newsics.com
ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್ ಪವಿತ್ರಾ ಗೌಡ ಸೇರಿದಂತೆ 18 ಮಂದಿಯನ್ನು ಬಂಧಿಸಲಾಗಿದೆ. ಅಲ್ಲದೆ ಈ ವಿಚಾರ ದೇಶಾದ್ಯಂತ ತೀವ್ರ ಚರ್ಚೆಗೂ ಗ್ರಾಸವಾಗಿದೆ.
ಈ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿರುವ ನಟ ಕಿಚ್ಚ ಸುದೀಪ್, ಬಾಳಿ, ಬದುಕಬೇಕಿದ್ದ ರೇಣುಕಾಸ್ವಾಮಿ ಕೊಲೆ ಆಗಿದ್ದಾನೆ. ರೇಣುಕಾಸ್ವಾಮಿ ಕುಟುಂಬಕ್ಕೆ ನ್ಯಾಯ ಸಿಗಲಿ. ಸತ್ಯ ಹೊರತರಲು ಮಾಧ್ಯಮ ಮತ್ತು ಪೊಲೀಸರು ಪ್ರಯತ್ನಿಸುತ್ತಿದ್ದಾರೆ. ತನಿಖೆ ನಿಷ್ಪಕ್ಷಪಾತವಾಗಿ ನಡೆಯಲಿ. ಕಾನೂನಿನ ಮೇಲೆ ಜನರಿಗೆ ನಂಬಿಕೆ ಬರುವಂತೆ ಆಗಲಿ ಎಂದು ಫಸ್ಟ್ ರಿಯಾಕ್ಷನ್ ನೀಡಿದ್ದಾರೆ.
ಇದೇ ವೇಳೆ ಚಿತ್ರರಂಗದಿಂದ ದರ್ಶನ್ ಬ್ಯಾನ್ ಕುರಿತು ಪ್ರತಿಕ್ರಿಯೆ ನೀಡಿದ ಕಿಚ್ಚ, ಚಿತ್ರರಂಗದ ಮೇಲೆ ಕಪ್ಪು ಚುಕ್ಕೆ ಬರುವುದು ನಮಗೂ ಇಷ್ಟವಿಲ್ಲ. ವಾತಾವರಣ ಏನೋ ಸರಿ ಕಾಣಿಸುತ್ತಿಲ್ಲ. ಚಿತ್ರರಂಗಕ್ಕೆ ನ್ಯಾಯ ಸಿಗಬೇಕು. ಎಲ್ಲ ಕಾರಣಕ್ಕೂ ಚಿತ್ರರಂಗದ ಮೇಲೆ ಆರೋಪ ಬರುತ್ತದೆ. ಚಿತ್ರರಂಗಕ್ಕೆ ಒಂದು ಕ್ಲೀನ್ಚಿಟ್ ಬೇಕಾಗಿದೆ. ಹಿರಿಯರು ಕಟ್ಟಿ ಬೆಳೆಸಿದ ಚಿತ್ರರಂಗ ಯಾರೋ ಒಬ್ಬರಿಂದ ಹಾಳಾಗಬಾರದು. ಆರೋಪದಿಂದ ಮುಕ್ತವಾಗಿ ಹೊರಬಂದ ಮೇಲೆ ಬ್ಯಾನ್ ಮಾಡಿದರೆ ಪ್ರಯೋಜನವೇನು? ಬ್ಯಾನ್ ಮಾಡುವುದಕ್ಕಿಂತ ರೇಣುಕಾಸ್ವಾಮಿ ಕುಟುಂಬಕ್ಕೆ ನ್ಯಾಯ ಸಿಗಬೇಕು ಎಂದಿದ್ದಾರೆ.
ನಾನು ಯಾರ ಪರವೂ ಇಲ್ಲ. ವಿರುದ್ಧವೂ ಇಲ್ಲ. ನಾನು ನ್ಯಾಯದ ಪರ ಇದ್ದೇನೆ. ರೇಣುಕಾಸ್ವಾಮಿ ಕುಟುಂಬದ ಕುರಿತಂತೆ ಎಲ್ಲರ ಹೃದಯ ಮಿಡಿಯುತ್ತಿದೆ. ರೇಣುಕಾಸ್ವಾಮಿ ಕುಟುಂಬಕ್ಕೆ ನ್ಯಾಯ ಸಿಗ್ಬೇಕು. ಯಾವತ್ತು ಈ ಥರ ಆಗಬಾರದು. ಎಷ್ಟೋ ವರ್ಷಗಳ ಇತಿಹಾಸ ಚಿತ್ರರಂಗಕ್ಕಿದೆ. ನನ್ ಕಣ್ಣ ಮುಂದೆ ಆ ಫ್ಯಾಮಿಲಿ ಮಾತ್ರ ಬರ್ತಿದೆ. ಆ ಹೆಣ್ಣುಮಗುವಿಗೆ ನ್ಯಾಯ ಸಿಗಬೇಕು, ಹುಟ್ಟಬೇಕಾದ ಮಗುವಿಗೆ ನ್ಯಾಯ ಸಿಗಬೇಕು. ಕಾನೂನಿನ ಬಗ್ಗೆ ಎಲ್ಲರಿಗೂ ನಂಬಿಕೆ ಹುಟ್ಟಬೇಕು. ಇದೇ ನಮ್ಮ ಆಶಯ ಎಂದು ಹೇಳಿದ್ದಾರೆ.
ಚಿತ್ರರಂಗ ಎಂದರೆ ಒಬ್ಬರು-ಇಬ್ಬರು ಅಲ್ಲ. ನೂರಾರು ಕಲಾವಿದರಿದ್ದಾರೆ. ಅಪರಾಧಿಗೆ ಶಿಕ್ಷೆಯಾದರೆ ಚಿತ್ರರಂಗ ಖುಷಿಪಡುತ್ತದೆ ಎಂದು ಕಿಚ್ಚ ಸುದೀಪ್ ಹೇಳಿದ್ದಾರೆ.
ನಟ ದರ್ಶನ್ಗೆ ಎದುರಾಗುತ್ತಾ ಮತ್ತಷ್ಟು ಕಂಟಕ? ಗ್ರಹಗತಿ ಬಗ್ಗೆ ಅರ್ಚಕರ ಮಾತು