newsics.com
ಬೆಂಗಳೂರು: ರಾಜ್ಯದಲ್ಲಿ ಉಪ ಚುನಾವಣೆ ಕಣ ರಂಗೇರುತ್ತಿದ್ದು, ಬಿರುಸಿನ ಚಟುವಟಿಕೆಗಳು ಸಾಗಿವೆ. ಈಮಧ್ಯೆ, ಚನ್ನಪಟ್ಟಣ ಕ್ಷೇತ್ರದಲ್ಲಿ ಸಿಡಿ ರಾಜಕೀಯವೂ ಸದ್ದು ಮಾಡುತ್ತಿದೆ.
ಚನ್ನಪಟ್ಟಣ ಕಾಂಗ್ರೆಸ್ ಅಭ್ಯರ್ಥಿ ಸಿ ಪಿ ಯೋಗೇಶ್ವರ್ ಬಿಜೆಪಿ ತೊರೆದು ಕಾಂಗ್ರೆಸ್ ಸೇರಲು ಸಿಪಿವೈ ಪುತ್ರಿ ನಿಶಾ ಸಿಡಿಯೇ ಕಾರಣ ಎಂಬ ಮಾತು ಜೋರಾಗಿಯೇ ಕೇಳಿಬರುತ್ತಿದೆ.
ಯೋಗೇಶ್ವರ್ ಕಾಂಗ್ರೆಸ್ ಸೇರ್ಪಡೆ ಹಿಂದೆ ಡಿ ಕೆ ಶಿವಕುಮಾರ್ ಸಿಡಿ ರಹಸ್ಯ ಇದೆ ಎನ್ನುವ ಆರೋಪ ಕೇಳಿಬಂದಿದೆ.
ಚನ್ನಪಟ್ಟಣ ಕಾಂಗ್ರೆಸ್ ಅಭ್ಯರ್ಥಿ ಸಿ ಪಿ ಯೋಗೇಶ್ವರ್ ಅವರ ಪುತ್ರಿ ನಿಶಾ ಯೋಗೇಶ್ವರ್ ಅವರು ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ವಿಡಿಯೋ ಹಂಚಿಕೊಂಡಿದ್ದಾರೆ.
ಡಿ ಕೆ ಶಿವಕುಮಾರ್ ಸರ್.. ನನ್ನ ಸಿಡಿ ನಿಮ್ಮ ಬಳಿ ಇದ್ದರೆ ಯಾವುದೇ ಯೋಚನೆ ಮಾಡದೇ ರಿಲೀಸ್ ಮಾಡಿ ಎಂದು ಹೇಳಿದ್ದಾರೆ.
ಖಾಸಗಿ ಸುದ್ದಿ ವಾಹಿನಿಯಲ್ಲಿ ಈ ಸಿ ಡಿ ವಿಚಾರವಾಗಿ ಪ್ರಸ್ತಾಪವಾಗಿದ್ದು, ಪುತ್ರಿಯ ರಕ್ಷಣೆಗಾಗಿ ಸಿ ಪಿ ಯೋಗೇಶ್ವರ್ ಅವರು ಪಕ್ಷಾಂತರದ ನಿರ್ಧಾರ ತೆಗೆದುಕೊಂಡ್ರಾ ಎಂಬ ಬಗ್ಗೆ ಚರ್ಚೆಯಾಗುತ್ತಿದೆ.
ಮಗಳ ಸಿಡಿ ಬಳಸಿಕೊಂಡು ಡಿ ಕೆ ಶಿವಕುಮಾರ್ ಅವರು ಕಾಂಗ್ರೆಸ್ ಪಕ್ಷಕ್ಕೆ ಸಿ ಪಿ ಯೋಗೇಶ್ವರ್ ಅವರನ್ನ ಕರೆತಂದಿದ್ದಾರೆ ಎಂದು ಡಿ ಕೆ ಶಿವಕುಮಾರ್ ಮೇಲೆ ಆರೋಪ ಇದೆ ಎಂದು ನಿಶಾ ಯೋಗೇಶ್ವರ್ ಹೇಳಿದ್ದಾರೆ.
ಡಿ ಕೆ ಶಿವಕುಮಾರ್ ಸರ್, ನಿಮ್ಮ ಮೇಲೆ ಈ ರೀತಿಯಾದ ಆರೋಪ ಇದೆ. ನೀವು ನನ್ನ ಸಿಡಿ ಇಟ್ಟುಕೊಂಡು ನನ್ನ ತಂದೆಯನ್ನು ನಿಮ್ಮ ಪಕ್ಷಕ್ಕೆ ಸೆಳೆದುಕೊಂಡಿದ್ದೀರಿ ಎನ್ನುವ ಆರೋಪ ಇದೆ. ಡಿ ಕೆ ಶಿವಕುಮಾರ್ ಸರ್ ನೀವು ಯಾವುದಕ್ಕೂ ಹೆದರುವುದು ಬೇಡ, ನಿಮ್ಮ ಬಳಿ ಸಿಡಿ ಇದ್ರೆ ಹಿಂಜರಿಯದೇ ಸಿಡಿ ಬಿಡುಗಡೆ ಮಾಡಿ ಎಂದು ನಿಶಾ ಯೋಗೇಶ್ವರ್ ಮನವಿ ಮಾಡಿದ್ದಾರೆ.
ನನ್ನ ಅಗ್ನಿ ಪರೀಕ್ಷೆ ನಡೆಯುತ್ತಿದೆ. ಆ ಸಿಡಿ ಇಲ್ಲ ಎನ್ನುವುದಾದ್ರೆ ಅದನ್ನು ಸಹ ಜನರಿಗೆ ತಿಳಿಸಿ ಸರ್. ದೊಡ್ಡ ಆರೋಪ ನಿಮ್ಮ ಮೇಲಿದೆ. ನೀವು ದೊಡ್ಡವರು ಸರ್, ನಿಮ್ಮಲ್ಲಿ ಸಿಡಿ ವಿಷಯ ಮಾಮೂಲಿ, ಆದರೆ ನೀವು ಹೆಣ್ಣುಮಕ್ಕಳನ್ನು ಇಂತಹ ವಿಷಯಕ್ಕೂ ಎಳೆಯುತ್ತಿದ್ದೀರಾ ಎಂಬ ವಿಚಾರ ನನಗೆ ಶಾಕ್ ಆಗುವಂತೆ ಮಾಡಿದೆ.
ಡಿ ಕೆ ಶಿವಕುಮಾರ್ ಸರ್, ನೀವು ಒಬ್ರು ತಂದೆ. ನಿಮಗೂ ಹೆಣ್ಣು ಮಕ್ಕಳಿದ್ದಾರೆ. ಸರ್, ನಮ್ಮ ಪೀಳಿಗೆಗೆ ಸ್ಪಷ್ಟತೆ ಬೇಕು. ಆ ಸ್ಪಷ್ಟತೆಯನ್ನು ನೀವೇ ಕೊಡಿ ಸರ್. ನನ್ನ ಸಿಡಿ ನಿಜವಾಗಿಯೂ ನಿಮ್ಮ ಬಳಿ ಇದ್ದರೆ ಯಾವುದೇ ಯೋಚನೆ ಮಾಡದೇ ಬಿಡುಗಡೆ ಮಾಡಿ. ನಿಮ್ಮ ಉತ್ತರಕ್ಕೆ ನಾನು ಕಾಯುತ್ತಿರುತ್ತೇನೆ ಎಂದು ನಿಶಾ ಯೋಗೇಶ್ವರ್ ಒತ್ತಾಯಿಸಿದ್ದಾರೆ.
ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ನಿಂದ ಮಾಜಿ ಸಚಿವ ಸಿ ಪಿ ಯೋಗೇಶ್ವರ್ ಕಣಕ್ಕಿಳಿದಿದ್ದು, ಎನ್ಡಿಎ ಅಭ್ಯರ್ಥಿಯಾಗಿ ಮಾಜಿ ಮುಖ್ಯಮಂತ್ರಿ ಹಾಗೂ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಅವರ ಪುತ್ರ ನಿಖಿಲ್ ಕುಮಾರಸ್ವಾಮಿ ಸ್ಪರ್ಧಿಸಿದ್ದಾರೆ.
ಕಳೆದ ಲೋಕಸಭಾ ಚುನಾವಣೆಯಲ್ಲಿ ಸೋಲು ಕಂಡಿದ್ದ ಡಿ ಕೆ ಬ್ರದರ್ಸ್ ಈ ಚುನಾವಣೆಯಲ್ಲಿ ಗೆಲ್ಲುವ ಮೂಲಕ ದಳಪತಿಗಳಿಗೆ ಠಕ್ಕರ್ ಕೊಡಲು ಸಿ ಪಿ ಯೋಗೇಶ್ವರ್ ಅವರನ್ನು ಕಣಕ್ಕಿಳಿಸಿದ್ದಾರೆ. ಯೋಗೇಶ್ವರ್ ಸೆಳೆಯಲು ಡಿಕೆ ಶಿವಕುಮಾರ್ ನಿಶಾ ಸಿಡಿಯನ್ನಿಟ್ಟುಕೊಂಡು ಯೋಗೇಶ್ವರ್ ಅವರ ಮೇಲೆ ಬ್ಲ್ಯಾಕ್ಮೇಲ್ ತಂತ್ರ ಬಳಸಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ.
https://www.instagram.com/reel/DBlD3pHyzsu/?igsh=MTU0MHpsazh3dHFtMA==