newsics.com
09.10.2024
ಏಕವೇಣೀ ಜಪಾಕರ್ಣಪೂರಾ ನಗ್ನ ಖರಾಸ್ಥಿತಾ |
ಲಂಬೋಷ್ಠೀ ಕರ್ಣಿಕಾಕರ್ಣೀ ತೈಲಾಭ್ಯಕ್ತ ಶರೀರಿಣೀ ||
ವಾಮಪಾದೋಲ್ಲಸಲ್ಲೋಹಲತಾಕಂಟಕ ಭೂಷಣಾ
ವರ್ಧನಮೂರ್ಧಧ್ವಜಾ ಕೃಷ್ಣಾ ಕಾಲರಾತ್ರಿರ್ಭಯಂಕರೀ ||
ಶರನ್ನವರಾತ್ರಿಯ ಏಳನೇ ದಿನದಂದು ತಾಯಿಯ ಸ್ವರೂಪವನ್ನು ಕಾಲರಾತ್ರಿ ಎಂದು ಕರೆಯಲಾಗುತ್ತದೆ. ದೇವಿಯ ಶರೀರದ ಬಣ್ಣವು ಗಾಢಾಂಧಕಾರದಂತೆ ಇರುತ್ತದೆ. ತನ್ನ ಜಡೆಯನ್ನು ಕಟ್ಟದೆ ಹಾಗೇ ಬಿಟ್ಟು, ಹರಡಿಕೊಂಡಿದ್ದಾಳೆ. ಇನ್ನು ಕುತ್ತಿಗೆಯಲ್ಲಿ ಫಳಫಳನೆ ಹೊಳೆಯುತ್ತಿರುವ ಮಾಲೆ ಇದೆ. ಹಾಗೂ ಈ ತಾಯಿಗೆ ಮೂರು ಕಣ್ಣುಗಳಿವೆ. ಈ ಕಣ್ಣುಗಳು ಬ್ರಹ್ಮಾಂಡದ ರೀತಿಯಲ್ಲಿ ಗೋಲಾಕಾರದಲ್ಲಿ ಇವೆ. ಕಾಲರಾತ್ರಿ ಉಸಿರನ್ನು ಬಿಡುವಾಗ ಹಾಗೂ ತೆಗೆದುಕೊಳ್ಳುವಾಗ ಬೆಂಕಿಯ ಧಗಧಗಿಸುವ ಜ್ವಾಲೆಗಳು ಹೊರಬರುತ್ತವೆ. ಆ ತಾಯಿಯ ವಾಹನವು ಕತ್ತೆ ಆಗಿದೆ. ತನ್ನ ಬಲಗೈಯ ಮೇಲ್ಭಾಗದ ವರಮುದ್ರೆಯಿಂದ ಸಕಲರಿಗೂ ವರ ನೀಡುತ್ತಿದ್ದು, ಬಲಗೈ ಕೆಳಭಾಗ ಅಭಯ ಮುದ್ರೆಯನ್ನು ಹೊಂದಿದೆ. ಇನ್ನು ಆ ಜಗಜ್ಜನನಿಯ ಎಡಭಾಗದ ಮೇಲಿನ ಕೈಯಲ್ಲಿ ಕಬ್ಬಿಣದ ಮುಳ್ಳು ಇದ್ದರೆ, ಕೆಳಗಿನ ಕೈಯಲ್ಲಿ ಖಡ್ಗ ಇದೆ.
ಈಗಾಗಲೇ ನೀಡಿರುವ ವಿವರಣೆಯಿಂದಲೇ ಖಚಿತವಾಗುತ್ತದೆ, ಕಾಲರಾತ್ರಿಯ ಸ್ವರೂಪದಲ್ಲಿ ದುರ್ಗೆಯು ಭಯಂಕರವಾಗಿ ಕಾಣುತ್ತಾಳೆ. ಆದರೆ ಫಲವನ್ನು ನೀಡುವ ವಿಚಾರಕ್ಕೆ ಬಂದಲ್ಲಿ ಸದಾ ಶುಭಫಲಗಳನ್ನೇ ನೀಡುವವಳಾಗಿದ್ದಾಳೆ. ಆದ್ದರಿಂದ ಆಕೆಯನ್ನು ಶುಭಂಕರೀ ಎಂದೂ ಕರೆಯಲಾಗುತ್ತದೆ. ಭಕ್ತರು ಅಥವಾ ಆರಾಧಕರು ತಾಯಿಯ ಸ್ವರೂಪಕ್ಕೆ ಹೆದರುವ ಅಗತ್ಯವೇ ಇಲ್ಲ.
ನವರಾತ್ರಿಯ ಏಳನೇ ದಿನ ಕಾಲರಾತ್ರಿಯ ಆರಾಧನೆ ಮಾಡುವುದರೊಂದಿಗೆ ಆರಾಧಕರಿಗೆ ಎದುರಾಗುವ, ಎದುರಾಗಿರುವ ಸಕಲ ಪಾಪ, ಅಡೆ-ತಡೆಗಳು ನಾಶವಾಗುತ್ತವೆ. ಅಕ್ಷಯವಾದಂಥ, ಅಂದರೆ ಕೊನೆಯೇ ಇಲ್ಲದಂಥ ಪುಣ್ಯಫಲಗಳು ದೊರೆಯುತ್ತವೆ.
ಕಾಲರಾತ್ರಿ ದೇವಿ ಕೂಡ ದುಷ್ಟರು, ರಾಕ್ಷಸರನ್ನು ನಾಶ ಮಾಡುತ್ತಾಳೆ. ಈ ದೇವಿಯ ಸ್ಮರಣೆ ಮಾತ್ರದಿಂದಲೇ ಭೂತ- ಪ್ರೇತ, ರಾಕ್ಷಸರು ಮೊದಲಾದ ದುಷ್ಟ ಸಮಸ್ಯೆಗಳು ಕರಗಿ ಹೋಗುತ್ತವೆ. ತಾಯಿಯ ಸ್ಮರಣೆಯಿಂದಾಗಿ ಗ್ರಹಬಾಧೆಗಳು ಕೂಡ ದೂರವಾಗುತ್ತವೆ.
ಯಾರು ಶ್ರದ್ಧಾ-ಭಕ್ತಿಯಿಂದ ಕಾಲರಾತ್ರಿ ದೇವಿಯನ್ನು ಆರಾಧನೆ ಮಾಡುತ್ತಾರೋ ಅಂಥವರಿಗೆ ಬೆಂಕಿಯಿಂದ ಎದುರಾಗುವ ಆತಂಕ, ನೀರಿನಿಂದ ಎದುರಾಗುವ ಬಾಧೆಗಳು, ಪ್ರಾಣಿ- ಪಕ್ಷಿ, ಕ್ರಿಮಿ- ಕೀಟಗಳಿಂದ ಎದುರಾಗಬಹುದಾದ ಬಾಧೆಗಳು ಸಹ ದೂರವಾಗುತ್ತವೆ. ಇನ್ನು ಯಾವುದೇ ಭಯಗಳು ಇಲ್ಲದೆ ಸದಾ ಉಲ್ಲಸಿತರಾಗಿ, ಆಧ್ಯಾತ್ಮಿಕ ಸಂತೋಷದಿಂದ ಇರಬಹುದಾಗಿದೆ.
ಕಾಲರಾತ್ರಿಯು ಇದೇ ಸ್ವರೂಪದಲ್ಲೇ ಶುಂಭ, ನಿಶುಂಭರೆಂಬ ಕ್ರೂರಿ ರಾಕ್ಷಸರನ್ನು ನಾಶ ಮಾಡಿದ್ದು. ಆದ್ದರಿಂದ ಆ ದೇವಿಯನ್ನು ತಾಯಿಯಂತೆ ಕಂಡು ಆರಾಧನೆ ಮಾಡಿದಲ್ಲಿ ಎಲ್ಲ ಪಾಪ ವಿನಾಶವಾಗುತ್ತದೆ. ಶತ್ರುಗಳು ಇಲ್ಲದಂತಾಗುತ್ತಾರೆ, ಪಾಪದಿಂದ ಮುಕ್ತರಾಗುತ್ತೇವೆ.
Dasara Special | ಸೌಭಾಗ್ಯ ನೀಡುವ ಕಾತ್ಯಾಯಿನಿ: ನವರಾತ್ರಿ ಆರನೇ ದಿನ
Dasara Special | ಯಶಸ್ಸು ಕರುಣಿಸುವ ಕೂಷ್ಮಾಂಡಾ: ನವರಾತ್ರಿ ನಾಲ್ಕನೇ ದಿನ