Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ಸರ್ಕಾರಿ ಮತ್ತು ಅನುದಾನಿತ ಶಾಲೆಗಳ ವಿದ್ಯಾರ್ಥಿಗಳಿಗೆ ಪ್ರತಿ ವರ್ಷ ನೀಡುತ್ತಿದ್ದ ಶೂ ಮತ್ತು ಸಾಕ್ಸ್ ಬದಲು ಈ ಬಾರಿ ಚಪ್ಪಲಿ ನೀಡುವ ಸಾಧ್ಯತೆ ಇದೆ. ಈ ಯೋಜನೆಗೆ ಶಿಕ್ಷಣ ಇಲಾಖೆ ಪ್ಲಾನ್ ಮಾಡುತ್ತಿದ್ದು, ಹವಾಮಾನ ಅನುಗುಣವಾಗಿ ವಿದ್ಯಾರ್ಥಿಗಳಿಗೆ ಸೌಕರ್ಯವಾಗುವಂತೆ ಈ ಬದಲಾವಣೆಯನ್ನು ತರಲು ಇಲಾಖೆ ತಯಾರಿ ನಡೆಸುತ್ತಿದೆ. ಇದಕ್ಕೆ ಬೇಡಿಕೆ ಇರುವ ಜಿಲ್ಲೆಗಳ ಮಾಹಿತಿ ಸಂಗ್ರಹಕ್ಕೆ ಸೂಚನೆ ನೀಡಲಾಗಿದೆ.
ಶೂ ಬದಲಿಗೆ ಚಪ್ಪಲಿ ನೀಡುವ ಈ ಯೋಜನೆಯು ವಿದ್ಯಾರ್ಥಿಗಳ ಆರೋಗ್ಯ ಮತ್ತು ಸೌಕರ್ಯಕ್ಕೆ ಆದ್ಯತೆ ನೀಡುವಂತಹದ್ದು ಎಂದು ಇಲಾಖೆ ಅಧಿಕಾರಿಗಳು ಹೇಳಿದ್ದಾರೆ.
ಶಿಕ್ಷಣ ಇಲಾಖೆ ಸರ್ಕಾರಿ ಮತ್ತು ಅನುದಾನಿತ ಶಾಲೆಗಳ 1ರಿಂದ 10ನೇ ತರಗತಿಯ ವಿದ್ಯಾರ್ಥಿಗಳಿಗೆ ಪ್ರತಿ ವರ್ಷ ಒಂದು ಜೊತೆ ಶೂ ಮತ್ತು ಎರಡು ಜತೆ ಸಾಕ್ಸ್ ವಿತರಿಸುತ್ತಿತ್ತು. ಇದಕ್ಕೆ ನಿಗದಿಪಡಿಸಿದ ಮೊತ್ತವು ತರಗತಿಯ ಅನುಸಾರ ಬದಲಾಗುತ್ತದೆ. ಉದಾಹರಣೆಗೆ, 1ರಿಂದ 5ನೇ ತರಗತಿಯ ವಿದ್ಯಾರ್ಥಿಗೆ ತಲಾ 265 ರೂಪಾಯಿ, 6 ರಿಂದ 8ನೇ ತರಗತಿಗೆ 295 ರೂಪಾಯಿ ಮತ್ತು 9ರಿಂದ 10ನೇ ತರಗತಿಗೆ 325 ರೂಪಾಯಿ ನಿಗದಿಯಾಗಿತ್ತು. ಈ ಯೋಜನೆಯು ವಿದ್ಯಾರ್ಥಿಗಳಿಗೆ ಸಮವಸ್ತ್ರದ ಜೊತೆಗೆ ಪಾದರಕ್ಷೆಯನ್ನು ಉಚಿತವಾಗಿ ನೀಡುವ ಮೂಲಕ ಅವರ ಶೈಕ್ಷಣಿಕ ಜೀವನವನ್ನು ಸುಗಮಗೊಳಿಸುವ ಉದ್ದೇಶ ಹೊಂದಿತ್ತು. ಆದರೆ ಕೆಲವು ಜಿಲ್ಲೆಗಳಲ್ಲಿ ಹವಾಮಾನದ ಕಾರಣದಿಂದ ಶೂ ಧರಿಸುವುದು ಕಷ್ಟಕರವಾಗಿದೆ ಎಂಬ ದೂರುಗಳು ಬರುತ್ತಿವೆ. ಈ ಕಾರಣಕ್ಕೆ ಶೂ ಬದಲು ಚಪ್ಪಲಿ ನೀಡುವ ಪ್ಲಾನ್ ಮಾಡಲಾಗುತ್ತಿದೆ.
ಬೇಸಿಗೆ ಮತ್ತು ಮಳೆಗಾಲದಲ್ಲಿ ಶೂ ಮತ್ತು ಸಾಕ್ಸ್ ಧರಿಸುವುದು ಅಸಾಧ್ಯವಾಗುತ್ತದೆ ಎಂಬುದು ಪ್ರಮುಖ ಕಾರಣ. ಮಳೆಗಾಲದಲ್ಲಿ ಸಾಕ್ಸ್ ಒದ್ದೆಯಾಗಿ ಸ್ಮೆಲ್ ಬರುವ ಸಾಧ್ಯತೆ ಇದೆ. ಬೇಸಿಗೆಯಲ್ಲಿ ದೀರ್ಘಕಾಲ ಶೂ ಧರಿಸಿದರೆ ಪಾದಕ್ಕೆ ಸೋಂಕು ತಗುಲುವ ಅಪಾಯವಿದೆ. ಇದರಿಂದ ವಿದ್ಯಾರ್ಥಿಗಳ ಆರೋಗ್ಯಕ್ಕೆ ಹಾನಿಯಾಗುತ್ತದೆ ಎಂಬ ದೂರುಗಳು ಬಂದಿವೆ. ಈ ಹಿನ್ನೆಲೆಯಲ್ಲಿ ಶಿಕ್ಷಣ ಇಲಾಖೆ ಚಪ್ಪಲಿ ನೀಡುವ ಯೋಜನೆಯನ್ನು ಪರಿಗಣಿಸಿದೆ.
ಇನ್ನೂ ಚಪ್ಪಲಿಗೆ ಒಲವು ಯಾಕೆ ಎಂಬುದನ್ನು ನೋಡುವುದಾದರೆ, ಮಳೆ ಮತ್ತು ಬೇಸಿಗೆಯಲ್ಲಿ ಧರಿಸಲು ಸುಲಭ, ಸೋಂಕು ತಪ್ಪಿಸುವುದು ಮತ್ತು ಸಾಕ್ಸ್ ಸಮಸ್ಯೆ ಇಲ್ಲದಿರುವುದು ಪ್ರಮುಖ ಕಾರಣಗಳು. ಈ ಯೋಜನೆಯನ್ನು ಜಾರಿಗೆ ತರಲು ಇಲಾಖೆ ಸಕ್ರಿಯವಾಗಿದೆ. ಬೇಡಿಕೆ ಇರುವ ಜಿಲ್ಲೆಗಳ ಮಾಹಿತಿ ಸಂಗ್ರಹಕ್ಕೆ ಉಪನಿರ್ದೇಶಕರಿಗೆ ಸೂಚನೆ ನೀಡಲಾಗಿದೆ. ಉರ್ದು ಮತ್ತು ಇತರೆ ಅಲ್ಪ ಸಂಖ್ಯಾತ ಭಾಷಾ ಶಾಲೆಗಳ ನಿರ್ದೇಶನಾಲಯಕ್ಕೂ ಇದೇ ಸೂಚನೆ ಹೋಗಿದೆ. ಅಂತಹ ಜಿಲ್ಲೆಗಳ ಪಟ್ಟಿ ಮಾಡಿ, ಹವಾಮಾನ ಅನುಗುಣವಾಗಿ ಚಪ್ಪಲಿ ನೀಡುವ ತಯಾರಿ ನಡೆಯುತ್ತಿದೆ. ಈ ಮಾಹಿತಿ ಕಲೆ ಹಾಕಿ, ಯಾವ ಜಿಲ್ಲೆಗಳಲ್ಲಿ ಚಪ್ಪಲಿ ಅಗತ್ಯವಿದೆ ಎಂಬುದನ್ನು ತಿಳಿದುಕೊಂಡು ಯೋಜನೆಯನ್ನು ಅನುಷ್ಠಾನಗೊಳಿಸುವ ಉದ್ದೇಶವಿದೆ.
ಈ ಯೋಜನೆ ಹೊಸದಲ್ಲ. 2015ರಲ್ಲಿಯೂ ಶೂ ಬದಲು ಚಪ್ಪಲಿ ನೀಡುವ ಯೋಜನೆ ಇತ್ತು. ಆದರೆ ಕಾರಣಾಂತರಗಳಿಂದ ಅದನ್ನು ಕೈಬಿಡಲಾಗಿತ್ತು. ಈಗ ಮತ್ತೆ ಈ ಯೋಜನೆಯನ್ನು ಪುನರ್ ಪರಿಶೀಲಿಸಲಾಗುತ್ತಿದೆ. ಶಿಕ್ಷಣ ಇಲಾಖೆಯ ಅಧಿಕಾರಿಗಳು, ವಿದ್ಯಾರ್ಥಿಗಳ ಸೌಕರ್ಯ ಮತ್ತು ಆರೋಗ್ಯವನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರ ತೆಗೆದುಕೊಳ್ಳುತ್ತಿದ್ದಾರೆ. ಈ ಯೋಜನೆ ಜಾರಿಯಾದರೆ, ವಿದ್ಯಾರ್ಥಿಗಳಿಗೆ ಹೆಚ್ಚು ಸೌಕರ್ಯವಾಗುತ್ತದೆ ಮತ್ತು ಶಾಲಾ ದಿನಗಳು ಸುಗಮವಾಗುತ್ತವೆ ಎಂಬ ನಿರೀಕ್ಷೆ ಇದೆ.