newsics.com | ನ್ಯೂಸಿಕ್ಸ್
ಹಾಸನ: ಹಾಸನ ಜಿಲ್ಲೆಯ ಕರಾವಳಿ ಗಡಿ ಭಾಗ ಹಾಗೂ ಘಟ್ಟ ಪ್ರದೇಶಗಳಲ್ಲಿ ವರುಣನ ಆರ್ಭಟ ತೀವ್ರಗೊಂಡಿದೆ. ಮಳೆಯ ತೀವ್ರತೆಗೆ ಬೆಂಗಳೂರು-ಮಂಗಳೂರು ಸಂಪರ್ಕದ ಪ್ರಮುಖ ಹೆದ್ದಾರಿಯಾಗಿರುವ NH-75ರ ಶಿರಾಡಿ ಘಾಟ್ ವ್ಯಾಪ್ತಿಯಲ್ಲಿ ಮತ್ತೆ ಭೂಕುಸಿತದ ಆತಂಕ ಶುರುವಾಗಿದೆ.
ದೊಡ್ಡತಪ್ಲು ಹತ್ತಿರದ ಗುಡ್ಡದ ತಡೆಗೋಡೆ ಕೆಲಸ ಇನ್ನೂ ಮುಗಿಯದ ಕಾರಣ, ಸುಮಾರು 200 ಮೀಟರ್ಗಿಂತಲೂ ಅಧಿಕ ದೂರದವರೆಗೂ ಹೆದ್ದಾರಿಯ ಬದಿಯ ಮಣ್ಣು ಸಡಿಲಗೊಂಡು ಕೆಳಗೆ ಜರಗುತ್ತಿದೆ. ಆದರೆ, ಸದ್ಯಕ್ಕೆ ಹೆದ್ದಾರಿಯ ಪರ್ಯಾಯ ಪಥವು ಸುಸ್ಥಿತಿಯಲ್ಲೇ ಇರುವುದರಿಂದ ವಾಹನ ಸವಾರರ ಓಡಾಟಕ್ಕೆ ಯಾವುದೇ ಅಡ್ಡಿಯಾಗಿಲ್ಲ. ಒಂದೇ ಪಥದಲ್ಲಿ ಸಂಚಾರ ನಿಯಂತ್ರಿಸಲಾಗುತ್ತಿದ್ದು, ಮಳೆ ಹೀಗೆಯೇ ಸುರಿದರೆ ಅಪಾಯ ಹೆಚ್ಚಾಗಬಹುದು ಎಂಬ ಕಾರಣಕ್ಕೆ ಹೆದ್ದಾರಿ ಪ್ರಾಧಿಕಾರ ಹಾಗೂ ರಕ್ಷಣಾ ಪಡೆಗಳು ಜಂಟಿಯಾಗಿ ನಿಗಾ ವಹಿಸಿವೆ.
ಇನ್ನು, ಮಲೆನಾಡು ಭಾಗದ ಜಲಮೂಲಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿರುವುದರಿಂದ ಸಕಲೇಶಪುರ ತಹಶೀಲ್ದಾರ್ ಅವರು ತುರ್ತು ನಿಷೇಧಾಜ್ಞೆ ಹೊರಡಿಸಿದ್ದಾರೆ. ಜನರ ಜೀವ ರಕ್ಷಣೆಯ ದೃಷ್ಟಿಯಿಂದ ತಾಲೂಕಿನ ವ್ಯಾಪ್ತಿಗೆ ಬರುವ ಎಲ್ಲಾ ನದಿಗಳು, ಪ್ರೇಕ್ಷಣೀಯ ಜಲಪಾತಗಳು, ಜಲಾಶಯಗಳು ಹಾಗೂ ಟ್ರೆಕ್ಕಿಂಗ್ ಮಾಡುವ ಗುಡ್ಡಗಾಡು ಪ್ರದೇಶಗಳಿಗೆ ಸಾರ್ವಜನಿಕರು ಮತ್ತು ಪ್ರವಾಸಿಗರು ಭೇಟಿ ನೀಡುವುದನ್ನು ಮುಂದಿನ ಆದೇಶ ಬರುವವರೆಗೂ ಕಡ್ಡಾಯವಾಗಿ ನಿರ್ಬಂಧಿಸಲಾಗಿದೆ.
ಅಲ್ಲದೆ, ಈ ಹೊಸ ನಿಯಮದ ಪ್ರಕಾರ, ಪ್ರವಾಸಿಗರು ಅಥವಾ ಸ್ಥಳೀಯರು ನಿಷೇಧಿತ ವಲಯಗಳಿಗೆ ಹೋಗುವುದು ಶಿಕ್ಷಾರ್ಹ ಅಪರಾಧವಾಗಿದೆ. ತಾಲೂಕಿನ ಹೋಂ ಸ್ಟೇ ಹಾಗೂ ರೆಸಾರ್ಟ್ ಮಾಲೀಕರು ತಮ್ಮಲ್ಲಿ ತಂಗುವ ಪ್ರವಾಸಿಗರಿಗೆ ಯಾವುದೇ ಕಾರಣಕ್ಕೂ ಕಾಡು ಅಥವಾ ಗುಡ್ಡಗಳಲ್ಲಿ ಟ್ರೆಕ್ಕಿಂಗ್ ಮಾಡಲು ಅನುಮತಿ ನೀಡಬಾರದು ಎಂದು ತಾಕೀತು ಮಾಡಲಾಗಿದೆ. ನಿಯಮ ಉಲ್ಲಂಘಿಸಿ ಏನಾದರೂ ಅನಾಹುತ ನಡೆದರೆ ಮಾಲೀಕರನ್ನೇ ಹೊಣೆ ಮಾಡಿ, ಪ್ರಕೃತಿ ವಿಕೋಪ ನಿರ್ವಹಣಾ ಕಾಯ್ದೆ 2005 ಹಾಗೂ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ (BNSS) ಅಡಿಯಲ್ಲಿ ಕ್ರಿಮಿನಲ್ ಮೊಕದ್ದಮೆ ಹೂಡಲಾಗುವುದು ಎಂದು ಜಿಲ್ಲಾಡಳಿತ ಖಡಕ್ ವಾರ್ನಿಂಗ್ ನೀಡಿದೆ.
Gold Price ಚಿನ್ನ ಖರೀದಿದಾರರಿಗೆ ಗುಡ್ ನ್ಯೂಸ್: ಸತತ 4ನೇ ದಿನವೂ ಇಳಿಕೆ ಕಂಡ ಬಂಗಾರದ ಬೆಲೆ