newsics.com
ಬೆಂಗಳೂರು: ವಾಲ್ಮೀಕಿ ಅಭಿವೃದ್ಧಿ ನಿಗಮ ಹಗರಣಕ್ಕೆ ಸಂಬಂಧಿಸಿದಂತೆ ವಿಶೇಷ ತನಿಖಾ ತಂಡ ಸೋಮವಾರ (ಆ.5) ದೋಷಾರೋಪ ಪಟ್ಟಿ ಸಲ್ಲಿಸಿದೆ.
ಒಟ್ಟು 12 ಆರೋಪಿಗಳ ವಿರುದ್ಧ ಸುಮಾರು 3 ಸಾವಿರ ಪುಟಗಳ ಚಾರ್ಜ್ಶೀಟ್ ಅನ್ನು ಬೆಂಗಳೂರಿನ 1ನೇ ಎಸಿಎಂಎಂ ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ.
ಅಚ್ಚರಿಯೆಂದರೆ, ಈ ಚಾರ್ಜ್ಶೀಟ್ನಲ್ಲಿ ಇದೇ ಪ್ರಕರಣದಲ್ಲಿ ಇಡಿ ಬಂಧನಕ್ಕೊಳಗಾಗಿರುವ ಕಾಂಗ್ರೆಸ್ ಶಾಸಕ ನಾಗೇಂದ್ರ ಹೆಸರೇ ಇಲ್ಲ. ಹಾಗೆಯೇ ಮತ್ತೋರ್ವ ಶಾಸಕ ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಬಸನಗೌಡ ದದ್ದಲ್ ಅವರ ಹೆಸರು ಸಹ ಉಲ್ಲೇಖವಾಗಿಲ್ಲ.
ಈ ಹಿಂದೆ ಹೈಗ್ರೌಂಡ್ಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣದ ತನಿಖೆ ನಡೆಸುತ್ತಿದ್ದ ಎಸ್ಐಟಿ ಅಧಿಕಾರಿಗಳು ಪ್ರಥಮ ಚಾರ್ಜ್ ಶೀಟ್ ಸಲ್ಲಿಕೆ ಮಾಡಲಾಗಿದೆ.
ಮೂರು ಸಾವಿರ ಪುಟಗಳ ಚಾರ್ಜ್ಶೀಟ್ನಲ್ಲಿ ಹಣ, ಚಿನ್ನ, ಕಾರು ಸೇರಿ 50 ಕೋಟಿ ರೂಪಾಯಿ ಜಪ್ತಿ ಮಾಡಿರುವುದಾಗಿ ಎಸ್ಐಟಿ ದೋಷಾರೋಪಪಟ್ಟಿಯಲ್ಲಿ ಉಲ್ಲೇಖಿಸಿದೆ.
ನಗದು- 16.83 ಕೋಟಿ ರೂಪಾಯಿ ಹಣ, 11 ಕೋಟಿ 70 ಲಕ್ಷ ಮೌಲ್ಯದ 16.252 ಕೆ.ಜಿ ಚಿನ್ನ, 4.51 ಕೋಟಿ ಮೌಲ್ಯದ ಲ್ಯಾಂಬರ್ಗಿನಿ ಉರುಸ್ ಹಾಗೈ, ಮರ್ಸಿಡೀಸ್ ಬೆಂಜ್ ಕಾರು, ತನಿಖಾಧಿಕಾರಿ ಬ್ಯಾಂಕ್ ಖಾತೆಯಿಂದ 3.19 ಕೋಟಿ ರೂ. ಹಣ, 13.72 ಕೋಟಿ ರೂ. ಹಣ ಫ್ರೀಜ್ ಸೇರಿದಂತೆ ಒಟ್ಟು ಒಟ್ಟು 49.96 ಕೋಟಿ ವಶಪಡಿಸಿಕೊಂಡ ವಸ್ತುಗಳ ಬಗ್ಗೆ ಚಾರ್ಜ್ ಶೀಟ್ ನಲ್ಲಿ ಉಲ್ಲೇಖಿಸಲಾಗಿದೆ.
ಈ ಪ್ರಕರಣದಲ್ಲಿ ಮೊದಲು ಬಂಧನವಾಗಿರುವ ಆರೋಪಿಗಳ ವಿರುದ್ಧ ಮಾತ್ರ ಚಾರ್ಜ್ಶೀಟ್ ಸಲ್ಲಿಸಲಾಗಿದೆ. ಸತ್ಯನಾರಾಯಣ ವರ್ಮಾ( ಹೈದರಾಬಾದ್) , ಪದ್ಮನಾಭ (ವ್ಯವಸ್ಥಾಪಕ), ಪರುಶುರಾಮ್ ( ಲೆಕ್ಕಾಧಿಕಾರಿ), ನೆಕ್ಕುಂಟಿ ನಾಗರಾಜ್ (ನಾಗೇಂದ್ರ ಆಪ್ತ), ನಾಗೇಶ್ವರ್ ರಾವ್(ನೆಕ್ಕುಂಟಿ ನಾಗರಾಜ್ ಸಂಬಂಧಿ), ಸತ್ಯನಾರಾಯಣ ಇಟ್ಕಾರಿ ತೇಜಾ (ಫಸ್ಟ್ ಫೈನಾನ್ಸ್ ಅಧ್ಯಕ್ಷ), ಜಗದೀಶ್ (ಉಡುಪಿ), ತೇಜಾ ತಮ್ಮಯ್ಯ(ಬೆಂಗಳೂರು), ಪಿಟ್ಟಲ ಶ್ರೀನಿವಾಸ್ ಗಚ್ಚಿಬೌಲಿ(ಆಂಧ್ರ ಪ್ರದೇಶ), ಸಾಯಿತೇಜ(ಹೈದರಾಬಾದ್) ಸೇರಿ ಒಟ್ಟು 12 ಆರೋಪಿಗಳ ಹೆಸರು ಉಲ್ಲೇಖವಾಗಿದೆ.
ಆದರೆ, ಈ ದೋಷಾರೋಪಪಟ್ಟಿಯಲ್ಲಿ ಮಾಜಿ ಸಚಿವ ನಾಗೇಂದ್ರ, ಶಾಸಕ ಬಸನಗೌಡ ದದ್ದಲ್ ಅವರ ಹೆಸರಿಲ್ಲದಿರುವುದೇ ಸಂಚಲನ ಮೂಡಿಸಿದೆ.
ಇದೇ ಪ್ರಕರಣದಲ್ಲಿ ಇಡಿ ಬಂಧನಕ್ಕೊಳಗಾಗಿರುವ ನಾಗೇಂದ್ರ ಹಾಗೂ ಬಸನಗೌಡ ದದ್ದಲ್ ಹೆಸರು ಈ ಚಾರ್ಜ್ಶೀರ್ಟ್ನಲ್ಲಿ ಇಲ್ಲದಿರುವ ಬಗ್ಗೆ ವಿಪಕ್ಷಗಳು ಆಕ್ಷೇಪಿಸುವ ಸಾಧ್ಯತೆಗಳಿದ್ದು, ಕೋರ್ಟ್ ಅಭಿಪ್ರಾಯ ಏನು ಎನ್ನುವುದನ್ನು ಕಾದು ನೋಡಬೇಕಿದೆ.