newsics.com
ಬೆಂಗಳೂರು: ಕೃಷಿ ಪಂಪ್ಸೆಟ್ಗಳ ಆರ್.ಆರ್. ಸಂಖ್ಯೆಯನ್ನು ಗ್ರಾಹಕರ ಆಧಾರ್ ಸಂಖ್ಯೆಗೆ ಜೋಡಣೆ ಮಾಡುವ ಪ್ರಕ್ರಿಯೆಗೆ ವಿದ್ಯುತ್ ಸರಬರಾಜು ಕಂಪನಿ (ಎಸ್ಕಾಂ)ಗಳು ಸದ್ದಿಲ್ಲದೆ ಚಾಲನೆ ನೀಡಿವೆ.
ಆದರೆ, ಬಹುತೇಕ ಕಡೆಗಳಲ್ಲಿ ಆಧಾರ್-ಆರ್.ಆರ್. ಸಂಖ್ಯೆಗೆ ಹೊಂದಾಣಿಕೆ ಆಗದಿರುವುದರಿಂದ ಮುಂದಿನ ದಿನಗಳಲ್ಲಿ ಸಬ್ಸಿಡಿಗೆ ಕತ್ತರಿ ಬೀಳುವ ಆತಂಕ ರೈತರನ್ನು ಬಾಧಿಸುತ್ತಿದೆ.
ವಿವಿಧ ಸಬ್ಸಿಡಿ ಯೋಜನೆಗಳಿಗೆ ಈಗಾಗಲೇ ಆಧಾರ್ ಸಂಖ್ಯೆ ಜೋಡಣೆ ಮಾಡಲಾಗಿದೆ. ಹೀಗಾಗಿ ಕರ್ನಾಟಕ ವಿದ್ಯುತ್ಛಕ್ತಿ ನಿಯಂತ್ರಣ ಆಯೋಗ (ಕೆಇಆರ್ಸಿ) 2024-25ನೇ ಸಾಲಿನ ವಿದ್ಯುತ್ ದರ ಪರಿಷ್ಕರಣೆ ಆದೇಶದಲ್ಲಿ ಕೃಷಿ ಪಂಪ್ಸೆಟ್ಗಳ ಆರ್.ಆರ್. ಸಂಖ್ಯೆಗೆ ಆಧಾರ್ ಜೋಡಣೆ ಕಡ್ಡಾಯಗೊಳಿಸಿದ್ದು, ಈ ಸಂಬಂಧ ಎಸ್ಕಾಂಗಳಿಗೆ ಸೂಚನೆ ನೀಡಿತ್ತು.
10 ಎಚ್ಪಿ ಸಾಮರ್ಥ್ಯದವರೆಗಿನ ಪಂಪ್ಸೆಟ್ ಹೊಂದಿರುವ ರೈತರ ಆಧಾರ್ ಸಂಖ್ಯೆ ಸಂಗ್ರಹಿಸುವ ಕಾರ್ಯ ನಡೆಯುತ್ತಿದೆ. ಆದರೆ ಹೀಗೆ ಸಂಗ್ರಹಿಸಲಾದ ಬಹುತೇಕ ಆರ್.ಆರ್. ಸಂಖ್ಯೆಗಳಿಗೆ ಮತ್ತು ಆಧಾರ್ ಸಂಖ್ಯೆಗೆ ಹೊಂದಾಣಿಕೆ ಆಗುತ್ತಿಲ್ಲ. ಎಷ್ಟೋ ಕಡೆ ಹೆಸರು ಬದಲಾಗಿದೆ. ಮತ್ತೆ ಹಲವು ಕಡೆ ತಪ್ಪಾಗಿ ಮುದ್ರಿತವಾಗಿದೆ.
ಸದ್ಯ ಜೋಡಣೆ ಪ್ರಕ್ರಿಯೆ ಪ್ರಾರಂಭಿಕ ಹಂತದಲ್ಲಿರುವುದರಿಂದ ತಕ್ಷಣಕ್ಕೆ ತೊಂದರೆಯಾಗದಿರಬಹುದು. ಆದರೆ ಪ್ರಕ್ರಿಯೆ ಮುಗಿದ ನಂತರ ತಾಳೆಯಾಗದ ರೈತರ ಸಬ್ಸಿಡಿಗೆ ಕತ್ತರಿ ಬೀಳಲಿದೆಯೇ ಎಂಬ ಆತಂಕ ಕಾಡತೊಡಗಿದೆ.
ಈ ನಡುವೆ ಮೂಲಗಳ ಪ್ರಕಾರ ಈಗಾಗಲೇ ಬೆಂಗಳೂರು ವಿದ್ಯುತ್ ಸರಬರಾಜು ಕಂಪೆನಿ (ಬೆಸ್ಕಾಂ) ಸಹಿತ ಎಲ್ಲ ಎಸ್ಕಾಂಗಳು ರೈತರ ಆಧಾರ್ ಸಂಖ್ಯೆಯನ್ನು ಸಂಗ್ರಹಿಸಿ, ಆಯಾ ಆರ್.ಆರ್. ಸಂಖ್ಯೆಯುಳ್ಳ ದತ್ತಾಂಶದೊಂದಿಗೆ ದಾಖಲಿಸಿವೆ. ಆದರೆ ಲಿಂಕ್ ಮಾಡಲು ಸಾಧ್ಯವಾಗಿಲ್ಲ. ಇದಕ್ಕೆ ಭಾರತೀಯ ವಿಶಿಷ್ಟ ಗುರುತು ಪ್ರಾಧಿಕಾರದ ಅನುಮತಿ ಕಡ್ಡಾಯ ಎನ್ನಲಾಗಿದೆ. ಈ ಸಂಬಂಧ ಪ್ರಾಧಿಕಾರಕ್ಕೆ ಪತ್ರ ಬರೆದಿದ್ದು, ಅನುಮತಿ ದೊರೆತಾಕ್ಷಣ ಜೋಡಣೆ ಮಾಡುವ ಕೆಲಸ ಆರಂಭವಾಗಲಿದೆ ಎಂದು ಮೂಲಗಳು ತಿಳಿಸಿವೆ.
ಮುದ್ದಿನ ನಾಯಿಗೆ 2 ಲಕ್ಷ ರೂ. ಮೌಲ್ಯದ ಚಿನ್ನದ ಸರ ಉಡುಗೊರೆ ನೀಡಿದ ಮಹಿಳೆ! ವೈರಲ್ ವಿಡಿಯೋ ನೋಡಿ