newsics.com
ಚಿಕ್ಕಮಗಳೂರು: ಕಾಫಿನಾಡಿನ ಚಂದ್ರದ್ರೋಣ ಪರ್ವತ ಶ್ರೇಣಿಯ ಮಾಣಿಕ್ಯಧಾರ ಜಲಪಾತದ ಬಳಿ ನಿಗೂಢವಾಗಿ ನಾಪತ್ತೆಯಾಗಿದ್ದ ಕೇರಳ ಮೂಲದ 10ನೇ ತರಗತಿ ವಿದ್ಯಾರ್ಥಿನಿ ಶ್ರೀನಂದನಾ (15) ಕೊನೆಗೂ ಶವವಾಗಿ ಪತ್ತೆಯಾಗಿದ್ದಾಳೆ.
ಮಾಣಿಕ್ಯಧಾರಾದ 2000 ಅಡಿ ಕೆಳಗೆ ಬಾಲಕಿ ಶವವಾಗಿ ಪತ್ತೆಯಾಗಿದ್ದಾಳೆ.
ಕಳೆದ ನಾಲ್ಕು ದಿನಗಳಿಂದ ನಡೆಯುತ್ತಿದ್ದ ಸುದೀರ್ಘ ಶೋಧ ಕಾರ್ಯವು ದುರಂತ ಅಂತ್ಯ ಕಂಡಿದೆ.
ಮಾಣಿಕ್ಯಧಾರಾ ಜಲಪಾತದ ಬಳಿ ಪ್ರವಾಸಕ್ಕೆಂದು ಬಂದಿದ್ದಾಗ ಕೇವಲ 10 ನಿಮಿಷಗಳ ಅಂತರದಲ್ಲಿ ನಾಪತ್ತೆಯಾಗಿದ್ದ ಬಾಲಕಿಯ ಪತ್ತೆಗಾಗಿ ಪೊಲೀಸ್, ಅರಣ್ಯ ಇಲಾಖೆ ಹಾಗೂ SDRF ತಂಡಗಳು ಥರ್ಮಲ್ ಡ್ರೋನ್ ಬಳಸಿ ಬೃಹತ್ ಶೋಧ ಕಾರ್ಯ ನಡೆಸಿದ್ದವು.
ಬಾಲಕಿಯ ತಾಯಿ ಇದು ಅಪಹರಣ ಎಂದು ಶಂಕಿಸಿದ್ದ ಬೆನ್ನಲ್ಲೇ ಈಗ ಶವ ಪತ್ತೆಯಾಗಿರುವುದು ಪ್ರಕರಣಕ್ಕೆ ಹೊಸ ತಿರುವು ನೀಡಿದ್ದು, ಸಾವಿನ ಸುತ್ತ ಹಲವು ಅನುಮಾನಗಳು ಸೃಷ್ಟಿಯಾಗಿವೆ.
ಕೇರಳದ ಪಾಲಕ್ಕಾಡ್ ಮೂಲದ ಶ್ರೀನಂದನಾ ತನ್ನ ಕುಟುಂಬದೊಂದಿಗೆ ಬಾಬಾಬುಡನ್ಗಿರಿಯ ದತ್ತಪೀಠಕ್ಕೆ ಪ್ರವಾಸಕ್ಕೆಂದು ಬಂದಿದ್ದರು. ಮಾಣಿಕ್ಯಧಾರಾ ಜಲಪಾತದ ಬಳಿ ಬಯಲು ಪ್ರದೇಶದಂತಿರುವ ಜಾಗದಲ್ಲಿ ಕೇವಲ 10 ನಿಮಿಷಗಳ ಅಂತರದಲ್ಲಿ ಬಾಲಕಿ ನಾಪತ್ತೆಯಾಗಿದ್ದು ಹಲವು ಸಂಶಯಗಳಿಗೆ ಎಡೆಮಾಡಿಕೊಟ್ಟಿತ್ತು.
ಜಂಟಿ ಕಾರ್ಯಾಚರಣೆ:
ಬಾಲಕಿಯ ಪತ್ತೆಗಾಗಿ ಪೊಲೀಸ್ ಇಲಾಖೆ, ಅರಣ್ಯ ಇಲಾಖೆ ಹಾಗೂ ಎಸ್ಡಿಆರ್ಎಫ್ (SDRF) ತಂಡಗಳು ಜಂಟಿ ಕಾರ್ಯಾಚರಣೆ ನಡೆಸಿದ್ದವು. ದಟ್ಟ ಮಂಜು ಮತ್ತು ಕಡಿದಾದ ಕಂದಕಗಳ ನಡುವೆ ಅತ್ಯಾಧುನಿಕ ಥರ್ಮಲ್ ಡ್ರೋನ್ಗಳನ್ನು ಬಳಸಿ ಶೋಧ ನಡೆಸಲಾಗಿತ್ತು. ಕೇರಳದ ಪಾಲಕ್ಕಾಡ್ನಿಂದಲೂ ವಿಶೇಷ ಪೊಲೀಸ್ ತಂಡ ಆಗಮಿಸಿ ಸ್ಥಳೀಯ ಪೊಲೀಸರೊಂದಿಗೆ ಕಾರ್ಯಾಚರಣೆಯಲ್ಲಿ ಭಾಗಿಯಾಗಿತ್ತು.
ಅಪಹರಣವೋ, ಆಕಸ್ಮಿಕವೋ?
ಬಾಲಕಿ ನಾಪತ್ತೆಯಾದ ಸ್ಥಳದಲ್ಲಿ ಎತ್ತರದ ಕಂದಕಗಳಿರುವುದರಿಂದ ಆಕೆ ಪ್ರಪಾತಕ್ಕೆ ಬಿದ್ದಿರಬಹುದು ಎಂದು ಶಂಕಿಸಲಾಗಿತ್ತು. ಆದರೆ, ಬಾಲಕಿಯ ತಾಯಿ ತನ್ನ ಮಗಳನ್ನು ಯಾರೋ ಕಿಡ್ನ್ಯಾಪ್ ಮಾಡಿದ್ದಾರೆ ಎಂದು ಸಂಶಯ ವ್ಯಕ್ತಪಡಿಸಿದ್ದು ಪ್ರಕರಣಕ್ಕೆ ಹೊಸ ತಿರುವು ನೀಡಿದ್ದರು. ಸದ್ಯ ಶವ ಪತ್ತೆಯಾಗಿದ್ದು, ಸಾವಿನ ನಿಜವಾದ ಕಾರಣವೇನು ಎಂಬುದು ಮರಣೋತ್ತರ ಪರೀಕ್ಷೆಯ ಬಳಿಕವಷ್ಟೇ ತಿಳಿದುಬರಬೇಕಿದೆ.
ತನಿಖೆ ತೀವ್ರಗೊಳಿಸಿದ ಪೊಲೀಸರು:
ಮುಳ್ಳಯ್ಯನಗಿರಿ ಮತ್ತು ಬಾಬಾಬುಡನ್ಗಿರಿ ಭಾಗದ ಎಲ್ಲಾ ಚೆಕ್-ಪೋಸ್ಟ್ಗಳ ಸಿಸಿಟಿವಿ ದೃಶ್ಯಾವಳಿಗಳನ್ನು ಪೊಲೀಸರು ಕೂಲಂಕಷವಾಗಿ ಪರಿಶೀಲಿಸುತ್ತಿದ್ದಾರೆ. ಶವ ಪತ್ತೆಯಾದ ಸ್ಥಳದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದ್ದು, ತನಿಖಾ ತಂಡಗಳು ಸಾಕ್ಷ್ಯ ಸಂಗ್ರಹಿಸುತ್ತಿವೆ.
ರೀಲ್ಸ್’ ಹುಚ್ಚಿಗೆ ಜಲಪಾತದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರು ಸಾವು