newsics.com
ಬೆಂಗಳೂರು: ಶಾಲೆಯಲ್ಲಿ ಮಕ್ಕಳ ಹಾಜರಾತಿ ಹೆಚ್ಚಿಸಲು ಶಿಕ್ಷಣ ಇಲಾಖೆ ಪ್ರಯತ್ನಪಡುತ್ತಿರುವುದರಲ್ಲಿ ಅಚ್ಚರಿಯಿಲ್ಲ. ಆದರೆ, ವಿಧಾನಮಂಡಲ ಅಧಿವೇಶನಕ್ಕೆ ಶಾಸಕರ ಹಾಜರಾತಿ ಹೆಚ್ಚಿಸುವ ನಿಟ್ಟಿನಲ್ಲಿ ಸ್ಪೀಕರ್ ಖಾದರ್ ಹೊಸ ಪ್ರಯೋಗಗಳ ಮೊರೆ ಹೋಗುತ್ತಿದ್ದಾರೆ.
ಅದರ ಭಾಗವಾಗಿ ಶಾಸಕರಿಗೆ ಉಚಿತ ರುಚಿಕರ ಉಪಾಹಾರ, ಮಧ್ಯಾಹ್ನದ ಊಟವನ್ನು ಈಗಾಗಲೇ ವ್ಯವಸ್ಥೆ ಮಾಡಿದ್ದಾರೆ. ಅದರ ಜತೆಗೆ ಶಾಸಕರಿಗೆ ಮಧ್ಯಾಹ್ನದ ಕಿರು ನಿದ್ರೆಗಾಗಿ ವಿಧಾನಸಭೆ ಮೊಗಸಾಲೆಯಲ್ಲಿ ವಿಶೇಷ ಖುರ್ಚಿಯ ವ್ಯವಸ್ಥೆಯನ್ನೂ ಮಾಡಲಾಗಿದೆ.
ವಿಧಾನಮಂಡಲ ಅಧಿವೇಶನದಲ್ಲಿ ಶಾಸಕರ ಹಾಜರಾತಿ ಹೆಚ್ಚಿಸಲು ಸ್ಪೀಕರ್ ಯು. ಟಿ ಖಾದರ್ ನಾನಾ ಕಸರತ್ತು ನಡೆಸುತ್ತಿದ್ದಾರೆ. ಸಾಮಾನ್ಯವಾಗಿ ಅಧಿವೇಶನಕ್ಕೆ ಶಾಸಕರು ಗೈರಾಗುವ ಮೂಲಕ ತಮ್ಮ ನಿರಾಸಕ್ತಿ ಪ್ರದರ್ಶಿಸುತ್ತಿರುತ್ತಾರೆ. ಮಹತ್ವದ ಚರ್ಚೆಗಳಲ್ಲಿ ಪಾಲ್ಗೊಳ್ಳಲು ಶಾಸಕರುಗಳು ಹಿಂದೇಟು ಹಾಕುತ್ತಾರೆ. ಪ್ರತಿ ಬಾರಿಯೂ ಶಾಸಕರ ಹಾಜರಾತಿ ಅತ್ಯಲ್ಪವಾಗಿರುವುದು ಸಾಮಾನ್ಯ ಎನ್ನುವಂತಾಗಿದೆ.
ಕಳೆದ ಬಾರಿಯ ಅಧಿವೇಶನದಲ್ಲಿ ಶಾಸಕರ ಸಕಾಲ ಹಾಜರಾತಿ ಹೆಚ್ಚಿಸಲು ಉಚಿತ ಬೆಳಗಿನ ಉಪಹಾರದ ವ್ಯವಸ್ಥೆ ಮಾಡಿದ್ದರು. ಅದೇ ರೀತಿ ಮಧ್ಯಾಹ್ನ ಶಾಸಕರಿಗೆ ರುಚಿಕರವಾದ ಭೋಜನ ವ್ಯವಸ್ಥೆ ಮಾಡಿದ್ದಾರೆ. ಇದೀಗ ಸ್ಪೀಕರ್ ಯು. ಟಿ ಖಾದರ್ ಮತ್ತೊಂದು ಹೆಜ್ಜೆಯಿಟ್ಟಿದ್ದಾರೆ.
ಉಪಾಹಾರ, ಭೋಜನದ ಬಳಿಕ ಶಾಸಕರಿಗಾಗಿ ಮಧ್ಯಾಹ್ನದ ಕಿರು ನಿದ್ರೆ ಮಾಡುವ ಸಲುವಾಗಿ ವಿಶೇಷ ಖುರ್ಚಿಯ ವ್ಯವಸ್ಥೆ ಮಾಡಲಾಗಿದೆ. ಸ್ಪೀಕರ್ ಯು. ಟಿ ಖಾದರ್ ವಿಧಾನಸಭೆಯ ಮೊಗಸಾಲೆಯಲ್ಲಿ ರಿಕ್ಲೈನರ್ ಸೋಫಾ ಸೆಟ್ನ ವ್ಯವಸ್ಥೆ ಮಾಡುತ್ತಿದ್ದಾರೆ. ಪ್ರಾಯೋಗಿಕವಾಗಿ ಈ ವಿಲಾಸಿ ಖುರ್ಚಿಯನ್ನು ವಿಧಾನಸಭೆಯ ಆಡಳಿತ ಪಕ್ಷದ ಮೊಗಸಾಲೆಯಲ್ಲಿ ಅಳವಡಿಸಲಾಗಿದೆ.
ಮುಂದಿನ ದಿನಗಳಲ್ಲಿ ಈ ರೀತಿಯ ಇನ್ನಷ್ಟು ಖುರ್ಚಿಗಳನ್ನು ಮೊಗಸಾಲೆಯಲ್ಲಿ ಅಳವಡಿಸಲಾಗುವುದು, ಮಧ್ಯಾಹ್ನದ ಭೋಜನದ ಬಳಿಕ ಹಲವರು ಕಿರು ನಿದ್ರೆಗೆ ಹೋಗುತ್ತಾರೆ. ಈ ಕಿರು ನಿದ್ದೆಗೆ ಶಾಸಕರು ಹೊರ ಹೋಗುವುದನ್ನು ತಪ್ಪಿಸಲು ಮೊಗಸಾಲೆಯಲ್ಲೇ ವಿಶೇಷ ಸೋಫಾ ಸೆಟ್ನ ವ್ಯವಸ್ಥೆ ಕಲ್ಪಿಸಲಾಗುತ್ತಿದೆ ಎಂದು ಸ್ಪೀಕರ್ ಯು.ಟಿ. ಖಾದರ್ ತಿಳಿಸಿದರು.
ಸದನವನ್ನು ಬೇಗ ಆರಂಭಿಸುವ ಸಲುವಾಗಿ ಶಾಸಕರಿಗೆ ಮೊಗಸಾಲೆಯಲ್ಲೇ ಬೆಳಗ್ಗೆ ಉಚಿತ ಉಪಾಹಾರದ ವ್ಯವಸ್ಥೆ ಮಾಡಲಾಗಿದೆ. ಇನ್ನು ಮಧ್ಯಾಹ್ನದ ಊಟಕ್ಕಾಗಿ ಶಾಸಕರು ಹೊರಗಡೆ ಹೋಗುವುದನ್ನು ತಪ್ಪಿಸಲು ಮೊಗಸಾಲೆಯಲ್ಲೇ ರುಚಿಕರ ಭೋಜನ ವ್ಯವಸ್ಥೆ ಮಾಡಲಾಗಿದೆ. ಇದರಿಂದಾಗಿ ಸದನ ಕಲಾಪದಲ್ಲಿ ಕೋರಂ ಹೆಚ್ಚಿಸಿ ಹೆಚ್ಚು ಶಾಸಕರು ಚರ್ಚೆಯಲ್ಲಿ ಪಾಲ್ಗೊಳ್ಳುವಂತೆ ಮಾಡುವುದು ಇದರ ಉದ್ದೇಶವಾಗಿದೆ ಎಂದರು.
ಈಗ ಮಧ್ಯಾಹ್ನದ ಊಟದ ಬಳಿಕ ಕೆಲ ಶಾಸಕರು ಕಿರು ನಿದ್ದೆ ಮಾಡುವ ಅಭ್ಯಾಸ ಹೊಂದಿದ್ದಾರೆ. ಅದಕ್ಕಾಗಿ ವಿಧಾನಸೌಧದ ಹೊರಗಡೆ ಹೋಗಿ ಕಲಾಪಕ್ಕೆ ತಡವಾಗಿ ಆಗಮಿಸುತ್ತಾರೆ. ಇದನ್ನು ತಪ್ಪಿಸುವ ನಿಟ್ಟಿನಲ್ಲಿ ಇದೀಗ ವಿಧಾನಸಭೆಯ ಮೊಗಸಾಲೆಯಲ್ಲಿ ರಿಕ್ಲೈನರ್ ಖುರ್ಚಿಯನ್ನು ಹಾಕಲು ನಿರ್ಧಾರ ಮಾಡಿದ್ದಾರೆ.
ಸದನದಲ್ಲಿ ಶಾಸಕರ ಹಾಜರಾತಿ ದಾಖಲೆ ಮಾಡಿಕೊಳ್ಳಲು ಎಐ ತಂತ್ರಜ್ಞಾನ ಆಧಾರಿತ ಕ್ಯಾಮೆರಾ ಬಳಕೆ ಮಾಡಲಾಗಿದೆ. ಶಾಸಕರು ಸದನಕ್ಕೆ ಬರುವಾಗ ಕ್ಯಾಮರಾ ಮುಂದೆ ಕೆಲ ಕ್ಷಣ ನಿಲ್ಲಬೇಕು. ಶಾಸಕರ ಮುಖವನ್ನು ಎಐ ಕ್ಯಾಮೆರಾ ದಾಖಲಿಸುತ್ತದೆ.
ಕಲಾಪಕ್ಕೆ ಹಾಜರಾಗುವುದು ಜನರಿಂದ ಆಯ್ಕೆಯಾಗುವ ಶಾಸಕರ ಜವಾಬ್ದಾರಿ ಹಾಗೂ ಕರ್ತವ್ಯ. ಶಾಸಕರು ತಮ್ಮ ಕ್ಷೇತ್ರದ ಜ್ವಲಂತ ಸಮಸ್ಯೆಗಳ ಬಗ್ಗೆ ಸದನದಲ್ಲಿ ಚರ್ಚೆ ನಡೆಸುವುದು ಅವರ ಆದ್ಯ ಕರ್ತವ್ಯವಾಗಿದೆ. ಹೀಗಿರುವಾಗ ಅಧಿವೇಶನಕ್ಕೆ ಹಾಜರಾಗುವಂತೆ ಪ್ರೇರೇಪಿಸಲು ಶಾಸಕರಿಗೆ ಉಚಿತ ಉಪಾಹಾರ, ಭೋಜನದ ಜತೆ ಮೊಗಸಾಲೆಯಲ್ಲೇ ನಿದ್ರೆಗೂ ಅವಕಾಶ ಕಲ್ಪಿಸುವ ಮೂಲಕ ಸಾರ್ವಜನಿಕರ ಹಣ ಪೋಲು ಮಾಡುವುದು ಎಷ್ಟು ಸರಿ ಎಂಬ ಚರ್ಚೆಯನ್ನು ಹುಟ್ಟುಹಾಕಿದೆ.
ಬಿಗ್ ಬಿಗೆ ಕಿಸ್ ಮಾಡಲು ಎರಡೆರಡು ಬಾರಿ ಹಲ್ಲುಜ್ಜಿ ರೆಡಿಯಾಗಿದ್ದ ನಟಿ!
ಶೃಂಗೇರಿ ಶಾರದಾಂಬೆ ದೇವಸ್ಥಾನದಲ್ಲಿ ಮೊದಲ ಬಾರಿಗೆ ವಸ್ತ್ರ ಸಂಹಿತೆ ಜಾರಿ
ಮೊಬೈಲ್ ಪಾಸ್ವರ್ಡ್ ಕೇಳಿದ ಗರ್ಲ್ಫ್ರೆಂಡ್, ಸಮುದ್ರಕ್ಕೆ ಹಾರಿದ ಭೂಪ
ಪತ್ನಿಯೆಂದು ಭಾವಿಸಿ ವೇದಿಕೆಯಲ್ಲೇ ಅನ್ಯ ಮಹಿಳೆಗೆ ಮುತ್ತಿಕ್ಕಲು ಹೋದ ಜೋ ಬೈಡೆನ್! ವಿಡಿಯೊ ನೋಡಿ
ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ಒತ್ತಾಯಿಸಿ ಪ್ರತಿಭಟನೆ, Phonepe ವಿರುದ್ಧ ಅಭಿಯಾನ
ಮೈಕ್ರೋಸಾಫ್ಟ್ ಸೇವೆಯಲ್ಲಿ ತಾಂತ್ರಿಕ ಸಮಸ್ಯೆ: ಜಗತ್ತಿನ ಹಲವೆಡೆ ಕಲ್ಲೋಲ ಕಾರಣವೇನು..?