newsics.com
ಹೈದರಾಬಾದ್(ತೆಲಂಗಾಣ): ಮಿನಿ ಟ್ರಕ್ ಚಾಲಕನ ನಿರ್ಲಕ್ಷ್ಯದಿಂದ ನಗರದಲ್ಲಿ ಶನಿವಾರ ರಾತ್ರಿ ಭೀಕರ ಅಪಘಾತ ಸಂಭವಿಸಿದೆ. ದಂಪತಿ ಸಂಚರಿಸುತ್ತಿದ್ದ ಸ್ಕೂಟಿಗೆ ಟ್ರಕ್ ಡಿಕ್ಕಿ ಹೊಡೆದು, 5 ಕಿ.ಮೀವರೆಗೆ ಎಳೆದುಕೊಂಡು ಹೋಗಿದೆ. ಪತ್ನಿ ಮೃತಪಟ್ಟಿದ್ದು, ಪತಿ ಗಂಭೀರವಾಗಿ ಗಾಯಗೊಂಡಿದ್ದಾರೆ.
ಹೈದರಾಬಾದ್ನ ಮಾಧಾಪುರ್ ಮಿತಿಯ ಮೈಂಡ್ ಸ್ಪೇಸ್ನಲ್ಲಿ ಘಟನೆ ನಡೆದಿದೆ. ಕೇರಳದ ಅಬ್ದುಲ್ ಬಾಸಿತ್ (26) ಗಂಭೀರವಾಗಿ ಗಾಯಗೊಂಡಿದ್ದು, ಇವರ ಪತ್ನಿ ಆಯೇಷಾ (22) ಮೃತಪಟ್ಟಿದ್ದಾರೆ.
ಮಿನಿ ಟ್ರಕ್ ವೇಗವಾಗಿ ಬಂದು ದಂಪತಿ ಸವಾರಿ ಮಾಡುತ್ತಿದ್ದ ಸ್ಕೂಟಿಗೆ ಡಿಕ್ಕಿ ಹೊಡೆದಿದೆ. ಟ್ರಕ್ ಕೆಳಗೆ ದಂಪತಿ ಸಿಲುಕಿಕೊಂಡಿದ್ದರೂ ಚಾಲಕ ಗಮನಿಸದೇ 5 ಕಿ.ಮೀವರೆಗೆ ಅಂದರೆ ಜುಬಿಲಿ ಹಿಲ್ಸ್ವರೆಗೆ ಎಳೆದುಕೊಂಡು ಹೋಗಿದ್ದಾನೆ.
ವಾಹನದ ಕೆಳಗೆ ಸಿಲುಕಿದ್ದ ದಂಪತಿಯನ್ನು ಗಮನಿಸಿದ ಕೆಲವು ಯುವಕರು, ಮಿನಿ ಟ್ರಕ್ ಚೇಸ್ ಮಾಡಿ ನಿಲ್ಲಿಸಿದ್ದಾರೆ. ತಕ್ಷಣವೇ ಚಾಲಕ ವಾಹನ ನಿಲ್ಲಿಸಿ ಪರಾರಿಯಾಗಿದ್ದಾನೆ. ಆದರೆ ಸಹಾಯಕ ಸಿಕ್ಕಿಬಿದ್ದಿದ್ದು, ಆತನನ್ನು ಸ್ಥಳೀಯರು ಥಳಿಸಿದ್ದಾರೆ.
ತಕ್ಷಣವೇ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ದಂಪತಿಯನ್ನು ಎಐಜಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಅಲ್ಲಿ ವೈದ್ಯರು ಮಹಿಳೆ ಮೃತಪಟ್ಟಿದ್ದಾಗಿ ಘೋಷಿಸಿದ್ದಾರೆ. ಮಿನಿಟ್ರಕ್ ಅಡಿಯಲ್ಲಿ ಬಿದ್ದ ನಂತರ ಪಕ್ಕಕ್ಕೆ ಸರಿದ ಪತಿ ಸಾವಿನಿಂದ ಪಾರಾಗಿದ್ದು, ಗಂಭೀರವಾಗಿ ಗಾಯಗೊಂಡಿದ್ದಾರೆ.
ಎರಡು ವರ್ಷದ ಹಿಂದೆ ವಿವಾಹ:
ಅಬ್ದುಲ್ ಬಾಸಿತ್ ಮತ್ತು ಆಯೇಷಾ ಎರಡು ವರ್ಷಗಳ ಹಿಂದೆ ತಮ್ಮ ಸ್ವಂತ ಊರಿನಲ್ಲಿ ವಿವಾಹವಾಗಿದ್ದರು. ಜೀವನೋಪಾಯಕ್ಕಾಗಿ ಹೈದರಾಬಾದ್ಗೆ ಬಂದು ಮಹೇಶ್ವರಂನಲ್ಲಿ ವಾಸಿಸುತ್ತಿದ್ದರು. ಅಬ್ದುಲ್ ಬಾಸಿತ್ ಮಲಬಾರ್ ಫ್ಯಾಕ್ಟರಿಯಲ್ಲಿ ರಫ್ತು ಇನ್ಚಾರ್ಜ್ ಆಗಿ ಕೆಲಸ ಮಾಡುತ್ತಾ ಜೀವನ ಸಾಗಿಸುತ್ತಿದ್ದರು. ನಿನ್ನೆ ರಾತ್ರಿ, ಕುಕಟ್ಪಲ್ಲಿಯಲ್ಲಿ ಸಿನಿಮಾ ನೋಡಿ ಸ್ಕೂಟಿಯಲ್ಲಿ ಹಿಂತಿರುಗುತ್ತಿದ್ದರು ಎಂದು ತಿಳಿದು ಬಂದಿದೆ.
ಮೃತರ ತಂದೆಯ ದೂರಿನ ಆಧಾರದ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ಪರಾರಿಯಾಗಿರುವ ಚಾಲಕನಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.
ಅತಿವೇಗ ಮತ್ತು ಚಾಲಕನ ನಿರ್ಲಕ್ಷ್ಯದಿಂದಾಗಿ ಮಹಿಳೆ ಸಾವನ್ನಪ್ಪಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕೆಂದು ಕುಟುಂಬ ಸದಸ್ಯರು ಒತ್ತಾಯಿಸಿದ್ದಾರೆ.
ಪ್ರಶಾಂತ್ ನೀಲ್ ಹಾಗೂ ಜೂ.ಎನ್ಟಿಆರ್ ಕಾಂಬಿನೇಶನ್ನ ‘ಡ್ರ್ಯಾಗನ್’ ಚಿತ್ರದ ಕತೆ ಲೀಕ್!
ಶಿವರಾಜ್ ಕುಮಾರ್ ಜತೆ ಸಂಬಂಧ ಕಟ್ಟಿದ ಪೋಸ್ಟ್; ಸುಳ್ಳು ಸುದ್ದಿ ವಿರುದ್ಧ ಸುಧಾರಾಣಿ ಗರಂ