newsics.com
ಮೈಸೂರು: ಕೇರಳದ ವೈನಾಡಿನಲ್ಲಿ ನಿರಂತರವಾಗಿ ಮಳೆಯಾಗುತ್ತಿದ್ದು, ಕಬಿನಿ ಜಲಾಶಯದಿಂದ ಹೊರಹರಿವು ಗಣನೀಯವಾಗಿ ಹೆಚ್ಚಳವಾಗಿದೆ.
ನಂಜನಗೂಡು ತಾಲೂಕಿನ ಹುಲ್ಲಹಳ್ಳಿ ಗ್ರಾಮದ ನದಿ ಸಮೀಪದ ಮನೆಗಳು ಸಂಪೂರ್ಣವಾಗಿ ಜಲಾವೃತವಾಗಿವೆ. ಹಂಪಾಪುರ, ಹರದನಹಳ್ಳಿ ಮಧ್ಯೆ ಇರುವ ಕಪಿಲಾ ನದಿ ಸೇತುವೆ ಮುಳುಗಡೆಯಾಗಿದ್ದು, ನದಿ ಪಾತ್ರದಲ್ಲಿರುವ 124 ಗ್ರಾಮಗಳಿಗೆ ಕುಡಿಯುವ ನೀರಿನ ಪಂಪ್ ಹೌಸ್ ಕೂಡ ಮುಳುಗಡೆಯಾಗಿದೆ. ಹೀಗಾಗಿ ಕುಡಿಯುವ ನೀರಿಗೂ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಕಬಿನಿ ಬಲದಂಡೆ ನಾಲೆಯೂ ಸಂಪೂರ್ಣವಾಗಿ ಮುಳುಗಡೆಯಾಗಿದ್ದು, ಕಣೇನೂರು ಮತ್ತು ಹುಲ್ಲಹಳ್ಳಿ ಸಂಪರ್ಕ ರಸ್ತೆಯಲ್ಲಿ ನೀರು ಹರಿಯುತ್ತಿರುವುದರಿಂದ ತಾತ್ಕಾಲಿಕವಾಗಿ ಆ ಮಾರ್ಗವನ್ನು ಬಂದ್ ಮಾಡಲಾಗಿದೆ. ಸುಣ್ಣದಕೇರಿ ಮತ್ತು ನದಿ ಪಾತ್ರದಲ್ಲಿರುವ ನಾಲ್ಕಕ್ಕೂ ಹೆಚ್ಚು ಮನೆಗಳು ಜಲಾವೃತವಾಗಿವೆ.
ಕಪಿಲಾ ನದಿ ಪ್ರವಾಹದಿಂದಾಗಿ ದಕ್ಷಿಣ ಕಾಶಿ ನಂಜನಗೂಡು ಶ್ರೀ ನಂಜುಂಡೇಶ್ವರನಿಗೂ ಕಪಿಲೆಯ ದಿಗ್ಬಂಧನವಾಗಿದೆ. ಕಬಿನಿ ಹಾಗೂ ನುಗು ಜಲಾಶಯದಿಂದ ಒಟ್ಟಾರೆ 70 ಸಾವಿರ ಕ್ಯುಸೆಕ್ ಪ್ರಮಾಣದ ನೀರನ್ನು ಹೊರಬಿಡಲಾಗಿತ್ತು. ಇದರಿಂದಾಗಿ ಮಲ್ಲನ ಮೂಲೆ ಸಮೀಪ ಮೈಸೂರು-ನಂಜನಗೂಡು ಮುಖ್ಯರಸ್ತೆ ಜಲಾವೃತವಾಗಿದೆ. ಪ್ರವಾಹದ ಹೆಚ್ಚಳದಿಂದಾಗಿ ನಂಜನಗೂಡು ನಗರದ ತೋಪಿನ ಬೀದಿ, ಸರಸ್ವತಿ ಕಾಲೋನಿ ಹಾಗೂ ಹಳ್ಳದ ಕೇರಿ ಬಡಾವಣೆಯಲ್ಲಿ ಮನೆಗಳು ಜಲಾವೃತ ಗೊಂಡಿವೆ. ಕಪಿಲಾ ನದಿಯ ಸ್ನಾನ ಘಟ್ಟಗಳು, ಅಯ್ಯಪ್ಪ ಸ್ವಾಮಿ ದೇವಾಲಯ, ಪರಶುರಾಮ ದೇವಾಲಯ, ಶ್ರೀಕಂಠೇಶ್ವರ ಕಲ್ಯಾಣ ಮಂಟಪ, ಹಳ್ಳದ ಕೇರಿ, ದೇವಾಲಯದಲ್ಲಿರುವ ಅಂಗಡಿ ಮುಂಗಟ್ಟುಗಳು ಮುಳುಗಡೆಯಾಗಿವೆ.
ಮೈಸೂರು ಜಿಲ್ಲೆಯ ನಂಜನಗೂಡು ಬಳಿ ರಾಷ್ಟ್ರೀಯ ಹೆದ್ದಾರಿ 766 ರಲ್ಲಿ ಸಂಚಾರ ಬಂದ್ ಮಾಡಲಾಗಿದೆ. ನಂಜನಗೂಡು ಮೈಸೂರು ರಸ್ತೆಯನ್ನು ಬಂದ್ ಮಾಡಿ ಸಂಚಾರಕ್ಕೆ ನಿರ್ಬಂಧ ವಿಧಿಸಲಾಗಿದೆ. ಊಟಿ, ತಮಿಳುನಾಡು, ಕೇರಳಕ್ಕೆ ಸಂಪರ್ಕ ಭಾಗಶಃ ಕಡಿತಗೊಂಡಿದೆ. ನಂಜನಗೂಡಿನ ಮಲ್ಲನ ಮೂಲೆ ಮಠದ ಬಳಿ ರಸ್ತೆ ಜಲಾವೃತಗೊಂಡಿದ್ದು, ವಾಹನ ಸವಾರರು ಪರದಾಡುವಂತಾಗಿದೆ.
ಸ್ವಂತ ದುಡ್ಡಿನಲ್ಲಿ ಮೋದಿ ದೇವಾಲಯ ನಿರ್ಮಿಸಿ ಭಕ್ತಿ, ಅಭಿಮಾನ ಮೆರೆದ ಅನ್ನದಾತ!
ಬಿಗ್ ಬಿಗೆ ಕಿಸ್ ಮಾಡಲು ಎರಡೆರಡು ಬಾರಿ ಹಲ್ಲುಜ್ಜಿ ರೆಡಿಯಾಗಿದ್ದ ನಟಿ!
ಶೃಂಗೇರಿ ಶಾರದಾಂಬೆ ದೇವಸ್ಥಾನದಲ್ಲಿ ಮೊದಲ ಬಾರಿಗೆ ವಸ್ತ್ರ ಸಂಹಿತೆ ಜಾರಿ