newsics.com | ನ್ಯೂಸಿಕ್ಸ್
ಬಂಟ್ವಾಳ(ದಕ್ಷಿಣ ಕನ್ನಡ): ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದ ಬಸ್ ಬುಧವಾರ ಸಂಜೆ ಶಾಲೆ ಮಕ್ಕಳನ್ನು ಬಿಡಲು ತೆರಳಿದ ವೇಳೆ ಬಂಟ್ವಾಳ ತಾಲೂಕಿನ ಬರಿಮಾರು ಸಮೀಪ ಕಲ್ಲೆಟ್ಟಿ ಎಂಬಲ್ಲಿ ಮರವೊಂದು ಬಸ್ಸಿನ ಮೇಲೆ ಬಿದ್ದ ಪರಿಣಾಮ ಬಾಲಕಿಯೊಬ್ಬಳು ಮೃತಪಟ್ಟಿರುವ ಘಟನೆ ವರದಿಯಾಗಿದೆ. ದುರ್ಘಟನೆಯಲ್ಲಿ ಗಾಯಗೊಂಡಿರುವ ನಾಲ್ವರು ಮಕ್ಕಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಕಲ್ಲಡ್ಕ ಶ್ರೀರಾಮ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಎಲ್.ಕೆ.ಜಿ. ಯಲ್ಲಿ ಕಲಿಯುತ್ತಿರುವ ಚಿರನ್ವಿ (6) ಮೃತ ಬಾಲಕಿ. ಈಕೆ ಬಂಟ್ವಾಳ ತಾಲೂಕಿನ ಬಿಳಿಯೂರಿನ ತೋಟ ಹೌಸ್ ನ ಚಂದ್ರಶೇಖರ ಮತ್ತು ಅನಿತಾ ದಂಪತಿಯ ಪುತ್ರಿ. ಗಂಭೀರವಾಗಿ ಗಾಯಗೊಂಡಿರುವ ಪೆರಾಜೆ ಸಾದಿಕುಕ್ಕು ನಿವಾಸಿ ಗಣೇಶ್ ಗೌಡ ಅವರ ಪುತ್ರಿ ಅನ್ವಿ ಅವರನ್ನು ಮಂಗಳೂರಿನ ಎ.ಜೆ. ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನೋರ್ವ ಗಾಯಾಳು ಪೆರ್ನೆ ನಿವಾಸಿ ಕ್ಷಿತಿ ರೈ ಅವರನ್ನು ಕಲ್ಲಡ್ಕದ ಪುಷ್ಪರಾಜ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.
ಘಟನೆ ನಡೆದ ತಕ್ಷಣವೇ ಸ್ಥಳೀಯರು ಮಕ್ಕಳನ್ನು ರಕ್ಷಿಸಿ ಆಸ್ಪತ್ರೆಗೆ ಕರೆದೊಯ್ಯುವಲ್ಲಿ ಸ್ಪಂದಿಸಿದರು. ತೀವ್ರ ಮಳೆ ಗಾಳಿಯ ಪ್ರಭಾವದಿಂದಾಗಿ ಮರ ಉರುಳಿ ಬಿದ್ದಿದ್ದರಿಂದ ದುರ್ಘಟನೆ ನಡೆದಿದೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.
ಸಂಜೆ ಮಕ್ಕಳನ್ನು ಬಿಡಲು ಎಂದಿನಂತೆಯೇ ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದ ಆಂಗ್ಲ ಮಾಧ್ಯಮ ವಿಭಾಗದಿಂದ ಹೊರಟ ಬಸ್, ಹೆದ್ದಾರಿ ಮೂಲಕ ಸಾಗಿ ಮಾಣಿ, ಭರಣಿಕೆರೆ, ಕಲ್ಲೆಟ್ಟಿಗೆ ಹೋಗಿ ಬಳಿಕ ಪೆರ್ನೆಗೆ ಹೋಗುವುದಿತ್ತು. ಕೆಲ ಮಕ್ಕಳನ್ನು ಇಳಿಸಿದ ಬಳಿಕ ಬಂಟ್ವಾಳ ತಾಲೂಕು ಬರಿಮಾರು ಗ್ರಾಮದ ಕಲ್ಲೇಟಿ ಎಂಬಲ್ಲಿನ ಶ್ರೀ ಕಾನಲ್ತಾಯ ದೈವಸ್ಥಾನ ದ ಬದಿಯ ಮರ ಸಂಚರಿಸುತ್ತಿದ್ದ ಬಸ್ ಮೇಲೆ ಎರಗಿದೆ. ಘಟನೆಯ ತೀವ್ರತೆಗೆ 24 ಸೀಟರ್ ನ ಮಿನಿ ಬಸ್ ಸಂಪೂರ್ಣ ಜಖಂಗೊಂಡಿದೆ. ಈ ವೇಳೆ ಬಸ್ಸಿನಲ್ಲಿದ್ದ ಪುಟಾಣಿ ಮಕ್ಕಳು ಆಘಾತದಿಂದ ತತ್ತರಿಸಿ ಹೋಗಿದ್ದಾರೆ. ಈ ವೇಳೆ ಸುಮಾರು 6 ವರ್ಷ ಪ್ರಾಯದ ಚಿರನ್ವಿ ಎಂಬ ಹೆಣ್ಣು ಮಗು ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾಳೆ.
Ration news ಇನ್ಮುಂದೆ ಬೆಳಗಿನಿಂದ ರಾತ್ರಿವರೆಗೂ ಸಿಗುತ್ತೆ ಪಡಿತರ! ನ್ಯಾಯಬೆಲೆ ಅಂಗಡಿಗಳಿಗೆ ಸರ್ಕಾರದ ಸೂಚನೆ ಏನು?
Smriti Mandhana ಎಲ್ಎಸ್ಜಿ ಜರ್ಸಿಯಲ್ಲಿ ಆರ್ಸಿಬಿ ನಾಯಕಿ? ಸ್ಮೃತಿ ಮಂದಾನಾ ಹೊಸ ಫೋಟೋ ವೈರಲ್