newsics.com
ಮುಂಬೈ(ಮಹಾರಾಷ್ಟ್ರ): ಸಿಂಧುದುರ್ಗ ಜಿಲ್ಲೆಯಲ್ಲಿ 50 ವರ್ಷದ ಮಹಿಳೆಯೊಬ್ಬರು ಕಾಡಿನಲ್ಲಿ ಮರಕ್ಕೆ ಸರಪಳಿಯಿಂದ ಕಟ್ಟಿಹಾಕಿರುವ ರೀತಿಯಲ್ಲಿ ಪತ್ತೆಯಾಗಿದ್ದಾರೆ.
ಆಕೆಯ ಯುಎಸ್ ಪಾಸ್ಪೋರ್ಟ್ನ ಫೋಟೊಕಾಪಿ ಮತ್ತು ತಮಿಳುನಾಡು ವಿಳಾಸದೊಂದಿಗೆ ಆಧಾರ್ ಕಾರ್ಡ್ ಸೇರಿದಂತೆ ಇತರ ದಾಖಲೆಗಳು ಆಕೆಯ ಬಳಿ ಪತ್ತೆಯಾಗಿವೆ ಎಂದು ಪೊಲೀಸ್ ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ.
ಶನಿವಾರ ಸಂಜೆ ಜಿಲ್ಲೆಯಿಂದ ಸರಿಸುಮಾರು 450 ಕಿಲೋಮೀಟರ್ ದೂರದಲ್ಲಿರುವ ಸೋನುರ್ಲಿ ಗ್ರಾಮದಲ್ಲಿ ಮಹಿಳೆ ಅಳುತ್ತಿರುವುದು ಸ್ಥಳೀಯ ಕುರಿಗಾಹಿಗಳಿಗೆ ಕೇಳಿಬಂದಿತ್ತು.
ಆಕೆ ಸರಪಳಿ ಸಿಲುಕಿಕೊಂಡು ಸಂಕಷ್ಟದಲ್ಲಿರುವುದನ್ನು ಕಂಡು ಕುರುಬರು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದರು.
ಮಹಿಳೆಯನ್ನು ತಕ್ಷಣವೇ ಚಿಕಿತ್ಸೆಗಾಗಿ ಸಾವಂತವಾಡಿ ಮತ್ತು ಸಿಂಧುದುರ್ಗದ ಓರೋಸ್ನ ಆಸ್ಪತ್ರೆಗಳಿಗೆ ಕರೆದೊಯ್ಯಲಾಯಿತು
ಆಕೆ ಮಾನಸಿಕ ಮತ್ತು ದೈಹಿಕ ಆರೋಗ್ಯ ಕ್ಷೀಣಿಸಿದ್ದ ಕಾರಣ ಆಕೆಯನ್ನು ನಂತರ ಹೆಚ್ಚಿನ ಆರೈಕೆಗಾಗಿ ಗೋವಾ ವೈದ್ಯಕೀಯ ಕಾಲೇಜಿಗೆ ವರ್ಗಾಯಿಸಲಾಯಿತು.
ಆಕೆಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರು ಆಕೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆದರೆ ಮಾನಸಿಕ ಸಮಸ್ಯೆಯಿಂದ ಬಳಲುತ್ತಿದ್ದಾರೆ ಎಂದು ತಿಳಿಸಿದ್ದಾರೆ. ಆಕೆಯ ಬಳಿ ಈ ಹಿಂದಿನ ವೈದ್ಯಕೀಯ ಪ್ರಿಸ್ಕ್ರಿಪ್ಷನ್ ಇದ್ದು, ಅದನ್ನು ಪರಿಶೀಲಿಸಿದ್ದೇವೆ ಎಂದು ವೈದ್ಯರು ಹೇಳಿದ್ದಾರೆ.
ತಮಿಳುನಾಡು ವಿಳಾಸವಿರುವ ಆಧಾರ್ ಕಾರ್ಡ್ ಮತ್ತು ಆಕೆಯ ಅವಧಿ ಮುಗಿದಿರುವ ಯುನೈಟೆಡ್ ಸ್ಟೇಟ್ಸ್ ಆಫ್ ಅಮೇರಿಕಾ ಪಾಸ್ಪೋರ್ಟ್ನ ಫೋಟೊಕಾಪಿ ಸೇರಿದಂತೆ ದೊರೆತ ದಾಖಲೆಗಳ ಆಧಾರದ ಮೇಲೆ ಮಹಿಳೆಯನ್ನು ಲಲಿತಾ ಕಯಿ ಎಂದು ಅಧಿಕಾರಿಗಳು ಗುರುತಿಸಿದ್ದಾರೆ.
ಆಕೆಯ ರಾಷ್ಟ್ರೀಯತೆಯನ್ನು ನಿರ್ಧರಿಸಲು ಪೊಲೀಸರು ಈ ದಾಖಲೆಗಳನ್ನು ಪರಿಶೀಲಿಸುವ ಪ್ರಕ್ರಿಯೆಯಲ್ಲಿದ್ದಾರೆ ಮತ್ತು ವಿದೇಶಿಯರ ಪ್ರಾದೇಶಿಕ ನೋಂದಣಿ ಕಚೇರಿಯೊಂದಿಗೆ ಸಂಪರ್ಕದಲ್ಲಿದ್ದಾರೆ. ಪ್ರಾಥಮಿಕ ಮಾಹಿತಿ ಪ್ರಕಾರ ಮಹಿಳೆ ಕಳೆದ 10 ವರ್ಷಗಳಿಂದ ಭಾರತದಲ್ಲಿದ್ದಾರೆ.
ಮಹಿಳೆಯ ಪ್ರಸ್ತುತ ಆರೋಗ್ಯ ಸ್ಥಿತಿ ಆತಂಕಕಾರಿಯಾಗಿರುವುದರಿಂದ ಪೊಲೀಸರಿಗೆ ಹೇಳಿಕೆ ಪಡೆಯಲು ಕಷ್ಟಸಾಧ್ಯವಾಗಿದೆ. ಮಹಿಳೆಯು ಒಂದೆರಡು ದಿನಗಳಿಂದ ಏನನ್ನೂ ತಿನ್ನದ ಕಾರಣ ಮತ್ತು ಪ್ರದೇಶದಲ್ಲಿ ಭಾರಿ ಮಳೆಯಿದ್ದ ಕಾರಣ ಆಕೆ ತೀರಾ ದುರ್ಬಲಳಾಗಿದ್ದಾಳೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಆಕೆಯನ್ನು ಆ ಮರಕ್ಕೆ ಎಷ್ಟು ಸಮಯದಿಂದ ಕಟ್ಟಿ ಹಾಕಿದ್ದರೋ ಗೊತ್ತಿಲ್ಲ. ತಮಿಳುನಾಡು ಮೂಲದ ಆಕೆಯ ಪತಿ ಆಕೆಯನ್ನು ಅಲ್ಲಿ ಕಟ್ಟಿಹಾಕಿ ಪರಾರಿಯಾಗಿದ್ದಾನೆ ಎಂದು ಶಂಕಿಸಲಾಗಿದೆ. ತನಿಖೆಯ ಭಾಗವಾಗಿ ಆಕೆಯ ಸಂಬಂಧಿಕರನ್ನು ಪತ್ತೆಹಚ್ಚಲು ಪೊಲೀಸ್ ತಂಡಗಳನ್ನು ತಮಿಳುನಾಡು, ಗೋವಾ ಮತ್ತು ಇತರ ಸ್ಥಳಗಳಿಗೆ ಕಳುಹಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಅಂಜೂರ ಹಣ್ಣು ತಿನ್ನೋದ್ರಿಂದ ಎಷ್ಟೆಲ್ಲಾ ಆರೋಗ್ಯ ಪ್ರಯೋಜನಗಳಿವೆ ಗೊತ್ತಾ?