newsics.com
ಮೈಸೂರು: ಅರಮನೆ ನಗರಿ ಮೈಸೂರಿನಲ್ಲಿ ಇಂದು ಶನಿವಾರ(ಅ.12) ವಿಶ್ವವಿಖ್ಯಾತ ಮೈಸೂರು ದಸರಾದ ಅದ್ಧೂರಿ ಜಂಬೂಸವಾರಿ ಮೆರವಣಿಗೆ ನಡೆಯಲಿದೆ. ನವರಾತ್ರಿಯ ಕೊನೆಯ ದಿನ ವಿಜಯದಶಮಿಯಂದು ಈ ಐತಿಹಾಸಿಕ ಮೆರವಣಿಗೆ ನಡೆಯುವುದು ಪದ್ಧತಿ.
ಶನಿವಾರ ಬೆಳಗ್ಗೆ 9.45ಕ್ಕೆ ಪೂಜಾ ವಿಧಾನಗಳು ಆರಂಭವಾಗಲಿವೆ. ಈ ಸಂದರ್ಭದಲ್ಲಿ ಪಟ್ಟದ ಆನೆ, ಪಟ್ಟದ ಕುದುರೆ, ಪಟ್ಟದ ಹಸುವಿನೊಂದಿಗೆ ದೇವರನ್ನು ಅರಮನೆಗೆ ಕರೆತರಲಾಗುತ್ತದೆ. ಬೆಳಗ್ಗೆ 10.15ಕ್ಕೆ ಉತ್ತರ ಪೂಜೆಯ ಬಳಿಕ ಆನೆ ಬಾಗಿಲಿನ ಮುಂಭಾಗದಲ್ಲಿ ಜಟ್ಟಿ ಕಾಳಗ ನಡೆಯಲಿದೆ.
11.20ರಿಂದ 11.45ರವರೆಗೆ ಆನೆ ಬಾಗಿಲನ ಮೂಲಕ ವಿಜಯಯಾತ್ರೆ ಹೊರಡುವ ಕನ್ನಡಾಂಬೆ ದೇವಾಲಯದ ಒಳಭಾಗದಲ್ಲಿರುವ ಬನ್ನಿ ಮರಕ್ಕೆ ಯದುವೀರ್ ಪೂಜೆ ಸಲ್ಲಿಸಲಿದ್ದಾರೆ. ಇದಾದ ಬಳಿಕ ರಾಜವಂಶಸ್ಥರು ಮನೆಗೆ ಮರಳುವ ಮೂಲಕ ನವರಾತ್ರಿಯ 10 ದಿನದ ಧಾರ್ಮಿಕ ಕಾರ್ಯಗಳು ಪೂರ್ಣಗೊಳ್ಳಲಿವೆ.
ಮಧ್ಯಾಹ್ನ 1.44ರಿಂದ 2.10ರ ಶುಭ ಮಕರ ಲಗ್ನದಲ್ಲಿ ಅರಮನೆ ಬಲರಾಮ ದ್ವಾರದ ಕೋಟೆ ಆಂಜನೇಯ ದೇವಾಲಯದ ಬಳಿ ನಂದಿಧ್ವಜಕ್ಕೆ ಮುಖ್ಯಮಂತ್ರಿ ಹಾಗೂ ಗಣ್ಯರು ಪೂಜೆ ಸಲ್ಲಿಸಿದ ಬಳಿಕ ವಿಜಯದಶಮಿ ಮೆರವಣಿಗೆಗೆ ಚಾಲನೆ ದೊರೆಯುತ್ತದೆ. ಆ ಬಳಿಕ ನಾಡಿನ ಕಲೆ, ಸಂಸ್ಕೃತಿ ಸೇರಿದಂತೆ ವಿವಿಧ ಇಲಾಖೆಗಳ ಪ್ರಗತಿ ಬಿಂಬಿಸುವ ಸುಮಾರು 51 ಸ್ತಬ್ಧಚಿತ್ರಗಳು ಹಾಗೂ ಕಲಾ ತಂಡಗಳ ಮೆರವಣಿಗೆ ನಡೆಯಲಿದೆ.
ಸಂಜೆ 4 ಗಂಟೆಯಿಂದ 4.30ರೊಳಗಿನ ಶುಭ ಕುಂಭಲಗ್ನದಲ್ಲಿ ಸಿಎಂ ಸಿದ್ದರಾಮಯ್ಯ ಹಾಗೂ ಇತರ ಗಣ್ಯರು 750 ಕೆ.ಜಿ ತೂಕದ ಚಿನ್ನದ ಅಂಬಾರಿಯಲ್ಲಿರುವ ಸರ್ವಾಲಂಕಾರಭೂಷಿತೆ ನಾಡಿನ ಅಧಿದೇವತೆ ಚಾಮುಂಡೇಶ್ವರಿಗೆ ಪುಷ್ಪಾರ್ಚನೆ ಮಾಡುತ್ತಾರೆ. ಇದರೊಂದಿಗೆ ಜಂಬೂಸವಾರಿ ಪ್ರಾರಂಭವಾಗುತ್ತದೆ.
ಚಿನ್ನದ ಅಂಬಾರಿ ಹೊತ್ತ ಅಭಿಮನ್ಯು ಆನೆಯೊಂದಿಗೆ ಗಜಪಡೆ ಅರಮನೆಯಿಂದ ಬನ್ನಿಮಂಟಪದವರೆಗೆ ಸುಮಾರು 5 ಕಿ.ಮೀಗೂ ಹೆಚ್ಚು ದೂರ ಸಾಗಲಿದೆ. ಮೆರವಣಿಗೆಯಲ್ಲಿ ಆಕರ್ಷಕ ಸ್ತಬ್ದಚಿತ್ರಗಳು, ಕಲಾತಂಡಗಳ ಜೊತೆಗೆ ಕರ್ನಾಟಕ ಪೊಲೀಸ್ ವಾದ್ಯ ತಂಡ, ಅಶ್ವದಳ, ಎನ್.ಸಿ.ಸಿ, ಕೆಎಸ್ಆರ್ಪಿ ತುಕಡಿಗಳು ಇರಲಿವೆ.
ಜಂಬೂಸವಾರಿ ಮೆರವಣಿಗೆ ಅರಮನೆಯಿಂದ ಹೊರಟು ಅರಮನೆಯ ಉತ್ತರ ದ್ವಾರ, ಕೆ.ಆರ್.ಸರ್ಕಲ್, ಸಯ್ಯಾಜಿರಾವ್ ರಸ್ತೆ, ಬಂಬೂ ಬಜಾರ್, ಹೈವೇ ಸರ್ಕಲ್ ಮೂಲಕ ಬನ್ನಿಮಂಟಪ ತಲುಪುತ್ತದೆ.
ಸಂಜೆ 7 ಗಂಟೆಗೆ ಆಕರ್ಷಕ ಪಂಜಿನ ಕವಾಯತು ಪ್ರದರ್ಶನ ನಡೆಯಲಿದೆ. ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಪಂಜಿನ ಕವಾಯತು ವೀಕ್ಷಿಸಿ, ವಂದನೆ ಸ್ವೀಕರಿಸಲಿದ್ದಾರೆ. ಇದರೊಂದಿಗೆ ದಸರಾ ಸಂಪನ್ನಗೊಳ್ಳಲಿದೆ.
ರಾಜ್ಯದ ಪಿಜಿ, ಹಾಸ್ಟೆಲ್ಗಳಲ್ಲಿರುವವರಲ್ಲಿ ಎಚ್ಐವಿ ಸೋಂಕು, ಹೆಚ್ಚಿದ ಆತಂಕ
‘ಬಯಕೆ’ ಈಡೇರಿಕೆಗೆ ಮಹಿಳೆಯರಿಗೆ ರೋಬೋಟ್ಗಳೇ ಹೆಚ್ಚು ಇಷ್ಟವಂತೆ! ಸಡಿಲವಾಗಲಿದ್ಯಾ ಮಹಿಳೆ- ಪುರುಷರ ನಡುವಿನ ಬಂಧ?