newsics.com | ನ್ಯೂಸಿಕ್ಸ್
ಚಾಮರಾಜನಗರ: ಹನೂರು ತಾಲೂಕಿನಲ್ಲಿ ಮತ್ತೆ ಮನುಷ್ಯರ ಮೇಲೆ ಚಿರತೆ ದಾಳಿ ನಡೆಸಿದ ಘಟನೆ ನಡೆದಿದೆ. ಮನೆಯ ಮುಂಭಾಗ ಕುಳಿತಿದ್ದ ಅಜ್ಜಿ ಹಾಗೂ ಮೊಮ್ಮಗಳ ಮೇಲೆ ಚಿರತೆ ದಾಳಿ ನಡೆಸಿ, ಗಾಯಗೊಳಿಸಿದ ಆತಂಕಕಾರಿ ಘಟನೆ ಹನೂರು ತಾಲೂಕಿನ ಮೀಣ್ಯಂ ಗ್ರಾಮ ಪಂಚಾಯತಿ ವ್ಯಾಪ್ತಿಯ ತಟ್ಟೆಕೆರೆದೊಡ್ಡಿ ಗ್ರಾಮದಲ್ಲಿ ನಡೆದಿದೆ.
ಚಿರತೆ ದಾಳಿಯಿಂದ ಮೊಮ್ಮಗಳು ತೀವ್ರವಾಗಿ ಗಾಯಗೊಂಡಿದ್ದಾಳೆ. ಶಿವಮ್ಮ (55) ಹಾಗೂ 4 ವರ್ಷದ ಬಾಲಕಿ ಗಾಯಗೊಂಡಿದ್ದು, ಇವರನ್ನು ಹನೂರು ತಾಲೂಕಿನ ಕಾಮಗೆರೆಯ ಹೋಲಿ ಕ್ರಾಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ತಟ್ಟೆಕೆರೆ ದೊಡ್ಡಿ ಗ್ರಾಮದ ಶಿವಮ್ಮ ಮನೆಯ ಮುಂಭಾಗ ಕುಳಿತಿದ್ದಾಗ ಶನಿವಾರ ರಾತ್ರಿ ಎಂಟು ಗಂಟೆಯ ವೇಳೆ ಚಿರತೆಯು ಶಿವಮ್ಮ ಅವರ ಮೇಲೆ ದಾಳಿ ಮಾಡಿದೆ. ಇವರು ಕಿರುಚಾಡಿಕೊಂಡಿದ್ದರಿಂದ ಮೊಮ್ಮಗಳು ಮನೆಯ ಹೊರಗಡೆ ಬಂದಿದ್ದಾರೆ. ಈ ವೇಳೆ ಬಾಲಕಿ ಮೇಲೆಯೂ ಚಿರತೆ ದಾಳಿ ನಡೆಸಿದೆ. ಬಾಲಕಿ, ಅಜ್ಜಿಯ ಕಿರುಚಾಟ ಕೇಳಿ ಮನೆಯವರೆಲ್ಲ ಹೊರಗೆ ಓಡಿಬಂದಾಗ ಚಿರತೆ ಸ್ಥಳದಿಂದ ಪರಾರಿಯಾಗಿದೆ. ತಕ್ಷಣ ಇಬ್ಬರೂ ಗಾಯಾಳುಗಳಿಗೆ ಕೂಡ್ಲೂರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಲಾಗಿತ್ತು. ಬಳಿಕ ಹೆಚ್ಚಿನ ಚಿಕಿತ್ಸೆಗೆ ಬೇರೆ ಕಾಮಗೆರೆಯ ಹೋಲಿ ಆಸ್ಪತ್ರೆಯಲ್ಲಿ ದಾಖಲು ಮಾಡಲಾಗಿದೆ.
ಚಿರತೆ ದಾಳಿಯಲ್ಲಿ ಅಜ್ಜಿ ಮತ್ತು 4 ವರ್ಷದ ಮೊಮ್ಮಗಳು ಬದುಕುಳಿದಿದ್ದೇ ಪವಾಡ. ಚಿರತೆ ದಾಳಿ ಮಾಡಿದ ತಕ್ಷಣವೇ ಮನೆಯವರು ಹೊರಗೆ ಬಂದಿದ್ದರಿಂದ ಚಿರತೆ ಓಡಿ ಹೋಗಿದೆ. ಇದರಿಂದ ಇಬ್ಬರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ವಿಚಾರ ತಿಳಿಯುತ್ತಿದ್ದಂತೆ ಸ್ಥಳೀಯ ನಿವಾಸಿಗಳು ಹೂಗ್ಯಂ ವಲಯ ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದರು. ತಕ್ಷಣವೇ ಸ್ಥಳಕ್ಕಾಗಮಿಸಿದ ವಲಯ ಅರಣ್ಯಾಧಿಕಾರಿ ಜಿತೇಂದ್ರ ಹಾಗೂ ಸಿಬ್ಬಂದಿ ಮನೆಯ ಸುತ್ತಲು ಪರಿಶೀಲನೆ ನಡೆಸಿದ್ದಾರೆ. ಚಿರತೆ ಸೆರೆ ಹಿಡಿಯುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ.
Crime Case ಮೂರು ಹಸುಗಳ ಮೇಲೆ ಕತ್ತಿ ಇರಿತದ ವದಂತಿ, ಅಸಲಿ ಸತ್ಯ ಬಿಚ್ಚಿಟ್ಟ ಪೊಲೀಸ್ ವರಿಷ್ಠಾಧಿಕಾರಿ