದ ಗ್ಯಾರಂಟಿಯನ್ನು 100 ದಿನಗಳಿಂದ 125 ದಿನಗಳಿಗೆ ಹೆಚ್ಚಿಸಲಾಗಿದೆ. 21 ರಾಜ್ಯಗಳು ಮತ್ತು ಆಡಳಿತಾತ್ಮಕ ಘಟಕಗಳಲ್ಲಿ ಕೂಲಿಯನ್ನು ಹೊಸ ಮಧ್ಯಂತರ ದರವಾದ 300 ರೂಪಾಯಿಗಳಿಗೆ ತರಲಾಗಿದೆ. ಉತ್ತರ ಪ್ರದೇಶ, ಬಿಹಾರ, ಜಾರ್ಖಂಡ್, ಪಶ್ಚಿಮ ಬಂಗಾಳ ಮತ್ತು ಅಸ್ಸಾಂನಂತಹ ರಾಜ್ಯಗಳಲ್ಲಿ ಶೇಕಡಾ 15 ರಿಂದ 25 ರಷ್ಟು ಕೂಲಿ ಹೆಚ್ಚಳವಾಗಲಿದ್ದು, ಅರುಣಾಚಲ ಪ್ರದೇಶ ಮತ್ತು ನಾಗಾಲ್ಯಾಂಡ್ನಲ್ಲಿ ಗರಿಷ್ಠ ಶೇಕಡಾ 24.5 ರಷ್ಟು ಹೆಚ್ಚಳ ಮಾಡಲಾಗಿದೆ.
ರಾಜ್ಯ / ಕೇಂದ್ರಾಡಳಿತ ಪ್ರದೇಶದ ಹೊಸ ಪರಿಷ್ಕೃತ ದಿನಗೂಲಿ
ಕರ್ನಾಟಕ ₹349
ಹರಿಯಾಣ ₹409
ಗೋವಾ ₹406
ಕೇರಳ ₹401
ಸಿಕ್ಕಿಂ (ಎತ್ತರದ ಪ್ರದೇಶದ ಗ್ರಾ.ಪಂ)₹450
ಆಂಧ್ರಪ್ರದೇಶ / ತೆಲಂಗಾಣ ₹307
ತಮಿಳುನಾಡು / ಪಂಜಾಬ್ ₹336
ಜಮ್ಮು ಮತ್ತು ಕಾಶ್ಮೀರ ₹329
ಹಿಮಾಚಲ ಪ್ರದೇಶ ₹328
ಮಹಾರಾಷ್ಟ್ರ ₹312
ರಾಜಸ್ಥಾನ ₹308
ಗುಜರಾತ್ ₹316
(ಉತ್ತರ ಪ್ರದೇಶ, ಬಿಹಾರ, ಉತ್ತರಾಖಂಡ, ಪಶ್ಚಿಮ ಬಂಗಾಳ, ಒಡಿಶಾ, ಜಾರ್ಖಂಡ್, ಅಸ್ಸಾಂ, ಮಧ್ಯಪ್ರದೇಶ ಹಾಗೂ ಛತ್ತೀಸ್ಗಢ ಸೇರಿದಂತೆ 21 ರಾಜ್ಯಗಳಿಗೆ ಕನಿಷ್ಠ ವೇತನ ಮಿತಿ ₹300 ಅನ್ನು ಅನ್ವಯಿಸಲಾಗಿದೆ.)
ಹರಿಯಾಣ, ಗೋವಾ ಮತ್ತು ಕೇರಳ ರಾಜ್ಯಗಳಲ್ಲಿ ಹೊಸ ಪರಿಷ್ಕರಣೆಯ ನಂತರ ದಿನಗೂಲಿ ದರವು ₹400 ರ ಗಡಿಯನ್ನು ದಾಟಿದೆ.
95,692.31 ಕೋಟಿ ರೂಪಾಯಿ ಹಂಚಿಕೆ:
ಹೊಸ ವ್ಯವಸ್ಥೆಯನ್ನು ಸುಗಮವಾಗಿ ಜಾರಿಗೊಳಿಸಲು ಹಾಗೂ ಕಾರ್ಮಿಕರಿಗೆ ಸರಿಯಾದ ಸಮಯಕ್ಕೆ ವೇತನ ಪಾವತಿಸಲು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸರ್ಕಾರವು ಒಟ್ಟು 95,692.31 ಕೋಟಿ ರೂಪಾಯಿಗಳ ಮಧ್ಯಂತರ ಹಣವನ್ನು ಹಂಚಿಕೆ ಮಾಡಿದೆ.
ಹಳೇ ಜಾಬ್ ಕಾರ್ಡ್ಗಳು ಇನ್ಮುಂದೆ ಮಾನ್ಯವೇ?
ಹೊಸ ಗ್ರಾಮೀಣ ಉದ್ಯೋಗ ಖಾತರಿ ಕಾರ್ಡ್ಗಳನ್ನು ವಿತರಿಸುವವರೆಗೆ, ಪ್ರಸ್ತುತ ಚಾಲ್ತಿಯಲ್ಲಿರುವ ಇ-ಕೆವೈಸಿ (e-KYC) ಪರಿಶೀಲನೆ ಮುಗಿದಿರುವ ಹಳೆಯ ಜಾಬ್ ಕಾರ್ಡ್ಗಳೇ ಮಾನ್ಯವಾಗಿರುತ್ತವೆ ಎಂದು ಸರ್ಕಾರ ಸ್ಪಷ್ಟಪಡಿಸಿದೆ.
ಯೋಜನೆಯ ಅನುಷ್ಠಾನದಲ್ಲಿ ಗ್ರಾಮ ಪಂಚಾಯತಿಗಳ ಪಾತ್ರ ಮೊದಲಿನಂತೆಯೇ ಮುಂದುವರಿಯಲಿದ್ದು, ಜಲ ಸಂರಕ್ಷಣೆ, ಕೃಷಿ ಮತ್ತು ಮಹಿಳಾ ಸಬಲೀಕರಣದಂತಹ ಕೆಲಸಗಳಿಗೆ ವಿಶೇಷ ಆದ್ಯತೆ ನೀಡಲಾಗುತ್ತದೆ.
ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಮಾತನಾಡಿ, “ಯಾವುದೇ ಅರ್ಹ ಗ್ರಾಮೀಣ ಕಾರ್ಮಿಕ ಒಂದು ದಿನವೂ ಕೆಲಸದಿಂದ ವಂಚಿತನಾಗಬಾರದು ಎನ್ನುವುದೇ ಸರ್ಕಾರದ ಆದ್ಯತೆಯಾಗಿದೆ. ಸಮೃದ್ಧ ಹಳ್ಳಿಗಳ ಮೂಲಕ ವಿಕಸಿತ ಭಾರತ ನಿರ್ಮಾಣಕ್ಕೆ ಈ ಕಾಯ್ದೆ ಐತಿಹಾಸಿಕ ಹೆಜ್ಜೆಯಾಗಿದೆ ಎಂದು ತಿಳಿಸಿದ್ದಾರೆ.
Health ಪುರುಷರಲ್ಲಿ ಹೆಚ್ಚುತ್ತಿದೆ ಬಿಪಿ, ಮಧುಮೇಹ! ಎನ್ಎಫ್ಎಚ್ಎಸ್ನ ಆತಂಕಕಾರಿ ವರದಿಯಲ್ಲೇನಿದೆ?
Attendant fired ಮೀಟಿಂಗ್ನಲ್ಲಿ ಅಧಿಕಾರಿಗಳು ತಿಂದುಳಿದ ಬಿಸ್ಕತ್ ಮನೆಗೆ ತಂದ ಜವಾನ ಕೆಲಸದಿಂದಲೇ ವಜಾ!