newsics.com
ಚೆನ್ನೈ: ಸಾಗರ ಜೀವಿಗಳು ವಂಶಾಭಿವೃದ್ಧಿಗಾಗಿ ಗೂಡು ಕಟ್ಟಿಕೊಳ್ಳುವ ಋತು ಮುಕ್ತಾಯ ಸಮೀಪಿಸುತ್ತಿದ್ದಂತೆ ತಮಿಳುನಾಡು ಸರ್ಕಾರ 2.15 ಲಕ್ಷ ಸಮುದ್ರ ಆಮೆ ಮರಿಗಳನ್ನು ಬಂಗಾಳ ಕೊಲ್ಲಿಗೆ ಬಿಟ್ಟಿದೆ.
ಈ ಕುರಿತು ಮಾತನಾಡಿರುವ ಪರಿಸರ ಮತ್ತು ಹವಾಮಾನ ಬದಲಾವಣೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಸುಪ್ರಿಯಾ ಸಾಹು ‘ಆಮೆಗಳು ಮೊಟ್ಟೆ ಇಡಲು ತಾತ್ಕಾಲಿಕ ಕೇಂದ್ರಗಳನ್ನು ರಚಿಸುವುದು, ಸಾಗರ ಜೀವಿಗಳ ರಕ್ಷಣೆ ಕುರಿತು ಸಿಬ್ಬಂದಿಗೆ ತರಬೇತಿ, ರಾತ್ರಿ ಗಸ್ತು ಕಾರ್ಯಾಚರಣೆ ಸಂಬಂಧ ಇಲಾಖೆಯ ಆಂತರಿಕ ಸಭೆಗಳನ್ನು ನಡೆಸುವುದೂ ಸೇರಿದಂತೆ ಹಲವು ಆಮೆಗಳ ಸಂರಕ್ಷಣೆ ಕಾರ್ಯಕ್ರಮಗಳಿಗಾಗಿ ಪ್ರತಿವರ್ಷ ನವೆಂಬರ್ನಲ್ಲಿ ಅರಣ್ಯ ಇಲಾಖೆ ಸಿದ್ಧತೆ ನಡೆಸುತ್ತದೆ’ ಎಂದು ತಿಳಿಸಿದ್ದಾರೆ.
ಸಾಗರ ಜೀವಿಗಳ ಸಂರಕ್ಷಣೆ ಪ್ರಯತ್ನದ ಭಾಗವಾಗಿ, ಚೆನ್ನೈ ಮತ್ತು ನಾಗಪಟ್ಟಿಣಂ ಜಿಲ್ಲೆಗಳಲ್ಲಿ ಸಮುದ್ರ ಅಮೆಗಳ ಸಂರಕ್ಷಣಾ ಕೇಂದ್ರಗಳನ್ನು ತೆರೆಯಲಾಗುವುದು ಎಂದು ಸರ್ಕಾರ ಈಗಾಗಲೇ ಘೋಷಿಸಿದೆ.
1,076 ಕಿ.ಮೀ. ಉದ್ದದ ಕರಾವಳಿ ತೀರವನ್ನು ತಮಿಳುನಾಡು ಹೊಂದಿದೆ. ಇಲಾಖೆ ವತಿಯಿಂದ ಆಮೆಗಳ ಸಂರಕ್ಷಣೆ ಕಾರ್ಯಕ್ರಮದ ಭಾಗವಾಗಿ ಈ ವರ್ಷ 185 ಸಿಬ್ಬಂದಿ ಹಾಗೂ 264 ಸ್ವಯಂಸೇವಕರನ್ನು ನಿಯೋಜಿಸಲಾಗಿದೆ. ಸದ್ಯದ ಗೂಡು ಕಟ್ಟುವ ಋತುವಿನಲ್ಲಿ, ಆಮೆಗಳು ಮೊಟ್ಟೆ ಇಡಲು 13 ಜಿಲ್ಲೆಗಳಲ್ಲಿ 53 ಕೇಂದ್ರಗಳನ್ನು ತೆರೆಯಲಾಗಿದೆ.
ಈ ವರ್ಷ ಈವರೆಗೆ ಒಟ್ಟು 2,15,778 ಮರಿಗಳನ್ನು ಸಮುದ್ರಕ್ಕೆ ಬಿಡಲಾಗಿದೆ. ಕಡಲಾಮೆಗಳ ಸಂರಕ್ಷಣೆ ಭಾಗವಾಗಿ, ಕುದ್ದಲೋರ್, ನಾಗಪಟ್ಟಿಣಂ ಮತ್ತು ಚೆನ್ನೈನಲ್ಲಿ ಕ್ರಮವಾಗಿ ಹೆಚ್ಚಿನ ಸಂಖ್ಯೆಯಲ್ಲಿ ಮರಿಗಳನ್ನು ಬಿಡಲಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 1,82,917 ಮರಿಗಳನ್ನು ಸಾಗರಕ್ಕೆ ಸೇರಿಸಲಾಗಿತ್ತು.
ಬೆಂಗಳೂರು ವಾಹನ ಮಾಲೀಕರೇ ಹುಷಾರು! ಪ್ರತಿ ತಿಂಗಳು ಕಳುವಾಗುತ್ತಿದೆ 400ಕ್ಕೂ ಹೆಚ್ಚು ವಾಹನ
ರೇಣುಕಾಸ್ವಾಮಿ ಕುಟುಂಬಕ್ಕೆ ನ್ಯಾಯ ಸಿಗಲಿ, ಅಪರಾಧಿಗಳಿಗೆ ತಕ್ಕ ಶಿಕ್ಷೆ ಆಗಲಿ ಎಂದ ಕಿಚ್ಚ
ಹಾರ್ವರ್ಡ್ ವಿವಿ ಸಂಶೋಧಕರ ವರದಿಗೆ ಬೆಚ್ಚಿಬಿದ್ದ ಜಗತ್ತು: ನಮ್ಮ ನಡುವೆಯೇ ಅನ್ಯಗ್ರಹ ಜೀವಿಗಳ ವಾಸ!