newsics.com
ಶಬರಿಮಲೆ: ಶ್ರೀ ಅಯ್ಯಪ್ಪ ಸನ್ನಿಧಾನದ 18 ಮೆಟ್ಟಿಲಲ್ಲಿ ನಿಂತು ಫೋಟೋ ತೆಗೆಸಿಕೊಂಡ 23 ಪೊಲೀಸ್ ಅಧಿಕಾರಿಗಳಿಗೆ ಶಿಸ್ತಿನ ಕ್ರಮವಾಗಿ ಕಠಿಣ ತರಬೇತಿ ನೀಡುವ ಬಗ್ಗೆ ಎಡಿಜಿಪಿ ಎಸ್. ಶ್ರೀಜಿತ್ ಆದೇಶ ಹೊರಡಿಸಿದ್ದಾರೆ.
ಪೊಲೀಸರ ವಿರುದ್ಧ ಕೈಗೊಂಡಿರುವ ಕ್ರಮಗಳ ಕುರಿತು ತಿಳಿಸಿ ಎಡಿಜಿಪಿ ಗುರುವಾರ (ನ.28) ಹೈಕೋರ್ಟ್ಗೆ ವರದಿ ಸಲ್ಲಿಸಲಿದ್ದಾರೆ.
ಒಂದನೆ ಹಂತದ ಕರ್ತವ್ಯ ಮುಗಿಸಿದ ಎಸ್ಎಪಿ ಶಿಬಿರದ ಪೊಲೀಸರು ಕರ್ತವ್ಯದ ಕೊನೆಯ ದಿನವಾದ ಸೋಮವಾರ 18 ಮೆಟ್ಟಿಲುಗಳಲ್ಲಿ ನಿಂತು ಫೋಟೊ ತೆಗೆಸಿಕೊಂಡಿದ್ದರು. ಪೊಲೀಸರು ತೆಗೆಸಿಕೊಂಡಿದ್ದ ಫೋಟೋ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ವ್ಯಾಪಕ ಟೀಕೆಗೊಳಗಾಗಿತ್ತು.
ಹೈಕೋರ್ಟ್ ಮಧ್ಯ ಪ್ರವೇಶಿಸಿ ಘಟನೆ ಕುರಿತು ಶಬರಿಮಲೆ ಸಮನ್ವಯದ ಉಸ್ತುವಾರಿ ಹೊತ್ತಿದ್ದ ಎಡಿಜಿಪಿ ಅವರಿಂದ ವಿವರಣೆ ಕೇಳಿತ್ತು. ಎಡಿಜಿಪಿ ಸನ್ನಿಧಾನದ ಭದ್ರತೆಯ ಉಸ್ತುವಾರಿ ವಹಿಸಿರುವ ಶಬರಿಮಲೆ ವಿಶೇಷ ಅಧಿಕಾರಿ ಎಸ್ಪಿ ಕೆ.ಇ.ಬೈಜು ಅವರಿಂದ ವಿವರಣೆ ಕೇಳಿದ್ದರು.
ಶಬರಿಮಲೆಯಿಂದ ಇವರನ್ನು ಮನೆಗೆ ಹೋಗಲು ಬಿಡದೆ ಕಣ್ಣೂರಿನ ಕೆಎಪಿ-4 ಕ್ಯಾಂಪ್ನಲ್ಲಿ ಕಠಿಣ ತರಬೇತಿ ನೀಡಲಾಗುವುದು. ಮುಂದಿನ ಕ್ರಮಗಳ ಬಗ್ಗೆಯೂ ಚಿಂತನೆ ನಡೆಸಲಾಗುತ್ತಿದೆ ಎಂದು ವರದಿಯಾಗಿದೆ.
18 ಮೆಟ್ಟಿಲಲ್ಲಿ ಫೋಟೊ ತೆಗೆಯಬಾರದು ಎಂದು ನಮಗೆ ತಿಳಿದಿರಲಿಲ್ಲ. ಇದು ಆಚಾರದ ಉಲ್ಲಂಘನೆ ಎಂಬುದು ಗೊತ್ತಿರಲಿಲ್ಲ ಎಂದು ಪೊಲೀಸರು ವಿವರಣೆ ನೀಡಿದ್ದರು. ಆದರೆ ಈ ಸ್ಪಷ್ಟನೆಯನ್ನು ಪೊಲೀಸ್ ಕೇಂದ್ರ ಕಚೇರಿ ತಿರಸ್ಕರಿಸಿದೆ.
ಸನ್ನಿಧಾನದಲ್ಲಿ ಕರ್ತವ್ಯ ನಿರ್ವಹಿಸುವ ಎಲ್ಲಾ ಪೊಲೀಸರಿಗೆ ಇಂತಹ ವಿಷಯಗಳು ಗೊತ್ತಿರಬೇಕು ಎಂದು ಉನ್ನತ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಯಾರಿಗೂ ಅನುಮತಿಯಿಲ್ಲ:
ಪವಿತ್ರ ಇರುಮುಡಿಯಿಲ್ಲದೆ ಯಾರೂ 18ನೇ ಮೆಟ್ಟಿಲು ಏರುವಂತಿಲ್ಲ. ಪಂದಳಂ ರಾಜನ ಪ್ರತಿನಿಧಿಗೆ ಮಾತ್ರ ಇರುಮುಡಿ ಇಲ್ಲದೆ 18 ಮೆಟ್ಟಿಲು ಏರುವ ಹಕ್ಕಿದೆ. ಶಬರಿಮಲೆಯಂತೆ 18 ಮೆಟ್ಟಿಲು ಪವಿತ್ರವೆಂದು ಪರಿಗಣಿಸಲ್ಪಟ್ಟಿದೆ. ಶಬರಿಮಲೆಯ ಮುಖ್ಯ ಅರ್ಚಕರು ಸಹಿತ ಎಲ್ಲರೂ ಅಯ್ಯಪ್ಪನಿಗೆ ನಮಿಸಿಕೊಂಡು ಹಿಂದಕ್ಕೆ ಹೆಜ್ಜೆಯಿಡುತ್ತಾ 18 ಮೆಟ್ಟಿಲು ಇಳಿಯುತ್ತಾರೆ. ಭಕ್ತರನ್ನು 18 ಮೆಟ್ಟಿಲು ದಾಟಿಸಲು ಮೆಟ್ಟಿಲುಗಳ ಬದಿಗೆ ನಿಂತು ಪೊಲೀಸರು ಸಹಾಯ ಮಾಡುತ್ತಾರೆ. ಸನ್ನಿಧಾನದಲ್ಲಿ ಛಾಯಾಗ್ರಹಣವನ್ನು ನಿಷೇಧಿಸಲಾಗಿದೆ.
Different Bakery ಈ ಬೇಕರಿ ಹೆಸರೇ ‘ಜುಲೈ 30’! ಇದರ ಹಿಂದಿದೆ ಕರಾಳ ನೆನಪು… ಏನದು?
B.V Subbarao No More: ಮಲೆನಾಡಿನ ಮಿಡಿ ಮಾವು ತಜ್ಞ ಬಿ.ವಿ. ಸುಬ್ಬರಾವ್ ಇನ್ನಿಲ್ಲ