newsics.com
ತಿರುವನಂತಪುರಂ: ಕೇರಳದಲ್ಲಿ ಕಾಡಾನೆಗಳ ಸಂಖ್ಯೆ ಸುಮಾರು ಶೇ.7ರಷ್ಟು ಇಳಿಕೆಯಾಗಿದ್ದು, ಪೆರಿಯಾರ್ ಮತ್ತು ನಿಲಂಬೂರ್ ಆನೆ ಮೀಸಲು ಅರಣ್ಯ(ಇಆರ್ಎಸ್)ಗಳಲ್ಲಿ ಕಾಡಾನೆ ಸಂಖ್ಯೆ ಸ್ಥಿರವಾಗಿದ್ದರೂ, ವಯನಾಡು ಮತ್ತು ಆನಮುಡಿ ಮೀಸಲು ಅರಣ್ಯಗಳಲ್ಲಿ ತೀವ್ರ ಇಳಿಕೆ ಗೋಚರಿಸಿದೆ.
ನಿಲಂಬೂರಿನಲ್ಲಿ ಶೇ.12ರಷ್ಟು ಇಳಿಕೆ ಕಂಡುಬಂದರೆ, ವಯನಾಡಿನಲ್ಲಿ ಅತ್ಯಧಿಕಕ ಅಂದರೆ ಶೇ.29ರಷ್ಟು ಪ್ರಮಾಣದಲ್ಲಿ ಕಾಡಾನೆಗಳ ಪ್ರಮಾಣ ಇಳಿಕೆಯಾಗಿದೆ.
ತಿರುವನಂತಪುರಂನಲ್ಲಿ ‘ಸಿಂಕ್ರೋನೈಸ್ಡ್ ಎಲಿೆಂಟ್ ಪಾಪ್ಯುಲೇಶನ್ ಎಸ್ಟಿಮೇಶನ್ -2024’ ವರದಿಯನ್ನು ಬಿಡುಗಡೆಗೊಳಿಸಿದ ಕೇರಳ ಅರಣ್ಯ ಸಚಿವ ಎ.ಕೆ. ಶಶೀಂದ್ರನ್ ಅವರು ಈ ಮಾಹಿತಿ ನೀಡಿದ್ದಾರೆ.
ಈ ಸಮೀಕ್ಷೆಯನ್ನು ಕರ್ನಾಟಕ, ತಮಿಳ್ನಾಡು, ಕೇರಳಗಳಲ್ಲಿ ಕಳೆದ ಮೇ 24, 25 ಮತ್ತು 26ರಂದು ಏಕಕಾಲದಲ್ಲಿ ನಡೆಸಲಾಗಿತ್ತು.
ಬ್ಲಾಕ್ ಕೌಂಟ್ ವಿಧಾನವನ್ನು ಅನುಸರಿಸಿ ಈ ಸಮೀಕ್ಷೆ ನಡೆಸಲಾಗಿದ್ದು, ಕೇರಳದಲ್ಲಿ 608 ಮಾದರಿ ಬ್ಲಾಕ್ಗಳ ಮೂಲಕ 3499.52 ಚ.ಕಿ.ಮೀ. ಪ್ರದೇಶಗಳಲ್ಲಿ ಸರ್ವೇ ಕಾರ್ಯ ನಡೆಸಲಾಯಿತು. ಆನೆಗಳ ದಟ್ಟಣೆ ಪ್ರತಿ ಚ.ಕಿ.ಮೀ.ಗೆ 0.19ರಷ್ಟಿದೆ. ಅಂತಿಮವಾಗಿ ಕೇರಳದಾದ್ಯಂತ ಒಟ್ಟೂ 1793 ಕಾಡಾನೆಗಳಿರುವುದಾಗಿ ತೀರ್ಮಾನಕ್ಕೆ ಬರಲಾಗಿದೆ.
ಈ ಸಮೀಕ್ಷೆಯ ಪ್ರಕಾರ, ಕಳೆದ ವರ್ಷಕ್ಕಿಂತ ಕಾಡಾನೆಗಳ ಸಂಖ್ಯೆ ಶೇ.6.61ರಷ್ಟು ಇಳಿಕೆಯಾಗಿದೆ. ಕಳೆದ ವರ್ಷ 1920 ಕಾಡಾನೆಗಳನ್ನು ದಾಖಲಿಸಿಕೊಳ್ಳಲಾಗಿತ್ತು.
ಆನೆಗಳ ದಟ್ಟಣೆ ಕೂಡ ಪ್ರತಿ ಚ.ಕಿ.ಮೀ.ಗೆ 0.20ರಷ್ಟಿತ್ತು. ಸ್ಥಳಾವಕಾಶದ ಕೊರತೆ, ಆಹಾರಕ್ಕಾಗಿ ಹೆಚ್ಚಿದ ಸ್ಪರ್ಧೆಗಳಿಂದಾಗಿ ಕಾಡಾನೆಗಳು ಮಾನವ ವಾಸ ಪ್ರದೇಶಗಳಿಗೆ ಲಗ್ಗೆ ಇಡುವಂತೆ ಮಾಡುತ್ತಿದೆ ಎನ್ನಲಾಗಿದೆ.
ಆದರೂ, ಕಾಡಾನೆಗಳ ಸಂಖ್ಯೆ ಕುಸಿತವಾಗಿಲ್ಲ ಎಂದಿರುವ ಸಚಿವರು, ಇದೇ ವೇಳೆ ಕಾಡ್ಗಿಚ್ಚು ಮತ್ತು ಕಾಡುಪ್ರಾಣಿಗಳ ದಾಳಿಗಳ ಬಗ್ಗೆ ಕಡೆಗಣಿಸಲಾಗದು. ನಾವು ಮಾನವ ಜೀವಗಳನ್ನು ಉಳಿಸಲು ಎಲ್ಲ ರೀತಿಯ ಕಾರ್ಯಸಾಧ್ಯತೆ ಕ್ರಮಗಳನ್ನು ಕೈಗೊಳ್ಳಲಿದ್ದೇವೆ ಎಂದಿದ್ದಾರೆ.
2015 ಮತ್ತು 2023ರ ನಡುವೆ 845ಆನೆಗಳು ಸಾವಿಗೀಡಾಗಿರುವುದನ್ನು ಕೇರಳದ ಅರಣ್ಯ ಮತ್ತು ವನ್ಯಜೀವಿ ಇಲಾಖೆಯು ದಾಖಲಿಸಿದೆ. ಆನೆಗಳ ಸಾವಿನ ಸಂಖ್ಯೆಯಲ್ಲಿ ಗಣನೀಯ ಹೆಚ್ಚಳವಾಗಿರುವುದನ್ನು ವರದಿ ಉಲ್ಲೇಖಿಸಿದೆ.