newsics.com| ನ್ಯೂಸಿಕ್ಸ್
ಕೇಂದ್ರ ಸರ್ಕಾರದ ನಗರ ವ್ಯವಹಾರಗಳ ಸಚಿವಾಲಯದ ಸೂಚನೆಯ ಮೇರೆಗೆ ಐಐಎಸ್ಸಿಯ ಪ್ರೊ. ಆಶಿಶ್ ವರ್ಮಾ ಅವರ ನೇತೃತ್ವದ ತಂಡವು ಈ ವಿಶೇಷ ತಾಂತ್ರಿಕ ಪರಿಶೀಲನೆ ನಡೆಸಿದೆ. ಡಬಲ್ ಡೆಕ್ಕರ್ ಕಾರಿಡಾರ್ಗಳಿಂದಾಗಿ 2041ರ ವೇಳೆಗೆ ಬೆಂಗಳೂರಿನ ಸಾರಿಗೆ ವ್ಯವಸ್ಥೆ ಮತ್ತು ಪ್ರಕೃತಿಯ ಮೇಲಾಗುವ ಹಾನಿಯ ಕುರಿತು ವರದಿಯಲ್ಲಿ ಕಣ್ಣಿಗೆ ಕಟ್ಟುವಂತಹ ಮಹತ್ವದ ಅಂಶಗಳನ್ನು ಉಲ್ಲೇಖಿಸಲಾಗಿದೆ.
ಮೆಟ್ರೊ ಮಾರ್ಗದೊಂದಿಗೆ ರಸ್ತೆಗಳನ್ನು ವಿಸ್ತರಿಸುವ ಡಬಲ್ ಡೆಕ್ಕರ್ ಮಾದರಿಯು ಸಾರ್ವಜನಿಕ ಸಾರಿಗೆಯ ಮೂಲ ಆಶಯಕ್ಕೆ ಪೆಟ್ಟು ಬೀಳಲಿದೆ ಎಂದು ವರದಿ ಸ್ಪಷ್ಟಪಡಿಸಿದೆ. ಕೇವಲ ಮೆಟ್ರೊ ಮಾರ್ಗವಷ್ಟೇ ಇದ್ದರೆ 2041ರ ವೇಳೆಗೆ ನಿತ್ಯ 8.09 ಲಕ್ಷ ಜನರು ಇದರಲ್ಲಿ ಪ್ರಯಾಣಿಸಲಿದ್ದಾರೆ. ಆದರೆ ಮೇಲ್ಸೇತುವೆ ನಿರ್ಮಿಸಿದರೆ ಈ ಸಂಖ್ಯೆ 7.98 ಲಕ್ಷಕ್ಕೆ ಕುಸಿಯಲಿದೆ. ಅಂದರೆ, ರಸ್ತೆ ಸೌಲಭ್ಯ ಸಿಗುತ್ತದೆ ಎಂಬ ಕಾರಣಕ್ಕೆ ಪ್ರತಿದಿನ 11 ಸಾವಿರಕ್ಕೂ ಹೆಚ್ಚು ಪ್ರಯಾಣಿಕರು ಮೆಟ್ರೊ ಬಿಟ್ಟು ಸ್ವಂತ ವಾಹನಗಳತ್ತ ಮುಖ ಮಾಡಲಿದ್ದಾರೆ. ಇದರಿಂದ ಬಿಎಂಟಿಸಿ ಬಸ್ ಬಳಕೆ ಶೇ 6.4 ರಷ್ಟು ಮತ್ತು ಮೆಟ್ರೊ ಬಳಕೆ ಶೇ 1.4 ರಷ್ಟು ಕುಸಿಯುವ ಅಂದಾಜಿದೆ.
ಇನ್ನು, ರಸ್ತೆಯ ಸಾಮರ್ಥ್ಯ ಹೆಚ್ಚಾದಂತೆ ಜನರು ಸಾರ್ವಜನಿಕ ಸಾರಿಗೆಯನ್ನು ಬಿಟ್ಟು ಸ್ವಂತ ಕಾರು ಮತ್ತು ಬೈಕ್ಗಳನ್ನು ರಸ್ತೆಗಿಳಿಸಲು ಆರಂಭಿಸುತ್ತಾರೆ. ಐಐಎಸ್ಸಿ ಅಂದಾಜಿನ ಪ್ರಕಾರ, ಈ ಮೇಲ್ಸೇತುವೆಗಳಿಂದಾಗಿ ನಗರದಲ್ಲಿ ಕಾರುಗಳ ಬಳಕೆ ಶೇ 3.8, ಬೈಕ್ಗಳ ಓಡಾಟ ಶೇ 1.28 ಮತ್ತು ಆಟೋ/ಟ್ಯಾಕ್ಸಿಗಳ ಸಂಚಾರ ಶೇ 2.8 ರಷ್ಟು ವೃದ್ಧಿಯಾಗಲಿದೆ. ಇದು ನಗರದ ಸಂಚಾರ ದಟ್ಟಣೆಯನ್ನು ಮತ್ತಷ್ಟು ಹದಗೆಡಿಸಲಿದೆ.
ಖಾಸಗಿ ವಾಹನಗಳ ದಟ್ಟಣೆ ಹೆಚ್ಚಾಗುವುದರಿಂದ ಬೆಂಗಳೂರಿನ ಗಾಳಿಯ ಗುಣಮಟ್ಟ ತೀವ್ರವಾಗಿ ಹಾಳಾಗಲಿದೆ.
- ಕಾರ್ಬನ್ ಡೈಆಕ್ಸೈಡ್: ನಿತ್ಯ 17,012 ಕೆ.ಜಿ ಹೆಚ್ಚುವರಿ ಹೊರಸೂಸುವಿಕೆ
- ಕಾರ್ಬನ್ ಮಾನಾಕ್ಸೈಡ್: ನಿತ್ಯ 85.9 ಕೆ.ಜಿ ಹೆಚ್ಚುವರಿ ಪ್ರಮಾಣ
- ಸಾರಜನಕದ ಆಕ್ಸೈಡ್: ನಿತ್ಯ 12.6 ಕೆ.ಜಿ ಹೆಚ್ಚುವರಿ ಪ್ರಮಾಣ
- ಹೈಡ್ರೋಕಾರ್ಬನ್: ನಿತ್ಯ 19.5 ಕೆ.ಜಿ ಹೆಚ್ಚುವರಿ ಪ್ರಮಾಣ
- ಪಿಎಂ 2.5 ಧೂಳಿನ ಕಣಗಳು: ನಿತ್ಯ 1.1 ಕೆ.ಜಿ ಹೆಚ್ಚುವರಿ ಪ್ರಮಾಣ
ಆರೋಗ್ಯಕ್ಕೆ ಅತ್ಯಂತ ಹಾನಿಕಾರಕವಾಗಿರುವ ಈ ಸೂಕ್ಷ್ಮ ಧೂಳಿನ ಕಣಗಳು ಜನರಲ್ಲಿ ಉಸಿರಾಟದ ಕಾಯಿಲೆಗಳನ್ನು ಹೆಚ್ಚಿಸಲಿವೆ. ಇದರೊಂದಿಗೆ ನಗರದಲ್ಲಿ ಪ್ರತಿದಿನ 7,000 ಲೀಟರ್ ಹೆಚ್ಚುವರಿ ಇಂಧನ ವ್ಯಯವಾಗಲಿದ್ದು, ಸಾರ್ವಜನಿಕರ ಬರೋಬ್ಬರಿ 6.45 ಲಕ್ಷ ರೂಪಾಯಿ ಹಣ ನಿತ್ಯ ಇಂಧನಕ್ಕಾಗಿ ಪೋಲಾಗಲಿದೆ.
ಬೊಕ್ಕಸಕ್ಕೆ ₹2,863 ಕೋಟಿ ಹೆಚ್ಚುವರಿ ಹೊರೆ! ಆದಾಯ ದರದಲ್ಲೂ ಕುಸಿತ
ಕೇವಲ ಸಾರಿಗೆಗೆ ಮಾತ್ರವಲ್ಲದೆ ರಾಜ್ಯದ ಬೊಕ್ಕಸಕ್ಕೂ ಈ ಯೋಜನೆ ಭಾರಿ ನಷ್ಟ ತರಲಿದೆ. ಕೇವಲ ಮೆಟ್ರೊ ನಿರ್ಮಿಸುವುದಕ್ಕಿಂತ ಡಬಲ್ ಡೆಕ್ಕರ್ ಕೈಗೆತ್ತಿಕೊಂಡರೆ ಬರೋಬ್ಬರಿ 2,863 ಕೋಟಿ ರೂಪಾಯಿ ಹೆಚ್ಚುವರಿ ಬಂಡವಾಳ ಬೇಕಾಗುತ್ತದೆ. ಬೃಹತ್ ಪಿಲ್ಲರ್ಗಳು ಮತ್ತು ಬಹುಹಂತದ ನಿಲ್ದಾಣಗಳ ನಿರ್ಮಾಣ ಇದಕ್ಕೆ ಕಾರಣ. ಕೇಂದ್ರ ಸರ್ಕಾರ 2024ರಲ್ಲಿ ಈ ಯೋಜನೆಗೆ ಒಪ್ಪಿಗೆ ನೀಡಿದಾಗ ಡಬಲ್ ಡೆಕ್ಕರ್ ಇರಲಿಲ್ಲ, ಆಗ ಯೋಜನೆಯ ಆರ್ಥಿಕ ಆಂತರಿಕ ಲಾಭದ ದರವು (EIRR) ಶೇ 9.07 ರಷ್ಟಿತ್ತು. ಆದರೆ ಈಗ ಇದನ್ನು ಸೇರಿಸಿದ ಕಾರಣ ಈ ಆದಾಯದ ದರವು ಶೇ 5.43 ಕ್ಕೆ ಕುಸಿದಿದೆ. ಯಾವುದೇ ಯೋಜನೆ ಯಶಸ್ವಿಯಾಗಲು ಈ ದರ ಕುಸಿಯಬಾರದು, ಹೀಗಾಗಿ ಆರ್ಥಿಕವಾಗಿಯೂ ಇದು ನಷ್ಟದಾಯಕ ಎಂದು ವರದಿ ಹೇಳಿದೆ.
ಎಲ್ಲೆಲ್ಲಿ ನಿರ್ಮಾಣಕ್ಕೆ ಪ್ರಸ್ತಾವನೆ ಇತ್ತು?
ಮೆಟ್ರೊ 3ನೇ ಹಂತದ ಅಡಿಯಲ್ಲಿ ಜೆ.ಪಿ.ನಗರ 4ನೇ ಹಂತದಿಂದ ಹೆಬ್ಬಾಳದವರೆಗೆ ಹಾಗೂ ಹೊಸಹಳ್ಳಿಯಿಂದ ಕಡಬಗೆರೆಯವರೆಗೆ ಹೊಸ ಮಾರ್ಗಗಳು ಬರಲಿವೆ. ಇದರಲ್ಲಿ ರಾಗಿಗುಡ್ಡದಿಂದ ಸಿಲ್ಕ್ ಬೋರ್ಡ್ (ಈಗಾಗಲೇ ಸಿದ್ಧವಾಗಿದೆ), ಸರ್ಜಾಪುರದಿಂದ ಇಬ್ಬಲೂರು ಮತ್ತು ಅಗರದಿಂದ ಕೋರಮಂಗಲ ಭಾಗದಲ್ಲಿ ಡಬಲ್ ಡೆಕ್ಕರ್ ಸೇರಿಸಲು ಉದ್ದೇಶಿಸಲಾಗಿತ್ತು.
ಖಾಸಗಿ ವಾಹನಗಳಿಗೆ ಉತ್ತೇಜನ ನೀಡುವ ಇಂತಹ ಮೇಲ್ಸೇತುವೆ ಯೋಜನೆಗಳು ದೀರ್ಘಾವಧಿಯಲ್ಲಿ ಬೆಂಗಳೂರಿಗೆ ಮಾರಕವಾಗಲಿವೆ ಎಂದು ಐಐಎಸ್ಸಿ ತಿಳಿಸಿದೆ. ಹೀಗಾಗಿ ಸರ್ಕಾರ ತಕ್ಷಣವೇ ಈ ಯೋಜನೆಯನ್ನು ಮರುಪರಿಶೀಲಿಸುವುದು ಒಳಿತು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
VB G RAM G ವಿಬಿ ಜಿ ರಾಮ್ ಜಿ ಇಂದಿನಿಂದ ಜಾರಿ, ಕೂಲಿ ದಿನ, ದರ ಎಲ್ಲವೂ ಹೆಚ್ಚಳ!