newsics.com
ನವದೆಹಲಿ: ಬೆಂಗಳೂರು ಮೆಟ್ರೋ ರೈಲು ಯೋಜನೆ ಮೂರನೇ ಹಂತದ ಎರಡು ಕಾರಿಡಾರ್ಗಳಿಗೆ ಒಪ್ಪಿಗೆ ನೀಡಿರುವ ಕೇಂದ್ರ ಸರ್ಕಾರ, ಉದ್ಯಾನ ನಗರಿಯ ಟ್ರಾಫಿಕ್ ದಟ್ಟಣೆ ನಿವಾರಣೆಗೆ ಮುಂದಾಗಿದೆ.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಶುಕ್ರವಾರ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಈ ಯೋಜನೆಗಳಿಗೆ ಒಪ್ಪಿಗೆ ನೀಡಲಾಗಿದೆ.
44.65 ಕಿ.ಮೀ. ಉದ್ದ ಮತ್ತು 31 ಸ್ಟೇಷನ್ ಒಳಗೊಂಡ ಈ ಯೋಜನೆಗೆ 15,611 ಕೋಟಿ ರೂ. ವೆಚ್ಚವಾಗಲಿದ್ದು, 2029ರೊಳಗೆ ಮುಗಿಸುವ ಗುರಿ ಹೊಂದಲಾಗಿದೆ.
ಇತ್ತೀಚೆಗಷ್ಟೇ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ಬೆಂಗಳೂರು ಅಭಿವೃದ್ಧಿ ಬಗ್ಗೆ ಚರ್ಚೆ ನಡೆಸಿದ್ದರು. ಮೂರನೇ ಹಂತಕ್ಕೆ ಒಪ್ಪಿಗೆ ನೀಡುವಂತೆ ಮನವಿ ಮಾಡಿದ್ದರು.
ಕಾರಿಡಾರ್ 1ರಲ್ಲಿ ಜೆ.ಪಿ.ನಗರ 4ನೇ ಹಂತದಿಂದ ಕೆಂಪಾಪುರದವರೆಗೆ ವೆಸ್ಟ್ ಔಟರ್ ರಿಂಗ್ನ 32.15 ಕಿ.ಮೀ.ವರೆಗೆ ಹಾದು ಹೋಗಲಿದೆ. ಇಲ್ಲಿ 21 ಸ್ಟೇಷನ್ಗಳು ಇರಲಿವೆ.
ಕಾರಿಡಾರ್ 2ನಲ್ಲಿ ಹೊಸಹಳ್ಳಿಯಿಂದ ಕಡಬಗೆರೆ, ಅಂದರೆ ಮಾಗಡಿ ರಸ್ತೆಯ 12.50 ಕಿ.ಮೀ. ಮೆಟ್ರೋ ನಿರ್ಮಾಣವಾಗಲಿದೆ. ಇಲ್ಲಿ 9 ನಿಲ್ದಾಣಗಳು ಬರಲಿವೆ.
ಈ ಎರಡೂ ಯೋಜನೆಗಳು ಪೂರ್ಣವಾದರೆ ಬೆಂಗಳೂರಿನ ಮೆಟ್ರೋ ನೆಟ್ವರ್ಕ್ ವಿಸ್ತೀರ್ಣ 220.20 ಕಿ.ಮೀ.ಗಳಾಗಲಿದೆ. ಈ ಎರಡೂ ಎಲೆವೇಟೆಡ್ ಕಾರಿಡಾರ್ಗಳಾಗಲಿವೆ.
ಏರ್ಪೋರ್ಟ್ ಸಂಚಾರಕ್ಕೆ ಅನುಕೂಲ
ಈ ಎರಡು ಕಾರಿಡಾರ್ಗಳಿಂದಾಗಿ ವಿಮಾ ನಿಲ್ದಾಣಕ್ಕೆ ಸುಗಮವಾಗಿ ಸಂಚಾರ ಮಾಡಬಹುದು. ಅಲ್ಲದೆ, ಪೂರ್ವ ರಿಂಗ್ ರಸ್ತೆಗೂ ಸುಲಭವಾಗಿ ಸಂಪರ್ಕ ಸಾಧಿಸಬಹುದಾಗಿದೆ.
ಮೈಸೂರು ರಸ್ತೆಯಿಂದ ತುಮಕೂರು ರಸ್ತೆ ಸಂಚಾರವೂ ಸುಲಭವಾಗಲಿದೆ. ಮೈಸೂರು ರಸ್ತೆ, ಪೀಣ್ಯ, ಬಿಇಎಲ್, ಪಿಇಎಸ್ ವಿಶ್ವವಿದ್ಯಾಲಯ, ಅಂಬೇಡ್ಕರ್ ಕಾಲೇಜು, ಕೆಎಲ್ಇ ಕಾಲೇಜು, ದಯಾನಂದ ಸಾಗರ ಕಾಲೇಜು, ಬನ್ನೇರುಘಟ್ಟ ರಸ್ತೆ, ಕೈಗಾರಿಕಾ ಪ್ರದೇಶಗಳು, ಟೆಕ್ಸ್ಟೈಲ್ ವಲಯಗಳಿಗೂ ಸುಲಭವಾಗಿ ಸಂಪರ್ಕ ಸಾಸಬಹುದಾಗಿದೆ.
ಈ ಯೋಜನೆಯಲ್ಲಿ 10 ಸ್ಥಳಗಳಲ್ಲಿ ಬಹುಮಾದರಿ ನಿಲ್ದಾಣಗಳು ಬರಲಿವೆ. ಅಂದರೆ ಜೆ.ಪಿ.ನಗರ 4ನೇ ಹಂತ, ಜೆ.ಪಿ.ನಗರ, ಕಾಮಾಕ್ಯ, ಮೈಸೂರು ರಸ್ತೆ, ಸುಮ್ಮನಹಳ್ಳಿ, ಪೀಣ್ಯ, ಬಿಇಎಲ್ ಸರ್ಕಲ್, ಹೆಬ್ಬಾಳ, ಕೆಂಪಾಪುರ ಮತ್ತು ಹೊಸಹಳ್ಳಿ ನಿಲ್ದಾಣಗಳು ಇಂಟರ್ಚೇಂಜ್ ಮತ್ತು ಬಹುಮಾದರಿ ಸಾರಿಗೆ ವ್ಯವಸ್ಥೆ ಹೊಂದಲಿವೆ. ಇಲ್ಲಿ ಮೆಟ್ರೋ ಸ್ಟೇಷನ್ಗಳ ಜತೆಯಲ್ಲಿ ಬಿಎಂಟಿಸಿ ಬಸ್ ನಿಲ್ದಾಣಗಳು, ರೈಲ್ವೆ ನಿಲ್ದಾಣಗಳು ಮತ್ತು ಪ್ರಸ್ತಾವಿತ ಸಬ್ಅರ್ಬನ್ ಸ್ಟೇಷನ್ಗಳೂ ಬರಲಿವೆ.
ಮಾರುತಿ ಸುಜುಕಿಯ ಮೇಡ್ ಇನ್ ಇಂಡಿಯಾ ಕಾರ್ಗೆ ಜಪಾನ್ನಲ್ಲೂ ಭಾರೀ ಬೇಡಿಕೆ
ತುಂಗಭದ್ರಾ ಡ್ಯಾಂ 19ನೇ ಗೇಟ್ಗೆ ಮೊದಲ ಸ್ಟಾಪ್ ಲಾಗ್ ಅಳವಡಿಕೆ ಕಾರ್ಯ ಸಕ್ಸಸ್