newsics.com
ವಯನಾಡ್(ಕೇರಳ): ಕಳೆದ ಜುಲೈ 30 ರಂದು ವಯನಾಡ್ನಲ್ಲಿ ಸಂಭವಿಸಿದ ಭಾರೀ ಭೂ ಭೂಕುಸಿತದಲ್ಲಿ ಮೃತಪಟ್ಟವರ ಸಂಖ್ಯೆ 308ಕ್ಕೇರಿದೆ.
ಕೇರಳ ಆರೋಗ್ಯ ಸಚಿವೆ ವೀಣಾ ಜಾರ್ಜ್ ಶುಕ್ರವಾರ ಈ ಮಾಹಿತಿ ನೀಡಿದ್ದಾರೆ.
ಭೂಕುಸಿತದಿಂದ ಹಾನಿಗೊಳಗಾದ ಮೆಪ್ಪಾಡಿ ಪ್ರದೇಶದ ಚೂರಲ್ಮಲಾ ಮತ್ತು ಮುಂಡಕ್ಕೈನಲ್ಲಿ ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆಗಳು ನಡೆಯುತ್ತಿವೆ. ಈವರೆಗೆ 195 ಮೃತದೇಹಗಳು ಹಾಗೂ 113 ದೇಹದ ಭಾಗಗಳು ಪತ್ತೆಯಾಗಿವೆ ಎಂದು ಸಚಿವ ವೀಣಾ ಜಾರ್ಜ್ ತಿಳಿಸಿದ್ದಾರೆ.
ಭೂಕುಸಿತದಿಂದ ಪ್ರತ್ಯೇಕವಾಗಿರುವ ಚೂರಲ್ಮಲಾ ಮತ್ತು ಮುಂಡಕ್ಕೈ ಪ್ರದೇಶಗಳನ್ನು ಸಂಪರ್ಕಿಸುವ ಇರುವಂಜಿಪ್ಪುಳ ನದಿಯ ಮೇಲೆ ನಿರ್ಮಿಸಲಾದ 190 ಅಡಿ ಬೈಲಿ ಸೇತುವೆಯನ್ನು ಭಾರತೀಯ ಸೇನೆಯು ಶುಕ್ರವಾರ ಬೆಳಗ್ಗೆ ನಾಗರಿಕ ಆಡಳಿತಕ್ಕೆ ಹಸ್ತಾಂತರಿಸಿದೆ.
ಎಡಿಜಿಪಿ ಎಂ ಆರ್ ಅಜಿತ್ ಕುಮಾರ್ ಮಾತನಾಡಿ, 300 ಜನರು ಕಣ್ಮರೆಯಾಗಿದ್ದು, ಕಂದಾಯ ಇಲಾಖೆ ವಿವರಗಳ ಸಂಗ್ರಹಿಸಿದ ನಂತರ, ಇನ್ನೊಂದೆರಡು ಮೂರು ದಿನದಲ್ಲಿ ಈ ಕುರಿತು ಅಂತಿಮ ಚಿತ್ರಣ ಸಿಗಲಿದೆ ಎಂದರು.
ಭೂ ಕುಸಿತಕ್ಕೆ ಒಳಗಾಗಿರುವ ಪ್ರದೇಶವನ್ನು ಆರು ವಲಯವಾಗಿ ವಿಭಾಗಿಸಲಾಗಿದೆ. ಶ್ವಾನಗಳ ಸಹಾಯದಿಂದ ಪ್ರತ್ಯೇಕ ತಂಡಗಳಿಂದ ಮೃತರ ಪತ್ತೆ ಕಾರ್ಯಾಚರಣೆ ನಡೆಯುತ್ತಿದೆ. ವಿಶೇಷ ಏಜೆನ್ಸಿಗಳ ಸಹಾಯದಿಂದ ಕೇರಳ ಪೊಲೀಸರು ಕೋಯಿಕ್ಕೋಡ್ ನಗರದವರೆಗೆ ಚಾಲಿಯಾರ್ ನದಿಯಲ್ಲಿ ಕೂಂಬಿಂಗ್ ನಡೆಸಲಿದ್ದಾರೆ ಎಂದು ಮಾಹಿತಿ ನೀಡಿದರು.
ಮಲಪ್ಪುರಂ ಜಿಲ್ಲೆಯಲ್ಲಿನ ಚಾಲಿಯರ್ ನದಿ ದಂಡೆಯಲ್ಲೂ ಕೆಲವು ಮೃತ ದೇಹ ಪತ್ತೆಯಾಗಿರುವ ವರದಿ ಬಂದಿದೆ. ವಯನಾಡಿನಲ್ಲಿ ಆದ ಭೂ ಕುಸಿತದಿಂದ ಮಲಪ್ಪುರಂನವರೆಗೆ ಚಾಲಿಯಾರ್ನದಿಯಲ್ಲಿ 143 ಮೃತ ದೇಹ ಮತ್ತು ಕೆಲವು ದೇಹದ ಭಾಗಗಳು ಕೊಚ್ಚಿಕೊಂಡು ಬಂದಿರುವುದು ಪತ್ತೆಯಾಗಿದೆ ಎಂದು ಹೇಳಿದರು.
ವಯನಾಡ್ ಜಿಲ್ಲಾಡಳಿತದ ಪ್ರಕಾರ, 127 ಮಕ್ಕಳು ಮತ್ತು 76 ಮಹಿಳೆಯರು ಸಾವನ್ನಪ್ಪಿದ್ದು, 225 ಮಂದಿ ಗಾಯಗೊಂಡಿದ್ದಾರೆ. ಮುಂಡಕ್ಕೈ ಮತ್ತು ಚೂರ್ಮಲಾ ಪ್ರದೇಶಗಳು ಗಂಭೀರವಾಗಿ ಹಾನಿಗೊಂಡಿದೆ.
ಭೂ ಕುಸಿತವಾಗಿರುವ ವಯನಾಡು ಜಿಲ್ಲೆಯಲ್ಲಿ ನಾಲ್ಕನೇ ದಿನದ ರಕ್ಷಣೆ ಕಾರ್ಯ ಭರದಿಂದ ಸಾಗಿದ್ದು, 40 ತಂಡಗಳು ಈ ರಕ್ಷಣಾ ಕಾರ್ಯದಲ್ಲಿ ಭಾಗಿಯಾಗಿದೆ. ಸೇನಾ ತಂಡ ನಿರ್ಮಿಸಿರುವ 190 ಅಡಿ ಉದ್ದದ ಬೈಲಿ ಸೇತುವೆ ಮೂಲಕ ಆ್ಯಂಬುಲೆನ್ಸ್ ಸೇರಿದಂತೆ ಇತರ ವಾಹನಗಳ ಸಂಚಾರಕ್ಕೆ ವ್ಯವಸ್ಥೆ ಮಾಡಲಾಗಿದೆ.
ಚಿರತೆ ಜತೆ ಹೋರಾಡಿ ಮನೆಯವರ ಪ್ರಾಣ ಉಳಿಸಿದ 2 ಸಾಕುನಾಯಿಗಳು! ವೈರಲ್ ವಿಡಿಯೊ ನೋಡಿ