newsics.com
ನವದೆಹಲಿ: ತಾತ್ಕಾಲಿಕ ಆಶ್ರಯ ಬಯಸಿ ಬರುವವರಿಗೆ ಆಸರೆಯಾಗಲು ಸಾಧ್ಯವಿಲ್ಲ ಎಂದು ಬ್ರಿಟನ್ನ ಗೃಹ ಸಚಿವಾಲಯ ಮಂಗಳವಾರ ಸ್ಪಷ್ಟಪಡಿಸಿದೆ.
ಆಶ್ರಯ ಬಯಸಿ ಬರುವವರು ಮೊದಲು ಯಾವ ದೇಶಕ್ಕೆ ಹೋಗುತ್ತಾರೋ ಅಲ್ಲಿಯೇ ಈ ಬೇಡಿಕೆ ಇಡಬೇಕು ಎಂದು ಕೀರ್ ಸ್ಟಾರ್ಮ್ ನೇತೃತ್ವದ ಸರ್ಕಾರ ಹೇಳಿದೆ.
ಬಾಂಗ್ಲಾ ತೊರೆದು ದೆಹಲಿಗೆ ಬಂದಿಳಿದಿರುವ ಹಸೀನಾ ಲಂಡನ್ಗೆ ಹಾರಬಹುದು ಎಂದು ಹೇಳಲಾಗುತ್ತಿರುವ ಸಂದರ್ಭದಲ್ಲಿ ಈ ಹೇಳಿಕೆ ಮಹತ್ವ ಪಡೆದುಕೊಂಡಿದೆ.
ಅಗತ್ಯವಿರುವವರಿಗೆ ರಕ್ಷಣೆ ಒದಗಿಸಿರುವ ಖ್ಯಾತಿಯನ್ನು ಬ್ರಿಟನ್ ಹೊಂದಿದೆ. ಆದರೆ ತಾತ್ಕಾಲಿಕ ಆಶ್ರಯ ನೀಡಲು ಸಾಧ್ಯವಿಲ್ಲ. ಅಂತಾರಾಷ್ಟ್ರೀಯ ರಕ್ಷಣೆ ಬಯಸುವವರು ಮೊದಲು ಯಾವ ದೇಶಕ್ಕೆ ಹೋಗುತ್ತಾರೋ ಅಲ್ಲಿಯೇ ಆಶ್ರಯ ಪಡೆಯುವುದು ಸೂಕ್ತ ಹಾಗೂ ಸುರಕ್ಷಿತ ಎಂದು ಬ್ರಿಟನ್ ಗೃಹ ಕಚೇರಿಯ ವಕ್ತಾರರು ಹೇಳಿದ್ದಾರೆ.
ಆದರೂ ರಾಜಾಶ್ರಯ ಕೋರಿದ ಹಸೀನಾ ಬೇಡಿಕೆಯನ್ನು ಬ್ರಿಟನ್ ಸರ್ಕಾರ ಪರಿಶೀಲಿಸುತ್ತಿದೆ ಎಂದು ಮೂಲಗಳು ಹೇಳಿವೆ.
ಬ್ರಿಟನ್ನ ಹೇಳಿಕೆಯಿಂದ ಲಂಡನ್ಗೆ ಪ್ರಯಾಣಿಸುವ ಉದ್ದೇಶ ಹೊಂದಿದ್ದ ಬಾಂಗ್ಲಾದ ಮಾಜಿ ಪ್ರಧಾನಿ ಶೇಖ್ ಹಸೀನಾ ವಿಚಲಿತರಾಗಿದ್ದು, ಮುಂದಿನ ಕೆಲ ಕಾಲ ಭಾರತದಲ್ಲಿಯೇ ಇರುವ ಸಾಧ್ಯತೆ ಇದೆ ಎನ್ನಲಾಗಿದೆ.
ತಮ್ಮ ಹುದ್ದೆಗೆ ರಾಜೀನಾಮೆ ನೀಡಿ ಸಹೋದರಿ ರೆಹಾನಾರೊಂದಿಗೆ ಭಾರತಕ್ಕೆ ಬಂದಿರುವ ಹಸೀನಾ ಲಂಡನ್ ಹೋಗುತ್ತಾರೆಂದು ಹೇಳಲಾಗಿತ್ತಾದರೂ ಆ ಪ್ರಕ್ರಿಯೆಯಲ್ಲಿ ಕೆಲ ಅಡಚಣೆಗಳು ಉಂಟಾಗಿವೆ. ತನ್ನ ದೇಶದಲ್ಲಿ ವಿಪರೀತ ವಿರೋಧ ಎದುರಿಸುತ್ತಿರುವ ಅವರಿಗೆ ತಾತ್ಕಾಲಿಕ ಆಶ್ರಯ ನೀಡಲು ಸಾಧ್ಯವಿಲ್ಲ ಎಂದು ಬ್ರಿಟನ್ ಹೇಳಿದ ಬೆನ್ನಲ್ಲೇ ಈ ಬೆಳವಣಿಗೆಯಾಗಿದೆ.
ರೆಹಾನಾರ ಸಹೋದರಿ ಟುಲಿಪ್ ಸಿದ್ದಿಕಿ ಬ್ರಿಟಿಷ್ ಸಂಸತ್ತಿನಲ್ಲಿ ಆರ್ಥಿಕ ಕಾರ್ಯದರ್ಶಿಯಾಗಿರುವ ಕಾರಣ ಅಲ್ಲಿಗೇ ಹೋಗಲು ನಿರ್ಧರಿಸಿದ್ದ ಹಸೀನಾ, ಈ ಬಗ್ಗೆ ಭಾರತಕ್ಕೆ ಮೊದಲೇ ತಿಳಿಸಿದ್ದು, ತಮ್ಮ ಮುಂದಿನ ನಡೆಯ ಬಗ್ಗೆ ಮಾಹಿತಿ ನೀಡಿದ್ದರು ಎನ್ನಲಾಗಿದೆ.
ಈ ಮಧ್ಯೆ, ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿ ಆಶ್ರಯ ಬಯಸಿ ಭಾರತಕ್ಕೆ ಬಂದಿರುವ ಶೇಖ್ ಹಸೀನಾ ಅವರ ವೀಸಾವನ್ನು ಅಮೆರಿಕ ರದ್ದುಗೊಳಿಸಿದೆ. ಕೆಲ ಪಾಶ್ಚಿಮಾತ್ಯ ದೇಶಗಳು ಹಸೀನಾರನ್ನು ಅಧಿಕಾರದಿಂದ ಕಿತ್ತೆಸೆಯಲು ಬಯಸುತ್ತಿದ್ದ ಹೊತ್ತಿನಲ್ಲೇ ಈ ಬೆಳವಣಿಗೆಯಾಗಿದೆ. ಹೀಗಾಗಿ ಹಸೀನಾ ಈಗ ಯುರೋಪ್ ದೇಶಗಳಲ್ಲಿ ಆಶ್ರಯಕ್ಕೆ ಪ್ರಯತ್ನಿಸುತ್ತಿದ್ದಾರೆ.