newsics.com | ನ್ಯೂಸಿಕ್ಸ್
ನವದೆಹಲಿ: ಮನೆಯಲ್ಲಿರುವ ಹಳೆಯ ಚಿನ್ನದಿಂದಲೂ ಸುಲಭವಾಗಿ ಆದಾಯ ಪಡೆಯುವ ಯೋಜನೆಯೊಂದನ್ನು ಕೇಂದ್ರ ಸರ್ಕಾರ ರೂಪಿಸುತ್ತಿದೆ.
‘ಚಿನ್ನ ನಗದೀಕರಣ ಯೋಜನೆ’ ಎಂದು ಹೇಳಲಾಗುವ ಈ ಯೋಜನೆಯನ್ನು ಶೀಘ್ರದಲ್ಲೇ ಅಧಿಕೃತವಾಗಿ ಘೋಷಿಸಲು ಸಿದ್ಧತೆಗಳು ನಡೆಯುತ್ತಿವೆ.
ದೇಶದಲ್ಲಿ ಚಿನ್ನದ ಬೇಡಿಕೆಗೆ ಸಮಸ್ಯೆಯಾಗದಂತೆ ಹಾಗೂ ಆಭರಣ ಉದ್ಯಮದಲ್ಲಿ ತೊಡಗಿ ಕೊಂಡಿರುವ ಲಕ್ಷಾಂತರ ಕಾರ್ಮಿಕರ ಜೀವನೋಪಾಯಕ್ಕೆ ಧಕ್ಕೆಯೂ ಆಗದಂತೆ ಚಿನ್ನದ ಆಮದು ಕಡಿಮೆ ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಅಖಿಲ ಭಾರತ ಆಭರಣ ಮತ್ತು ಅಕ್ಕಸಾಲಿಗಳ ಒಕ್ಕೂಟ (ಎಐಜೆಜಿಎಫ್) ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿತ್ತು. ಆ ಬಳಿಕವೇ ಕೇಂದ್ರ ಸರ್ಕಾರವು ಚಿನ್ನದ ಆಮದು ಪ್ರಮಾಣವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಈ ಯೋಜನೆ ಜಾರಿಗೊಳಿಸಲು ಮುಂದಾಗಿದೆ. ಭಾರತೀಯರ ಮನೆಗಳಲ್ಲಿ ಇರುವ ಚಿನ್ನದ ಪೈಕಿ ಸ್ವಲ್ಪ ಚಿನ್ನ ಮಾರಕಟ್ಟೆಗೆ ಬಂದರೂ, ಆಮದು ಪ್ರಮಾಣ ಗಣನೀಯವಾಗಿ ಕಡಿಮೆಯಾಗುತ್ತದೆ ಎನ್ನುವುದು ಕೇಂದ್ರದ ಲೆಕ್ಕಾಚಾರ. ಮೂಲಗಳ ಪ್ರಕಾರ, ಯೋಜನೆಯ ನಿಯಮಾವಳಿಗಳನ್ನು ರೂಪಿಸಲಾಗುತ್ತಿದ್ದು, ಎರಡು ವಾರಗಳಲ್ಲಿ ಬಹಿರಂಗಪಡಿಸುವ ನಿರೀಕ್ಷೆ ಇದೆ.
ಗಳಿಕೆ ಹೇಗೆ?
ಚಿನ್ನದ ವ್ಯಾಪಾರಿಗಳನ್ನು ಚಿನ್ನ ಸಂಗ್ರಹಿಸುವ ಪಾಲುದಾರ ಎಂದು ಈ ಯೋಜಯಲ್ಲಿ ತೊಡಗಿಸಿಕೊಳ್ಳಲಾಗುತ್ತದೆ. ಗ್ರಾಹಕರು ತಮ್ಮ ಮನೆಯ ಬಳಿ ಇರುವ ಇಂತಹ ಮಾನ್ಯತೆ ಪಡೆದ ಅಥವಾ ಅಧಿಕೃತ ಚಿನ್ನ ಸಂಗ್ರಾಹಕರ ಬಳಿ ತಮ್ಮ ಚಿನ್ನವನ್ನು ಠೇವಣಿ ಇಡಬಹುದು. ಅದಕ್ಕೆ ವಾರ್ಷಿಕವಾಗಿ ಶೇ.2.25 ರಿಂದ ಶೇ.2.50ರವರೆಗೆ ಬಡ್ಡಿ ಸಿಗಲಿದೆ. ಒಂದು ಸಂಗತಿ ನೆನಪಿರಲಿ. ಠೇವಣಿ ಅವಧಿ ಮುಗಿದ ಬಳಿಕ, ನಿಮ್ಮ ಚಿನ್ನ ನೀವು ಠೇವಣಿ ಇಟ್ಟ ರೂಪದಲ್ಲಿಯೇ ಮರಳಿ ಸಿಗುವುದಿಲ್ಲ. ಬದಲಾಗಿ ಬಂಗಾರದ ಗಟ್ಟಿಯಾಗಿ ನಿಮಗೆ ಸಿಗುತ್ತದೆ. ಅದರ ಜತೆಗೆ ಚಿನ್ನದ ಮೌಲ್ಯದ ಮೇಲೆ ಬಡ್ಡಿಯೂ ಸಿಗಲಿದೆ.
ಗ್ರಾಹಕರಿಗೆ ಚಿನ್ನ ಇಡುವಾಗಲೇ ಈ ಕುರಿತು ತಿಳಿಹೇಳಿ, ಅಧಿಕೃತ ಕರಾರು ಮಾಡಲಾಗುತ್ತದೆ. ನೀವು 100 ಗ್ರಾಂ ಒಡವೆ ಕೊಟ್ಟರೆ, ಅದನ್ನು ಕರಗಿಸಿ ಅದರಲ್ಲಿರುವ 90 ಗ್ರಾಂ ‘ಶುದ್ದ ಚಿನ್ನ’ವನ್ನು ಮಾತ್ರ ಬಾಂಡ್ನಲ್ಲಿ ನಮೂದಿಸಲಾಗುತ್ತದೆ. ಠೇವಣಿ ಅವಧಿ ಮುಗಿದ ಬಳಿಕ ಬಡ್ಡಿ ಮೊತ್ತದ ಜತೆಗೆ, 90 ಗ್ರಾಂ ತೂಕದ ಹೊಸ ಚಿನ್ನದ ಬಿಸ್ಕತ್ ಆಥವಾ ನಾಣ್ಯ ಅಥವಾ ಅದಕ್ಕೆ ಸಮನಾದ ಮೊತ್ತವನ್ನು ನೀಡಲಾಗುತ್ತದೆ.
ಈಗಿರುವ ನಿಯಮಗಳ ಅನುಸಾರ ಬ್ಯಾಂಕುಗಳಿಗೆ ಮಾತ್ರ ಜನರಿಂದ ಚಿನ್ನವನ್ನು ಸಂಗ್ರಹಿಸಲು ಅನುಮತಿ ನೀಡಲಾಗುತ್ತದೆ. ಆದರೆ, ಹೊಸ ನಿಯಮದಂತೆ ದೇಶಾದ್ಯಂತ ಇರುವ ಚಿನ್ನದ ವರ್ತಕರು ಚಿನ್ನಸಂಗ್ರಹಿಸಬಹುದು. ಗ್ರಾಹಕರು ತಮ್ಮಮನೆ ಹತ್ತಿರದ, ನಂಬಿಕಸ್ಥ ಜುವೆಲರಿ ಅಂಗಡಿಗಳಲ್ಲೇ ನೇರವಾಗಿ ಚಿನ್ನವನ್ನು ಜಮಾ ಮಾಡಬಹುದು.
ಈ ಯೋಜನೆಯಿಂದ ಗ್ರಾಹಕರಿಗೇನು ಲಾಭ?
ಆದಾಯ: ಮನೆಯಲ್ಲಿ ಸುಮ್ಮನೆ ಚಿನ್ನ ಇಟ್ಟುಕೊಳ್ಳುವ ಬದಲು ವರ್ಷಕ್ಕೆ ಶೇ. 2.25 ರಿಂದ ಶೇ. 2.5 ರಷ್ಟು ಬಡ್ಡಿ ಗಳಿಸಬಹುದು
ಭಯವಿಲ್ಲ: ಚಿನ್ನವನ್ನು ಮನೆಯಲ್ಲಿಟ್ಟು ಕೊಂಡರೆ ಕಳ್ಳತನದ ಭಯ, ಬ್ಯಾಂಕ್ ನಲ್ಲಿಟ್ಟರೆ ಲಾಕರ್ ಶುಲ್ಕ ನೀಡಬೇಕು ಎಂಬ ಚಿಂತೆಗೆ ಮುಕ್ತಿ
ಆಯ್ಕೆ ಅವಕಾಶ: ಠೇವಣಿ ಅವಧಿ ಮುಗಿದ ಬಳಿಕ ನಗದು ಅಥವಾ ಶುದ್ಧ ಚಿನ್ನದ ರೂಪದಲ್ಲಿ ಹಿಂಪಡೆಯುವ ಅವಕಾಶ.
ದಾಖಲೆಗಳ ಕಿರಿಕಿರಿ ಇಲ್ಲ: ಹೊಸ ಯೋಜನೆಯಲ್ಲಿ ಗ್ರಾಹಕರು ಹಳೆಯ ಚಿನ್ನಕ್ಕೆ ದಾಖಲೆಗಳನ್ನು ನೀಡುವ, ಖರೀದಿಸಿದ ಚಿನ್ನಕ್ಕೆ ಬಿಲ್ ಇಲ್ಲ ಎಂಬ ಚಿಂತೆ ಇಲ್ಲ
ವಿನ್-ವಿನ್ ಸೂತ್ರವಿದು
ಇದು ಯಾರಿಗೂ ನಷ್ಟವಿಲ್ಲದ ‘ವಿನ್-ವಿನ್’ ಸೂತ್ರ. ಜನರಿಗೆ ಮನೆಯಲ್ಲೇ ಚಿನ್ನ ಇರಿಸಿಕೊಳ್ಳುವ ಬದಲು ಠೇವಣಿ ಇಟ್ಟರೆ ಬಡ್ಡಿ ಸಿಗುತ್ತದೆ. ಆಭರಣ ವ್ಯಾಪಾರಿಗಳಿಗೆ ಸುಲಭವಾಗಿ ಚಿನ್ನ ಸಿಗುತ್ತದೆ, ಅಲ್ಲದೇ ವ್ಯಾಪಾರ ವೃದ್ಧಿಗೂ ದಾರಿಯಾಗುತ್ತದೆ. ಸರ್ಕಾರಕ್ಕೆ ಆಮದು ಕಡಿಮೆಯಾಗುವುದರಿಂದ ವಿದೇಶಿ ವಿನಿಮಯ ಶುಲ್ಕದಲ್ಲಿ ಭಾರಿ ಉಳಿತಾಯವಾಗುತ್ತದೆ.
ಈ ಯೋಜನೆಯ ಹಿಂದಿನ ಉದ್ದೇಶ
* 1,000 ಟನ್- ಭಾರತೀಯರ ಮನೆಗಳಲ್ಲಿರುವ ಇಷ್ಟು ಮೊತ್ತದ ಚಿನ್ನ ಚಲಾವಣೆಗೆ ಬರಬಹುದು ಎಂಬುದು ಕೇಂದ್ರ ಸರ್ಕಾರದ ನಿರೀಕ್ಷೆ.
* 25,000-35,000 ಟನ್- ಚಿನ್ನ ಭಾರತೀಯರ ಮನೆಗಳಲ್ಲಿ ಇದೆ ಎಂದು ಅಂದಾಜಿಸಲಾಗಿದೆ.
* 8.57 ಲಕ್ಷ ಕೋಟಿ- ಭಾರತೀಯ ಕುಟುಂಬಗಳ ಬಳಿ ಇರುವ ಚಿನ್ನದ ಪೈಕಿ ಕೇವಲ ಶೇ.5 ರಷ್ಟು ಚಿನ್ನ ಈ ಯೋಜನೆಯಡಿ ಮಾರುಕಟ್ಟೆಗೆ ಬಂದರೂ, ಸುಮಾರು 8.57 ಲಕ್ಷ ಕೋಟಿ ರೂ. ನಗದು ಹರಿವು ಬರಲಿದೆ ಎಂದು ಅಂದಾಜಿಸಲಾಗಿದೆ.
E20 ಪೆಟ್ರೋಲ್ ಬಳಸಿದರೆ ವಾಹನದ ಮೈಲೇಜ್ ಕಡಿಮೆಯಾಗುತ್ತಾ? ಸರ್ಕಾರ ಹೇಳಿದ್ದೇನು
Bollywood ಬೆಂಗಳೂರು ಬೆಡಗಿ ಜೊತೆ ಸಪ್ತಪದಿ ತುಳಿಯಲಿದ್ದಾರೆ ‘ಮಿಸ್ಟರ್ ಪರ್ಫೆಕ್ಟ್’ ಅಮೀರ್ ಖಾನ್
Vaibhav ಮ್ಯಾಂಚೆಸ್ಟರ್ನಲ್ಲಿ ವೈಭವ್ ಸೂರ್ಯವಂಶಿ ಪದಾರ್ಪಣೆ: ಸಚಿನ್ ದಾಖಲೆ ಅಳಿಸಿದ ಬಾಲಕ!