newsics.com | ನ್ಯೂಸಿಕ್ಸ್
ಹೈದರಾಬಾದ್: ದೇಶದ ಅತ್ಯುನ್ನತ ಪೊಲೀಸ್ ಅಧಿಕಾರಿಗಳಿಗೆ ತರಬೇತಿ ನೀಡುವ ಹೈದರಾಬಾದ್ನ ಪ್ರತಿಷ್ಠಿತ ಸರ್ದಾರ್ ವಲ್ಲಭಭಾಯ್ ಪಟೇಲ್ ರಾಷ್ಟ್ರೀಯ ಪೊಲೀಸ್ ಅಕಾಡೆಮಿಯಲ್ಲಿ (SVPNPA) ಅತ್ಯಂತ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ಸಹ ತರಬೇತಿ ಅಧಿಕಾರಿಯಿಂದಲೇ ತಮಗೆ ಲೈಂಗಿಕ ಕಿರುಕುಳ, ಹಲ್ಲೆ ಹಾಗೂ ಬ್ಲ್ಯಾಕ್ಮೇಲ್ ಮಾಡಲಾಗುತ್ತಿದೆ ಎಂದು ಆರೋಪಿಸಿ ಮಹಿಳಾ ಐಪಿಎಸ್ ಪ್ರೊಬೇಷನರಿ ಅಧಿಕಾರಿಯೊಬ್ಬರು ದೂರು ದಾಖಲಿಸಿದ್ದಾರೆ. ಜುಲೈ 18 ರಂದು ನಡೆದಿರುವ ಈ ಘಟನೆಗೆ ಸಂಬಂಧಿಸಿದಂತೆ ಆರೋಪಿ ತರಬೇತಿ ಐಪಿಎಸ್ ಅಧಿಕಾರಿಯ ವಿರುದ್ಧ ಪೊಲೀಸರು ಕ್ರಿಮಿನಲ್ ಮೊಕದ್ದಮೆ ಹೂಡಿದ್ದಾರೆ.
ಮೂಲಗಳ ಪ್ರಕಾರ, 30 ವರ್ಷದ ಪ್ರೊಬೇಷನರಿ ಐಪಿಎಸ್ ಅಧಿಕಾರಿ ಸುಮಾ ಹೆಚ್.ಕೆ. ಅವರು ನೀಡಿರುವ ದೂರಿನ ಅನ್ವಯ, ಸಹ ತರಬೇತಿದಾರ ಉದಯ್ ಕೃಷ್ಣ ರೆಡ್ಡಿ ಎಂಬುವವರ ವಿರುದ್ಧ ಅತ್ತಾಪುರ ಠಾಣೆ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.
ಕಳೆದ ಜೂನ್ 23 ರಿಂದಲೇ ಉದಯ್ ಕೃಷ್ಣ ರೆಡ್ಡಿ ತಮಗೆ ನಿರಂತರವಾಗಿ ಕಾಟ ನೀಡುತ್ತಿದ್ದಾರೆ ಎಂದು ಸಂತ್ರಸ್ತೆ ದೂರಿನಲ್ಲಿ ತಿಳಿಸಿದ್ದಾರೆ. ವಾಟ್ಸಾಪ್ನಲ್ಲಿ ಅಶ್ಲೀಲ ಸಂದೇಶಗಳನ್ನು ಕಳುಹಿಸುವುದು ಮಾತ್ರವಲ್ಲದೆ, ಉಳಿದ ಪ್ರೊಬೇಷನರಿ ಅಧಿಕಾರಿಗಳ ಸಮ್ಮುಖದಲ್ಲೇ ಅವಹೇಳನಕಾರಿಯಾಗಿ ಮಾತನಾಡಿ ತೇಜೋವಧೆ ಮಾಡಿದ್ದಾನೆ. ಮತ್ತೊಬ್ಬ ಅಧಿಕಾರಿಯೊಂದಿಗೆ ಅಕ್ರಮ ಸಂಬಂಧವಿದೆ ಎಂದು ಆರೋಪಿಸಿ ಅದನ್ನು ಒಪ್ಪಿಕೊಳ್ಳುವಂತೆ ಒತ್ತಡ ಹೇರಿದ್ದಾನೆ. ಇಷ್ಟೇ ಅಲ್ಲದೆ, ಬಲವಂತವಾಗಿ ಮೊಬೈಲ್ ಕಸಿದುಕೊಂಡು, ಪಾಸ್ವರ್ಡ್ ಹಾಕಿಸಿ ಆಕೆಯ ವೈಯಕ್ತಿಕ ಚಾಟ್ಗಳನ್ನು ನೋಡಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಜುಲೈ 9 ರಂದು ಕಿರುಕುಳದ ತೀವ್ರತೆ ಮಿತಿಮೀರಿದೆ. ಆರೋಪಿಯು ಸುಮಾ ಅವರನ್ನು ಬಲವಂತವಾಗಿ ತನ್ನ ಕೋಣೆಗೆ ಎಳೆದುಕೊಂಡು ಹೋಗಿ ಭೀಕರವಾಗಿ ಹಲ್ಲೆ ನಡೆಸಿದ್ದಾನೆ. ಜುಟ್ಟು ಹಿಡಿದು ಎಳೆದಾಡಿ, ಕುತ್ತಿಗೆ ಹಿಸುಕಿ ಕೊಲೆ ಮಾಡಲು ಯತ್ನಿಸಿದ್ದಾನೆ. ಅಷ್ಟೇ ಅಲ್ಲದೆ, ಕುತ್ತಿಗೆಗೆ ಚಾಕು ಇಟ್ಟು ಬೆದರಿಸುತ್ತಾ ಆಕೆಯ ಮೈಮೇಲೆ ಕಾಂಡೋಮ್ ಪ್ಯಾಕೆಟ್ಗಳನ್ನು ಎಸೆದು ವಿಕೃತಿ ಮೆರೆದಿದ್ದಾನೆ. ಮರುದಿನವೂ ಸಹ ಆಕೆಯನ್ನು ಅಕ್ರಮವಾಗಿ ತಡೆದು ಅನುಚಿತವಾಗಿ ಸ್ಪರ್ಶಿಸಲು ಯತ್ನಿಸಿದ್ದಾನೆ ಎಂದು ಮಹಿಳಾ ಅಧಿಕಾರಿ ಗಂಭೀರ ಆರೋಪ ಮಾಡಿದ್ದಾರೆ.
ಅಲ್ಲದೆ, ದೂರಿನಲ್ಲಿರುವ ಅತ್ಯಂತ ಗಂಭೀರವಾದ ಅಂಶವೆಂದರೆ, ಆರೋಪಿ ಉದಯ್ ಕೃಷ್ಣ ರೆಡ್ಡಿ ಸಂತ್ರಸ್ತೆಯ ಒಪ್ಪಿಗೆಯಿಲ್ಲದೆ ಆಕೆಯ ಖಾಸಗಿ ವಿಡಿಯೋವನ್ನು ರಹಸ್ಯವಾಗಿ ರೆಕಾರ್ಡ್ ಮಾಡಿಕೊಂಡಿದ್ದಾನೆ. ನಂತರ ಆ ವಿಡಿಯೋವನ್ನು ಸುಮಾ ಅವರ ಪತಿಗೆ ಕಳುಹಿಸಿ ಬ್ಲ್ಯಾಕ್ಮೇಲ್ ಮಾಡಲು ಯತ್ನಿಸಿದ್ದಾನೆ. ಜೊತೆಗೆ ಅಕಾಡೆಮಿಯಲ್ಲಿ ಇಲ್ಲಸಲ್ಲದ ಸುಳ್ಳು ವದಂತಿಗಳನ್ನು ಹರಡಿ ಗೌರವಕ್ಕೆ ಧಕ್ಕೆ ತಂದಿದ್ದಾನೆ ಎನ್ನಲಾಗಿದೆ. ಸದ್ಯ ಸಂತ್ರಸ್ತೆಯ ದೂರಿನ ಮೇರೆಗೆ ಅತ್ತಾಪುರ ಪೊಲೀಸರು ಆರೋಪಿ ಉದಯ್ ಕೃಷ್ಣ ರೆಡ್ಡಿ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (BNS) ಅಡಿಯಲ್ಲಿ ಹಲ್ಲೆ, ಬೆನ್ನಟ್ಟುವುದು, ಜೀವ ಬೆದರಿಕೆ ಹಾಗೂ ಮಹಿಳೆಯ ಶೀಲಕ್ಕೆ ಧಕ್ಕೆ ತಂದಿರುವ ಗಂಭೀರ ಪ್ರಕರಣಗಳನ್ನು ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.