newsics.com/ನ್ಯೂಸಿಕ್ಸ್
ಬೆಂಗಳೂರು : ರಾಜ್ಯದಲ್ಲಿ ಶೀಘ್ರದಲ್ಲೇ ವಿದ್ಯುತ್ ವಿತರಣೆ ಖಾಸಗಿ ವಲಯದ ಪಾಲಾಗುವ ಸಾಧ್ಯತೆ ಹೆಚ್ಚಾಗಿದೆ.
ಖಾಸಗಿ ವಿದ್ಯುತ್ ಉತ್ಪಾದನೆ ಹಾಗೂ ವಿತರಣಾ ಕಂಪನಿಯಾದ ‘ದಿ ಟಾಟಾ ಪವರ್ ಕಂಪೆನಿ ಲಿಮಿಟೆಡ್’ ರಾಜ್ಯದ ಪ್ರಮುಖ 15 ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ವಿದ್ಯುತ್ ವಿತರಣೆಗೆ ಪರವಾನಗಿ ಕೋರಿ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ (ಕೆಇಆರ್ಸಿ)ಕ್ಕೆ ಅರ್ಜಿ ಸಲ್ಲಿಸಿದೆ.
2003ರ ವಿದ್ಯುತ್ ಕಾಯ್ದೆ ಸೆಕ್ಷನ್ 14 ಹಾಗೂ 15ರ ಅಡಿ ವಿದ್ಯುತ್ ವಿತರಣೆಗೆ ಪರವಾನಗಿ ಕೋರಿ ಕೆಇಆರ್ಸಿಗೆ ದಿ ಟಾಟಾ ಪವರ್ ಕಂಪನಿಯಿಂದ ಅರ್ಜಿ ಸಲ್ಲಿಕೆಯಾಗಿದೆ. ಈ ಸಂಬಂಧ ಸಾರ್ವಜನಿಕರಿಂದ ಆಕ್ಷೇಪಣೆ ಕೋರಿ ಪ್ರಕಟಣೆ ಹೊರಡಿಸಿದ್ದು, ಇದು ಖಾಸಗೀಕರಣದ ಷಡ್ಯಂತ್ರ ಎಂದು ಆರೋಪಿಸಲಾಗುತ್ತಿದೆ.
ಒಡಿಶಾ, ದೆಹಲಿ, ಮುಂಬೈ ಮತ್ತು ಇತರ ದೇಶಗಳಲ್ಲಿ ಇರುವಂತೆ ರಾಜ್ಯ ಇಂಧನ ವಲಯ ಖಾಸಗೀಕರಣಕ್ಕೆ ಬಾಗಿಲು ತೆರೆದಿದೆ. ಟಾಟಾ ಪವರ್ ಕಂಪನಿಯು ಬೆಸ್ಕಾಂ (ಬೆಂಗಳೂರು), ಹೆಸ್ಕಾಂ (ಹುಬ್ಬಳ್ಳಿ-ಧಾರವಾಡ), ಸಿಇಎಸ್ಸಿ (ಮೈಸೂರು) ಮತ್ತು ಮೆಸ್ಕಾಂ (ಮಂಗಳೂರು) ಮತ್ತಿತರ ಕಡೆಗಳಲ್ಲಿ ವಿದ್ಯುತ್ ಸರಬರಾಜು ಮಾಡಲು ವಿತರಣಾ ಪರವಾನಗಿಗಾಗಿ ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗ (ಕೆಇಆರ್ಸಿ) ಮುಂದೆ ಅರ್ಜಿ ಸಲ್ಲಿಸಿದೆ.
ಕಂಪನಿಯು ಬೆಳಗಾವಿ, ಉತ್ತರ ಕನ್ನಡ, ಧಾರವಾಡ, ಮೈಸೂರು, ಚಾಮರಾಜನಗರ, ಹಾಸನ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಕೋಲಾರ, ರಾಮನಗರ, ತುಮಕೂರು, ಚಿತ್ರದುರ್ಗ, ಶಿವಮೊಗ್ಗ, ದಕ್ಷಿಣ ಕನ್ನಡ ಮತ್ತು ಉಡುಪಿಯಲ್ಲಿ ವಿತರಣಾ ಹಕ್ಕುಗಳನ್ನು ಕೋರಿ ಇತ್ತೀಚೆಗೆ ಅರ್ಜಿ ಸಲ್ಲಿಸಿದೆ ಎಂದು ಕೆಇಆರ್ಸಿ ಅಧಿಕಾರಿಗಳು ತಿಳಿಸಿದ್ದಾರೆ.
ಟಾಟಾ ಪವರ್ ಕಂಪನಿ ಅರ್ಜಿ ಸಲ್ಲಿಸಿದ ಬೆನ್ನಲ್ಲೇ ಕೆಇಬಿ ನೌಕರರ ವಿವಿಧ ಸಂಘಗಳ ಒಕ್ಕೂಟವು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಉಗ್ರ ಹೋರಾಟದ ಎಚ್ಚರಿಕೆ ನೀಡಿದೆ.
ಕರ್ನಾಟಕ ವಿದ್ಯುತ್ ನೌಕರರ ಸಂಘಗಳ ಒಕ್ಕೂಟದ ಅಧ್ಯಕ್ಷ ಕೆ. ಬಲರಾಮ್ ಅವರು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದು, ವಿತರಣಾ ಜಾಲದ ಪರವಾನಗಿ ಕೇಳಿರುವುದನ್ನು ಖಂಡಿಸುತ್ತೇವೆ. ರಾಜ್ಯದ ಜನತೆಯ ಆಸ್ತಿಯಾಗಿರುವ ವಿದ್ಯುತ್ ವಲಯವನ್ನು ಖಾಸಗೀಕರಣಗೊಳಿಸುವ ಹಿಂಬಾಗಿಲ ಯತ್ನವಿದು. ಇದು ನೌಕರರು ಮಾತ್ರವಲ್ಲದೆ ರಾಜ್ಯದ ಗ್ರಾಹಕರ ಹಿತಾಸಕ್ತಿಗೆ ಮಾರಕವಾಗಿದೆ. ಖಾಸಗೀಕರಣದಿಂದ ಬಡ ಮತ್ತು ಮಧ್ಯಮ ವರ್ಗದವರ ಮೇಲೆ ದರ ಏರಿಕೆಯ ಬರೆ ಬೀಳಲಿದೆ. ಹೀಗಾಗಿ ಇದರ ವಿರುದ್ಧ ರಾಜ್ಯಾದ್ಯಂತ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುತ್ತದೆ ಎಂದು ಹೇಳಿದ್ದಾರೆ.
Bigg Boss Kavya Shaiva ಬಿಗ್ ಬಾಸ್ ಸ್ಪರ್ಧಿ ಕಾವ್ಯಾ ಶೈವಗೆ ವೇದಿಕೆಯಲ್ಲೇ ಭಾರೀ ಅವಮಾನ