newsics.com
ವಯನಾಡು: ಭೀಕರ ದುರಂತ ಸಂಭವಿಸಿದ ಕೇರಳದ ವಯನಾಡಲ್ಲೀಗ ಬೇಕರಿ/ ರೆಸ್ಟೋರೆಂಟ್ವೊಂದು ಭಾರೀ ಸದ್ದು ಮಾಡುತ್ತಿದೆ. ಬೇಕರಿಯ ಹೆಸರೇ ವೈರಲ್ ಆಗಿದೆ.
ಮಡದಿಯ ಬಹುದಿನಗಳ ಆಸೆ ಪೂರೈಸಿದ ಆದರ್ಶ ಪತಿಯ ನೈಜಕತೆಯಿದು. ಜುಲೈ 30 ರಂದು ವಯನಾಡಿನಲ್ಲಿ ಸಂಭವಿಸಿದ ಭೂಕುಸಿತದಲ್ಲಿ ಮೃತಪಟ್ಟ ಮಹಿಳೆಯ ವಿದೇಶದಲ್ಲಿ ನೆಲೆಸಿದ್ದ ಪತಿ ತನ್ನ ಮಡದಿಯ ಆಸೆಯಂತೆ ತನ್ನ ಹುಟ್ಟೂರಿನಲ್ಲಿ ರೆಸ್ಟೋರೆಂಟ್ ಮತ್ತು ಬೇಕರಿ ತೆರೆದಿದ್ದಾನೆ.
ವಿದೇಶದಲ್ಲಿ ನೆಲೆಸಿದ್ದ ಪತಿ ನೌಶಾಲ್ ಕುಟುಂಬದೊಂದಿಗೆ ತನ್ನ ಹುಟ್ಟೂರಿನಲ್ಲೇ ನೆಲೆಸಬೇಕು ಎಂಬುದು ಪತ್ನಿಯ ಆಸೆಯಾಗಿದ್ದು, ಅದಕ್ಕಾಗಿ ವಯನಾಡಿನ ಮೆಪ್ಪಾಡಿಯಲ್ಲಿ ಬೇಕರಿಯನ್ನು ತೆರೆದು ಮೃತ ಪತ್ನಿಯ ಆಸೆ ಈಡೇರಿಸಿದ್ದಾನೆ.
ವಿಶೇಷವೆಂದರೆ ಈ ರೆಸ್ಟೋರೆಂಟ್ ಮತ್ತು ಬೇಕರಿಗೆ ನೌಶಾಲ್ ಯಾವುದೇ ಆಡಂಬರದ ನಾಮಫಲಕವನ್ನು ಅಳವಡಿಸಲಿಲ್ಲ. ತನ್ನ ಪತ್ನಿ ಮತ್ತು ಕುಟುಂಬಸ್ಥರೊಂದಿಗೆ ಭೂಕುಸಿತದಲ್ಲಿ ಪ್ರಾಣ ಕಳೆದುಕೊಂಡ 300 ಮಂದಿಯ ಸ್ಮರಣಾರ್ಥ ಭೂಕುಸಿತ ಸಂಭವಿಸಿದ ದಿನವಾದ ‘ಜುಲೈ 30’ ಎಂದೇ ಹೆಸರಿಟ್ಟಿದ್ದಾರೆ.
ಮುಂಡಕ್ಕೈ-ಚೂರಲ್ಮಲಾ ಪ್ರದೇಶಗಳಲ್ಲಿ ಸಂಭವಿಸಿದ ವಿನಾಶಕಾರಿ ಭೂಕುಸಿತದಲ್ಲಿ ಅವರೆಲ್ಲರೂ ಮೃತಪಟ್ಟಿರುವುದರಿಂದ ಪತ್ನಿ ಸಜನಾ ಅಥವಾ ಕುಟುಂಬದ ಇತರ ಯಾವುದೇ ಸದಸ್ಯರು ಇಲ್ಲ ಎನ್ನುವುದೇ ಬೇಸರದ ವಿಚಾರ.
ಭೂಕುಸಿತದಿಂದ ನಾಶವಾದ ಮತ್ತು ಈಗ ಕೇವಲ ನೆನಪಾಗಿ ಉಳಿದಿರುವ ಹಿಂದಿನ ಮುಂಡಕ್ಕೈ ಗ್ರಾಮದ ವರ್ಣಚಿತ್ರವನ್ನು ನೌಶಾಲ್ ರೆಸ್ಟೋರೆಂಟ್ ಒಳಗೆ ಪ್ರದರ್ಶಿಸಿದ್ದಾರೆ. ಈ ರೆಸ್ಟೋರೆಂಟ್ ಮೆಪ್ಪಾಡಿ-ತೊಲ್ಲಾಯಿರಂ ಕಂಡಿ ರಸ್ತೆಯಲ್ಲಿದೆ.
ದುರಂತಕ್ಕೆ ಮೂರು ತಿಂಗಳ ಮೊದಲು ಮುಂಡಕ್ಕೈ ನಿಂದ ಒಮಾನ್ಗೆ ತೆರಳಿದ್ದ ನೌಶಾಲ್, ಜುಲೈ 30 ರ ಮುಂಜಾನೆ ಭೂಕುಸಿತದಿಂದ ಅವರು ಪತ್ನಿ ಸಜನಾ, ಅವರ ಇಬ್ಬರು ಮಕ್ಕಳು, ಅವರ ಪೋಷಕರು ಮತ್ತು ಸಹೋದರನ ಕುಟುಂಬವನ್ನು ಕಳೆದುಕೊಂಡರು.
ನಾನು ಒಮನ್ನಿಂದ ಹಿಂತಿರುಗಬೇಕೆಂದು ನನ್ನ ಹೆಂಡತಿ ಬಯಸಿದ್ದಳು ಮತ್ತು ನಾವು ಒಟ್ಟಿಗೇ ವಾಸಿಸಲು ಬೇಕರಿಯನ್ನು ಪ್ರಾರಂಭಿಸುವಂತೆ ಅವಳು ಯಾವಾಗಲೂ ಸಲಹೆ ನೀಡುತ್ತಿದ್ದಳು. ನನ್ನ ಕುಟುಂಬದ ಆಸೆ ಪೂರೈಸಲು ನಾನು ಬೇಕರಿಯನ್ನು ಸ್ಥಾಪಿಸಲು ನಿರ್ಧರಿಸಿದೆ. ಆದರೆ ಅದು ಸಾಕಾರವಾಗುವಾಗ ಸಾಕ್ಷಿಯಾಗಲು ಅವಳಿಲ್ಲ ಎಂದು ನೌಶಾಲ್ ಬೇಸರ ವ್ಯಕ್ತಪಡಿಸಿದ್ದಾರೆ.
B.V Subbarao No More: ಮಲೆನಾಡಿನ ಮಿಡಿ ಮಾವು ತಜ್ಞ ಬಿ.ವಿ. ಸುಬ್ಬರಾವ್ ಇನ್ನಿಲ್ಲ