newsics.com
07.10.2024
ಸಿಂಹಾಸನ ಗತಾನಿತ್ಯಂ
ಪದ್ಮಾಶ್ರಿತ ಕರದ್ವಯಾ |
ಶುಭದಾಸ್ತು ಸದಾದೇವೀ
ಸ್ಕಂದಮಾತಾ ಯಶಸ್ವಿನೀ||
ಈ ತಾಯಿಯ ಸ್ವರೂಪ ಈ ದಿನ ಹೇಗಿರುತ್ತದೆ ಅಂದರೆ, ಸ್ಕಂದನು ಬಾಲರೂಪದಲ್ಲಿ ಆಕೆಯ ತೊಡೆಯ ಮೇಲೆ ಕುಳಿತಿರುತ್ತಾನೆ. ತಾಯಿಗೆ ಈ ರೂಪದಲ್ಲಿ ನಾಲ್ಕು ಭುಜಗಳು. ಬಲಗಡೆಯ ಮೇಲಿನ ಕೈಯಿಂದ ಸ್ಕಂದನನ್ನು ಹಿಡಿದಿದ್ದಾಳೆ. ಬಲಗಡೆಯ ಇನ್ನೊಂದು ಕೈಯಲ್ಲಿ ಕಮಲದ ಪುಷ್ಪವನ್ನು ಹಿಡಿದುಕೊಂಡಿದ್ದಾಳೆ. ಇನ್ನು ಎಡಗಡೆಯ ಮೇಲಿನ ಕೈಯಲ್ಲಿ ವರಮುದ್ರೆ ಇದ್ದು, ಎಡಗಡೆಯ ಮತ್ತೊಂದು ಕೈಯಲ್ಲಿ ಕಮಲವನ್ನೇ ಹಿಡಿದಿದ್ದಾಳೆ.
ಸ್ಕಂದಮಾತಾ ಕಮಲದ ಹೂವಿನ ಆಸನದ ಮೇಲೆ ವಿರಾಜಮಾನಳಾಗಿದ್ದಾಳೆ. ಈ ಕಾರಣಕ್ಕೆ ದೇವಿಯನ್ನು ಪದ್ಮಾಸನಾದೇವಿ ಅಂತಲೂ ಕರೆಯಲಾಗುತ್ತದೆ. ಆಕೆಯ ವಾಹನ ಸಿಂಹವಾಗಿದೆ. ಆರಾಧನೆ ಮಾಡುವವರು ಈ ದಿನ ಮನಸ್ಸನ್ನು ನಿಯಂತ್ರಣದಲ್ಲಿ ಇರಿಸಿಕೊಳ್ಳುವುದು ಬಹಳ ಮುಖ್ಯ. ಯಾವುದೇ ಕಾರಣದಿಂದಲೂ ಏಕಾಗ್ರತೆ ಕಳೆದುಕೊಳ್ಳಬಾರದು. ಸ್ಕಂದಮಾತಾ ಸ್ವರೂಪದಲ್ಲಿ ದೇವಿಯ ಆರಾಧನೆ ಮಾಡಿದಾಗ ಮನಸ್ಸಿನ ಕೋರಿಕೆಗಳು ಈಡೇರುತ್ತವೆ. ಶಾಂತಿ, ನೆಮ್ಮದಿ ದೊರೆಯುತ್ತದೆ. ಸ್ಕಂದಮಾತಾ ಆರಾಧನೆಯ ವಿಶೇಷ ಏನೆಂದರೆ, ತಾಯಿಯ ಕೈಂಕರ್ಯದ ಜತೆಜತೆಗೆ ಬಾಲರೂಪಿಯಾದ ಸ್ಕಂದನ ಆರಾಧನೆ ಸಹ ಮಾಡಿದಂತಾಗುತ್ತದೆ. ಈ ದೇವಿಯ ಆರಾಧಿಸುವವರಲ್ಲಿ ಅಲೌಕಿಕವಾದ ತೇಜಸ್ಸು ಹಾಗೂ ಕಾಂತಿಯೊಂದು ಇರುತ್ತದೆ.
ಮಕ್ಕಳು ಇಲ್ಲದ ದಂಪತಿ- ಸಂತಾನವನ್ನು ಪಡೆಯುವ ಬಯಕೆ ಇರುವಂಥವರು ಈ ಶರನ್ನವರಾತ್ರಿಯ ಐದನೇ ದಿನದಂದು ಈ ವ್ರತ ಆಚರಿಸಬೇಕು. ಇದನ್ನು ಮಾಡುವುದರಿಂದ ಆ ಜಗಜ್ಜನನಿಯ ಆಶೀರ್ವಾದ ಸಿಗುತ್ತದೆ ಎಂಬ ನಂಬಿಕೆ ಇದೆ. ಶುಭ್ರವಾದ ಬಟ್ಟೆ ಧರಿಸಿ, ಸ್ಕಂದಮಾತೆಗೆ ಬಾಳೆಹಣ್ಣು ಮತ್ತು ಅದರಿಂದ ಮಾಡಿದ ವಸ್ತುಗಳನ್ನು ಅರ್ಪಿಸಬೇಕು. ಇದರಿಂದ ಆ ತಾಯಿ ಸಂತುಷ್ಟಳಾಗುತ್ತಾಳೆ.
ಪೌರಾಣಿಕ ಹಿನ್ನೆಲೆ: ಪುರಾಣದ ಹಿನ್ನೆಲೆಯಂತೆ, ತಾರಕಾಸುರನೆಂಬ ರಾಕ್ಷಸನು ಬ್ರಹ್ಮದೇವರನ್ನು ಕುರಿತು ತಪಸ್ಸು ಮಾಡಿದ. ತಪಸ್ಸಿಗೆ ಒಲಿದ ಬ್ರಹ್ಮನು ತಾರಕಾಸುರನಿಗೆ ಅಮರತ್ವದ ವರ ನೀಡಿದ. ಆದರೂ ಬ್ರಹ್ಮನು ತಾರಕಾಸುರನಿಗೆ, ಜನ್ಮ ಪಡೆದವರು ಮರಣವನ್ನು ಅಪ್ಪಲೇಬೇಕು ಎಂದು ವಿವರಿಸಿದ. ಆಗ ತಾರಕಾಸುರನು, ಶಿವನ ಮಗನಿಂದ ತನಗೆ ಸಾವಾಗಲಿ ಎಂದು ಕೇಳಿಕೊಂಡ. ಏಕೆಂದರೆ ಶಿವನು ಎಂದಿಗೂ ಮದುವೆ ಆಗುವುದಿಲ್ಲ ಮತ್ತು ಮದುವೆಯಾದರೂ ಮಗನು ಜನಿಸುವುದಿಲ್ಲ ಎಂದು ರಾಕ್ಷಸನು ಭಾವಿಸಿದ್ದ.
ಬ್ರಹ್ಮನಿಂದ ವರವನ್ನು ಪಡೆದುಕೊಂಡ ನಂತರದಲ್ಲಿ ತಾರಕಾಸುರನು ಅಮಾಯಕ ಜನರಿಗೆ ಹಿಂಸೆ ಮಾಡಲಾರಂಭಿಸಿದ. ಆ ಜನರು ಶಿವನ ಬಳಿಗೆ ಹೋಗಿ, ತಾರಕಾಸುರನ ವಧೆಗಾಗಿ ಪ್ರಾರ್ಥಿಸಿದರು. ಆ ನಂತರದಲ್ಲಿ ಶಿವನು ಪಾರ್ವತಿಯನ್ನು ವಿವಾಹವಾದ ಹಾಗೂ ಕಾರ್ತಿಕೇಯ ಜನಿಸಿದ. ಕಾರ್ತಿಕೇಯ ಬೆಳೆದ ಮೇಲೆ ರಾಕ್ಷಸನಾದ ತಾರಕಾಸುರನನ್ನು ಕೊಂದ. ಅಂಥ ಸ್ಕಂದನಿಗೆ ತಾಯಿಯಾದ್ದರಿಂದ ಕಾರ್ತಿಕೇಯನು ಅವಳನ್ನು ಸ್ಕಂದಮಾತಾ ಎಂದು ಕರೆದ.
Dasara Special | ಯಶಸ್ಸು ಕರುಣಿಸುವ ಕೂಷ್ಮಾಂಡಾ: ನವರಾತ್ರಿ ನಾಲ್ಕನೇ ದಿನ