newsics.com
ಬೆಂಗಳೂರು: ನಗರದ ವೈಯಾಲಿಕಾವಲ್ನಲ್ಲಿ ನಡೆದಿದ್ದ ಒಂಟಿ ಮಹಿಳೆ ಮಹಾಲಕ್ಷ್ಮಿ ಭೀಕರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಲೆಗೆ ಸ್ಫೋಟಕ ತಿರುವು ಸಿಕ್ಕಿದೆ.
ಮೃತ ಆರೋಪಿ ಮುಕ್ತಿರಂಜನ್ ಡೆತ್ ನೋಟ್ ನಲ್ಲಿ ಕೊಲೆ ಬಗ್ಗೆ ಉಲ್ಲೇಖ ಮಾಡಲಾಗಿದೆ. ಮಹಾಲಕ್ಷ್ಮೀಯೇ ನನ್ನನ್ನು ಕೊಂದು ಸೂಟ್ಕೇಸ್ ನಲ್ಲಿ ತುಂಬಿ ಬಿಸಾಡಲು ಪ್ರಯತ್ನಿಸಿದ್ದಳು. ಹೀಗಾಗಿ ನಾನೇ ಅವಳನ್ನು ಕೊಂದೆ ಎಂದು ಆರೋಪಿ ಡೆತ್ನೋಟ್ನಲ್ಲಿ ಬರೆದಿಟ್ಟಿದ್ದಾನೆ.
ಆತ್ಮಹತ್ಯೆಗೂ ಮುನ್ನ ಡೆತ್ ನೋಟ್ ಬರೆದಿಟ್ಟಿದ್ದ ಆರೋಪಿ ಮುಕ್ತಿ ರಂಜನ್ ಈ ಅಂಶ ಉಲ್ಲೇಖ ಮಾಡಿದ್ದಾನೆ. ಪೊಲೀಸರು ಡೆತ್ ನೋಟ್ ಪರಿಶೀಲನೆ ನಡೆಸಿದಾಗ ಈ ರಹಸ್ಯ ಬಯಲಾಗಿದೆ.
ಕೊಲೆಯಾದ ಜಾರ್ಖಂಡ್ ಮೂಲದ ಮಹಾಲಕ್ಷ್ಮಿ ಪೋಷಕರು ಹಲವು ವರ್ಷಗಳಿಂದ ನೆಲಮಂಗಲದಲ್ಲಿ ನೆಲೆಸಿದ್ದಾರೆ. ಐದು ವರ್ಷದ ಹಿಂದೆ ತ್ರಿಪುರ ಮೂಲದ ಹಿಮಾನ್ ದಾಸ್ ಜತೆಗೆ ಮಹಾಲಕ್ಷ್ಮಿ ಮದುವೆಯಾಗಿದ್ದು, ದಂಪತಿಗೆ ನಾಲ್ಕು ವರ್ಷದ ಒಂದು ಮಗುವಿದೆ. ಹಿಮಾನ್ ದಾಸ್ ನೆಲಮಂಗಲದಲ್ಲಿ ಸೆಕ್ಯುರಿಟಿ ಗಾರ್ಡ್ ಕೆಲಸ ಮಾಡುತ್ತಿದ್ದಾನೆ. ದಾಂಪತ್ಯ ಕಲಹದಿಂದ ಕಳೆದ ಎಂಟು ತಿಂಗಳ ಹಿಂದೆ ಪತಿಯನ್ನು ತೊರೆದಿದ್ದಳು. ಮಗು ತಂದೆ ಹಿಮಾನ್ ದಾಸ್ ಜತೆಗೆ ಇತ್ತು ಎಂಬುದು ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿತ್ತು.
ಕೊಲೆಯಾದ ಮಹಾಲಕ್ಷ್ಮಿ ನಗರದ ಮಾಲ್ ಒಂದರಲ್ಲಿ ಸೇಲ್ಸ್ ಗರ್ಲ್ ಕೆಲಸ ಮಾಡುತ್ತಿದ್ದಳು. ಬಾಡಿಗೆ ಮನೆಯಲ್ಲಿ ಒಂಟಿಯಾಗಿ ನೆಲೆಸಿದ್ದಳು. ಮಹಿಳೆಯ ಮೃತದೇಹ ಕತ್ತರಿಸಿ ತುಂಡುಗಳನ್ನು ಫ್ರಿಡ್ಜ್ನಲ್ಲಿ ತುಂಬಲಾಗಿತ್ತು. ಒಂಟಿ ಮಹಿಳೆಯ ಭೀಕರ ಕೊಲೆ ಘಟನೆಗೆ ರಾಜಧಾನಿ ಜನ ಬೆಚ್ಚಿ ಬಿದ್ದಿದ್ದರು. ‘ನಾನು ಆಕೆಯನ್ನು ಪ್ರೀತಿಸಿದ್ದೆ. ಆದರೆ ಆಕೆ ನನ್ನನ್ನು ಅಪಹರಣ ಪ್ರಕರಣದಲ್ಲಿ ಸಿಕ್ಕಿಹಾಕಿಸುವುದಾಗಿ ಬೆದರಿಕೆ ಹಾಕಿದ್ದಳು’ ಎಂದು ಬೆಂಗಳೂರಿನಲ್ಲಿ ಗೆಳತಿ ಮಹಾಲಕ್ಷ್ಮೀಯನ್ನು ಹತ್ಯೆಗೈದು 59 ತುಂಡು ಮಾಡಿದ ಆರೋಪಿ ಮುಕ್ತಿ ರಂಜನ್ ರಾಯ್ ಇದಕ್ಕೂ ಮುನ್ನ ಮನೆಯವರಲ್ಲಿ ಹೇಳಿಕೊಂಡಿದ್ದ ಎಂದು ವರದಿಯಾಗಿತ್ತು.
ಹತ್ಯೆ ಬಳಿಕ ತವರಿಗೆ ತೆರಳಿ ತನ್ನ ತಾಯಿ ಬಳಿ ತನ್ನ ನೋವನ್ನು ಹಂಚಿಕೊಂಡಿದ್ದ ರಾಯ್, ‘ನಾನು ಆಕೆಯನ್ನು ಪ್ರೀತಿಸಿದ್ದೆ. ಆಕೆಗಾಗಿ ಸಾಕಷ್ಟು ಹಣ ವೆಚ್ಚ ಮಾಡಿದ್ದೆ. ಆದರೆ ಆಕೆಯ ವರ್ತನೆ ಸರಿ ಇರಲಿಲ್ಲ. ಜತೆಗೆ ನನ್ನನ್ನು ಅಪಹರಣ ಕೇಸಲ್ಲಿ ಸಿಲುಕಿಸುವುದಾಗಿ ಬೆದರಿಕೆ ಹಾಕಿದ್ದಳು. ಹೀಗಾಗಿ ಆಕೆಯನ್ನು ಹತ್ಯೆಗೈದೆ ಎಂದು ಹೇಳಿಕೊಂಡು ಅತ್ತಿದ್ದ’ ಎಂದು ಒಡಿಶಾದ ಪೊಲೀಸ್ ಮೂಲಗಳು ಹೇಳಿದ್ದವು.