newsics.com
ಬೆಂಗಳೂರು: ರಾಜ್ಯದ ಕರಾವಳಿ ಮತ್ತು ಮಲೆನಾಡು ಭಾಗದಲ್ಲಿ ಮುಂಗಾರು ಮಳೆ ಧಾರಾಕಾರ ಸುರಿಯುತ್ತಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ.
ಮಳೆ ಅಬ್ಬರದಿಂದ ಕರಾವಳಿ, ಮಲೆನಾಡಿನ ಹಲವೆಡೆ ಅವಾಂತರಗಳು ಸೃಷ್ಟಿಯಾಗಿದ್ದು, ಹಲವು ರಸ್ತೆಗಳು ಜಲಾವೃತವಾಗಿವೆ. ಹಲವು ಗ್ರಾಮಗಳ ಸಂಪರ್ಕ ಕಡಿತವಾಗಿದೆ.
ಬೆಂಗಳೂರು- ಮಂಗಳೂರು
ಅಥವಾ ಮಂಗಳೂರು- ಬೆಂಗಳೂರು ಮಾರ್ಗದ ರಸ್ತೆಗಳು ಬಂದ್ ಆಗಿವೆ. ಬೆಂಗಳೂರಿನಿಂದ ಮಂಗಳೂರಿಗೆ ತೆರಳಬೇಕಾದರೆ ಚಾರ್ಮಾಡಿ ಘಾಟ್, ಶಿರಾಡಿಘಾಟ್ ಮತ್ತು ಮಡಿಕೇರಿಯ ಸಂಪಾಜೆ ಘಾಟ್ ಮೂಲಕ ಹೋಗಬೇಕು. ಆದರೆ, ಈ ಮಾರ್ಗಗಳಲ್ಲಿ ಗುಡ್ಡ ಕುಸಿಯುವ ಭೀತಿ ಇರುವುದರಿಂದ ಈ ಮಾರ್ಗಗಳನ್ನು ಬಂದ್ ಮಾಡಲಾಗಿದೆ.
ಭೂ ಕುಸಿತದ ಮುಂಜಾಗ್ರತಾ ಕ್ರಮವಾಗಿ ಗುರುವಾರದಿಂದ ಬೆಂಗಳೂರು-ಮಂಗಳೂರು ನಡುವಿನ ರಾಷ್ಟ್ರೀಯ ಹೆದ್ದಾರಿ ಶಿರಾಡಿಘಾಟ್ನಲ್ಲಿ ವಾಹನ ಸಂಚಾರ ನಿರ್ಬಂಧಿಸಿ ಹಾಸನ ಜಿಲ್ಲಾಧಿಕಾರಿ ಸತ್ಯಭಾಮಾ ಆದೇಶ ಹೊರಡಿಸಿದ್ದಾರೆ.
ಚಾರ್ಮಾಡಿ ಘಾಟ್ ಮೂಲಕ ಬೆಂಗಳೂರಿನಿಂದ ಮಂಗಳೂರಿಗೆ ಹೋಗಬಹುದಾದರೂ ಈ ಘಾಟ್ನಲ್ಲಿ ಭಾರೀ ವಾಹನ ಸಂಚರಿಸುವಂತಿಲ್ಲ. ಕಾರು, ಕೆಎಸ್ಆರ್ಟಿಸಿ ಬಸ್ಗಳು ಸಂಚರಿಸಬಹುದು. ಧಾರಾಕಾರ ಮಳೆ ಸುರಿಯುತ್ತಿರುವುದರಿಂದ ಈ ರಸ್ತೆಯಲ್ಲಿ ರಾತ್ರಿ ಪ್ರಯಾಣ ಅಷ್ಟು ಸೂಕ್ತವಾಗಿಲ್ಲ.
ಮೊದಲೇ ದೊಡ್ಡ ಘಾಟ್ ಆಗಿರುವುದರಿಂದ ರಸ್ತೆ ಕಿರಿದಾಗಿದೆ, ಇನ್ನೊಂದೆಡೆ ಮಳೆಯಾಗುತ್ತಿದೆ. ಹೀಗಾಗಿ ಅಲ್ಲಲ್ಲಿ ರಸ್ತೆಗೆ ಅಡ್ಡಲಾಗಿ ಗಿಡ-ಮರಗಳು ಬೀಳುತ್ತಿವೆ. ಈ ಹಿನ್ನೆಲೆಯಲ್ಲಿ ಸದ್ಯ ಈ ಮಾರ್ಗದಲ್ಲಿ ಪ್ರಯಾಣ ಮಾಡುವುದು ಸೂಕ್ತವಲ್ಲ ಎಂದು ಹೇಳಲಾಗಿದೆ.
ಕೊಡಗಿನಲ್ಲಿ ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಲಾಗಿದೆ. ಮಡಿಕೇರಿ ನಗರದ ಜ. ತಿಮ್ಮಯ್ಯ ವೃತ್ತದಲ್ಲೇ ಸಂಚಾರಕ್ಕೆ ಪೊಲೀಸರು ತಡೆ ನೀಡಿದ್ದಾರೆ. ಹಾಗಾಗಿ ಮಡಿಕೇರಿಯಿಂದ ಮಂಗಳೂರಿಗೆ ತೆರಳುವವರು ತೀವ್ರ ಪರದಾಡುವಂತಾಗಿದೆ.
ಮಡಿಕೇರಿ-ಸಂಪಾಜೆ ಹೆದ್ದಾರಿ 4 ದಿನ ಬಂದ್:
ರಾಷ್ಟೀಯ ಹೆದ್ದಾರಿ 275ರ ಸಂಪಾಜೆಯಿಂದ ಮಡಿಕೇರಿ ನಡುವೆ ತೀವ್ರ ಮಳೆಯಿಂದಾಗಿ ರಸ್ತೆ ಬದಿ ಗುಡ್ಡ ಕುಸಿಯುವ ಸಾಧ್ಯತೆ ಇದ್ದು, ಸಾರ್ವಜನಿಕರ ಹಿತಾಸಕ್ತಿಯಿಂದ ಈ ಭಾಗದಲ್ಲಿ ಜುಲೈ 18ರಿಂದ 22ರವರೆಗೆ ಪ್ರತಿ ದಿನ ರಾತ್ರಿ 8 ರಿಂದ ಮರದಿನ ಬೆಳಗ್ಗೆ 6 ಗಂಟೆವರೆಗೆ ಎಲ್ಲಾ ವಾಹನಗಳ ಸಂಚಾರ ನಿರ್ಬಂಧಿಸಲಾಗಿದೆ.
ಡಿವೋರ್ಸ್ ಬೆನ್ನಲ್ಲೇ ಪ್ರೀತಿಯ ಮಗನ ಬಗ್ಗೆ ಹಾರ್ದಿಕ್ ಪಾಂಡ್ಯ ಭಾವುಕ ಪೋಸ್ಟ್
27 ಸೆಕೆಂಡ್ ಗಳ ವಿಕ್ಕಿ, ತೃಪ್ತಿ ಬೋಲ್ಡ್ ದೃಶ್ಯ: ಸೆನ್ಸಾರ್ ಮಂಡಳಿ ತಕರಾರು