newsics.com | ನ್ಯೂಸಿಕ್ಸ್
ನವದೆಹಲಿ: ನೀಟ್ ಅಕ್ರಮ ಖಂಡಿಸಿ ಹಾಗೂ ಧರಣಿ ನಿರತ ವಿದ್ಯಾರ್ಥಿಗಳ ಮೇಲಿನ ದೌರ್ಜನ್ಯ ವಿರೋಧಿಸಿ ವಿಪಕ್ಷ ನಾಯಕರು ಕೇಂದ್ರ ಸರ್ಕಾರದ ವಿರುದ್ಧ ಸಮರ ಸಾರಿದ್ದಾರೆ. ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಸಾರಥ್ಯದಲ್ಲಿ ಪ್ರಮುಖ ನಾಯಕರು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಅಧಿಕೃತ ನಿವಾಸದ ಬಳಿ ಬೃಹತ್ ಪ್ರತಿಭಟನೆ ನಡೆಸಿ, ಪೊಲೀಸರ ವಶವಾಗಿದ್ದಾರೆ.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ನಿವಾಸದಲ್ಲಿ ಸಭೆ ಸೇರಿದ ಬಳಿಕ, ನಾಯಕರೆಲ್ಲರೂ ಒಟ್ಟಾಗಿ ಪ್ರಧಾನಿ ನಿವಾಸದ ಕಡೆಗೆ ನಡೆದರು. ಎಸ್ಪಿ ಅಧಿನಾಯಕ ಅಖಿಲೇಶ್ ಯಾದವ್, ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ, ಕರ್ನಾಟಕದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಕೇರಳದ ವಿ.ಡಿ. ಸತೀಶನ್ ಮತ್ತು ಎನ್ಸಿಪಿ ನಾಯಕಿ ಸುಪ್ರಿಯಾ ಸುಳೆ ಸೇರಿದಂತೆ ಹಲವು ಹಿರಿಯ ನಾಯಕರು ರಸ್ತೆಯಲ್ಲೇ ಕುಳಿತು ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದರು. ಪ್ರಧಾನಿ ಮೋದಿ, ಅಮಿತ್ ಶಾ ಹಾಗೂ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಆಗ್ರಹಿಸಿದರು.
ಇನ್ನು, ಪ್ರತಿಭಟನೆಯನ್ನು ತಕ್ಷಣವೇ ಹತ್ತಿಕ್ಕಲು ಬರುವ ಪೊಲೀಸರಿಂದ ರಕ್ಷಣೆ ಪಡೆಯಲು ವಿಪಕ್ಷ ನಾಯಕರು ವಿಭಿನ್ನ ತಂತ್ರ ಹೂಡಿದ್ದರು. ಪರಸ್ಪರ ಕೈಗಳನ್ನು ‘ಜಿಪ್-ಟೈ’ನಿಂದ ಬಂಧಿಸಿಕೊಂಡು ಜಂಟಿಯಾಗಿ ಧರಣಿ ಮುಂದುವರಿಸಿದರು. “ವಿದ್ಯಾರ್ಥಿಗಳ ಮೇಲಿನ ದಾಳಿಯು ಪ್ರತಿಯೊಂದು ಭಾರತೀಯ ಕುಟುಂಬದ ಮೇಲಿನ ದಾಳಿ” ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿ ದೇಶದ ಜನರ ಬೆಂಬಲ ಕೋರಿದರು.
ಸನ್ನಿವೇಶ ತಿಳಿಗೊಳಿಸಲು ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಹಾಗೂ ಗೃಹ ಕಾರ್ಯದರ್ಶಿ ಸ್ಥಳಕ್ಕೆ ಧಾವಿಸಿ ಚರ್ಚಿಸಿದರೂ ಪ್ರಯೋಜನವಾಗಲಿಲ್ಲ. ಸಂಸತ್ತಿನಲ್ಲಿ ಚರ್ಚೆಗೆ ಒಪ್ಪಿಗೆ ನೀಡಿದರೂ, ವಿಪಕ್ಷಗಳು ಶಿಕ್ಷಣ ಸಚಿವರ ರಾಜೀನಾಮೆಗೆ ಪಟ್ಟು ಹಿಡಿದವು. ಅಂತಿಮವಾಗಿ ಭದ್ರತಾ ಸಿಬ್ಬಂದಿ ಬ್ಯಾರಿಕೇಡ್ಗಳನ್ನು ಅಳವಡಿಸಿ, 2 ಗಂಟೆಗಳ ಕಾಲ ನಡೆದ ಪ್ರತಿಭಟನೆಯನ್ನು ಅಂತ್ಯಗೊಳಿಸಿ ನಾಯಕರನ್ನು ಬಂಧಿಸಿದರು.
Nandamuri Balakrishna ಶೂಟಿಂಗ್ ಸೆಟ್ನಲ್ಲಿ ಅವಘಡ: ‘ನಟಸಿಂಹ’ ಬಾಲಕೃಷ್ಣ ಮೊಣಕಾಲಿಗೆ ಗಾಯ, ಆಸ್ಪತ್ರೆಗೆ ದಾಖಲು