newsics.com | ನ್ಯೂಸಿಕ್ಸ್
ಶ್ರೀನಗರ: ಜಮ್ಮು-ಕಾಶ್ಮೀರದಲ್ಲಿ ಉಗ್ರರ ವಿರುದ್ಧ ಮುಂದುವರಿದಿರುವ ಹೋರಾಟದಲ್ಲಿ ಭಾರತೀಯ ಸೇನೆಗೆ ಯಶಸ್ಸು ಸಿಕ್ಕಿದೆ. ಶೋಪಿಯಾನ್ ಜಿಲ್ಲೆಯಲ್ಲಿ ನಡೆದ ಭೀಕರ ಗುಂಡಿನ ಚಕಮಕಿಯಲ್ಲಿ ಲಷ್ಕರ್-ಎ-ತೊಯ್ಬಾ (LeT) ಉಗ್ರ ಸಂಘಟನೆಯ ಮುಖ್ಯ ಕಮಾಂಡರ್ ಝಕೀರ್ ಗನಾಯಿಯನ್ನು ಭದ್ರತಾ ಪಡೆಗಳು ಹೊಡೆದುರುಳಿಸಿವೆ.
ರಹಸ್ಯ ಕಾರ್ಯಾಚರಣೆ ವೇಳೆ ಗುಂಡಿನ ದಾಳಿ
ಶೋಪಿಯಾನ್ ಪ್ರದೇಶದಲ್ಲಿ ಲಷ್ಕರ್ ಉಗ್ರರು ಅಡಗಿಕೊಂಡಿದ್ದಾರೆ ಎಂಬ ಮಾಹಿತಿ ಸೇನೆಗೆ ಸಿಕ್ಕಿತ್ತು. ಈ ಹಿನ್ನೆಲೆಯಲ್ಲಿ ಜಮ್ಮು-ಕಾಶ್ಮೀರ ಪೊಲೀಸರು ಮತ್ತು ರಕ್ಷಣಾ ಪಡೆಗಳು ಜಂಟಿಯಾಗಿ ಶೋಧ ಕಾರ್ಯ ಆರಂಭಿಸಿದ್ದರು. ಈ ವೇಳೆ ಅಡಗಿದ್ದ ಉಗ್ರರು ಸೇನೆಯ ಮೇಲೆ ಏಕಾಏಕಿ ಗುಂಡಿನ ದಾಳಿ ನಡೆಸಿದ್ದಾರೆ. ತಕ್ಷಣವೇ ಅಲರ್ಟ್ ಆದ ಭಾರತೀಯ ಸೇನೆ ನಡೆಸಿದ ಆಪರೇಷನ್ನಲ್ಲಿ ಮೋಸ್ಟ್ ವಾಂಟೆಡ್ ಉಗ್ರ ಝಕೀರ್ ಗನಾಯಿ ಹತನಾಗಿದ್ದಾನೆ.
ಲಷ್ಕರ್ ಸಂಘಟನೆಗೆ ದೊಡ್ಡ ಹೊಡೆತ
ಹತನಾದ ಉಗ್ರ ಝಕೀರ್ ಗನಾಯಿ ಕಾಶ್ಮೀರದಲ್ಲಿ ಹಲವು ಉಗ್ರ ಕೃತ್ಯಗಳನ್ನು ನಡೆಸಿದ್ದನು. ಸಾರ್ವಜನಿಕರ ಮೇಲೆ ದಾಳಿ ಮಾಡುವುದು ಹಾಗೂ ಸ್ಥಳೀಯ ಯುವಕರನ್ನು ಉಗ್ರ ಸಂಘಟನೆಗೆ ಸೇರಿಸುವ ಕೆಲಸದಲ್ಲಿ ಈತ ಭಾಗಿಯಾಗಿದ್ದ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಈತನ ಹತ್ಯೆಯಿಂದ ಲಷ್ಕರ್ ಸಂಘಟನೆಗೆ ದೊಡ್ಡ ಆಘಾತ ಎದುರಾಗಿದೆ. ಸದ್ಯ ಇಡೀ ಪ್ರದೇಶವನ್ನು ಹೈ ಅಲರ್ಟ್ನಲ್ಲಿ ಇಡಲಾಗಿದ್ದು, ಅಡಗಿರುವ ಇತರ ಉಗ್ರರಿಗಾಗಿ ಸೇನೆಯ ತಲಾಶ್ ಮುಂದುವರಿದಿದೆ.