newsics.com
ಮಂಗಳೂರು: ಇದೇ ಆಗಸ್ಟ್ 27ರಂದು ಗಣೇಶ ಚತುರ್ಥಿ ಹಬ್ಬ. ಇಲ್ಲಿ ತಯಾರಾಗುವ ಗಣೇಶ ಮೂರ್ತಿ ಅಮೆರಿಕದಲ್ಲಿ ಪೂಜೆಗೊಳ್ಳಲಿದೆ.
ಮಂಗಳೂರಿನಲ್ಲಿ ತಯಾರಾದ ಗಣಪತಿಯ ಮೂರ್ತಿಯೊಂದು ಸಮುದ್ರವನ್ನು ದಾಟಿ ಅಮೆರಿಕಕ್ಕೆ ತೆರಳಲಿದೆ. ಮಂಗಳೂರಿನ ಮಣ್ಣಗುಡ್ಡದ ರಾಮಚಂದ್ರ ರಾವ್ ಕುಟುಂಬದಿಂದ ತಯಾರಾದ ಈ ಗಣಪತಿಯ ಮೂರ್ತಿಯನ್ನು ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ವಾಸಿಸುತ್ತಿರುವ ಶೆರ್ಲೇಕರ್ ಕುಟುಂಬವು ಪೂಜಿಸಲಿದೆ.
ಮಂಗಳೂರಿನ ಮಣ್ಣಗುಡ್ಡದಲ್ಲಿ 96 ವರ್ಷಗಳ ಹಿಂದೆ ರಾಮಚಂದ್ರ ರಾವ್ ಅವರ ತಂದೆ ದಿ. ಮೋಹನ್ ರಾವ್ ಅವರು ಈ ಕಲೆಯನ್ನು ಆರಂಭಿಸಿದ್ದರು. ಈ ಕುಟುಂಬದಲ್ಲಿ ನಾಲ್ಕು ತಲೆಮಾರುಗಳಿಂದ ಮೂರ್ತಿ ತಯಾರಿಕೆಯ ಕಲೆಯು ಮುಂದುವರಿದಿದೆ. ಅವರ ನಾಲ್ವರು ಮಕ್ಕಳು, ಮೊಮ್ಮಕ್ಕಳು ಮತ್ತು ಈಗ ಮರಿಮಕ್ಕಳು ಈ ಸಂಪ್ರದಾಯವನ್ನು ಯಶಸ್ವಿಯಾಗಿ ಮುಂದುವರೆಸಿಕೊಂಡು ಬಂದಿದ್ದಾರೆ.
ಮಂಗಳೂರಿನ ಮೂಲದ ಶೆರ್ಲೇಕರ್ ಕುಟುಂಬ ಈಗ ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ನೆಲೆಸಿದೆ. ಈ ಕುಟುಂಬವು ಗಣೇಶ ಚತುರ್ಥಿಯನ್ನು ಅತ್ಯಂತ ಭಕ್ತಿಭಾವದಿಂದ ಆಚರಿಸುತ್ತದೆ.
ಕಳೆದ 28 ವರ್ಷಗಳಿಂದ ಅವರು ತಮ್ಮ ಗಣೇಶ ಚತುರ್ಥಿಯ ಪೂಜೆಗಾಗಿ ಮಂಗಳೂರಿನ ಮೋಹನ್ ರಾವ್ ಕುಟುಂಬದಿಂದ ತಯಾರಾದ ಗಣಪತಿಯ ಮೂರ್ತಿಯನ್ನೇ ಬಳಸುತ್ತಿದ್ದಾರೆ.
ಈ ಮೂರ್ತಿಯ ವಿಶೇಷತೆಯೆಂದರೆ, ಇದು ಕೇವಲ ಒಂದು ಅಡಿ ಎತ್ತರದ್ದಾಗಿದ್ದು, ಸುರಕ್ಷಿತವಾಗಿ ಅಮೆರಿಕಕ್ಕೆ ತಲುಪಲು ಕ್ಯಾಬಿನ್ ಬ್ಯಾಗ್ನಲ್ಲಿ ಸಾಗಿಸಲಾಗುತ್ತದೆ. ಈ ಗಣಪತಿ ಮೂರ್ತಿಯು ಫ್ಲೈಟ್ ಏರಿ, ಸಮುದ್ರವನ್ನು ದಾಟಿ, ಕ್ಯಾಲಿಫೋರ್ನಿಯಾದ ಶೆರ್ಲೇಕರ್ ಕುಟುಂಬದ ಮನೆಗೆ ತಲುಪುತ್ತದೆ. ಈ ಬಾರಿ ಆಗಸ್ಟ್ 27ರಂದು ಈ ಮೂರ್ತಿಯು ಅದ್ಧೂರಿಯಾಗಿ ಪೂಜಿಸಲ್ಪಡುತ್ತದೆ.
ಗಣಪತಿ ತಯಾರಕ ರಾಮಚಂದ್ರ ರಾವ್ ಮಾತನಾಡಿ, ‘ಗಣಪತಿಯನ್ನು ಅಮೆರಿಕಕ್ಕೆ ಕಳುಹಿಸುವ ಕಾರ್ಯವನ್ನು ಮೊದಲಿಗೆ ಮಾಡುತ್ತೇವೆ. ಚಿತ್ರಾ ನಕ್ಷತ್ರದಂದು ಮೂರ್ತಿ ತಯಾರಿ ಕೆಲಸ ಆರಂಭಿಸುತ್ತೇವೆ. ಅಮೆರಿಕಕ್ಕೆ ತೆಗೆದುಕೊಂಡು ಹೋಗುವವರು ಸಾಮಾನ್ಯವಾಗಿ ಜುಲೈ ಕೊನೆಯ ವಾರದಿಂದ ಆಗಸ್ಟ್ ತಿಂಗಳ ಮೊದಲ ವಾರದಲ್ಲಿ ಬರುತ್ತಾರೆ. 1 ಅಡಿ, 5 ಕೆಜಿಯೊಳಗೆ ಈ ಗಣಪತಿ ಮೂರ್ತಿ ತಯಾರಿಸುತ್ತೇವೆ ಎಂದಿದ್ದಾರೆ.
ಮಂಗಳೂರಿನ ಮಣ್ಣಗುಡ್ಡದಲ್ಲಿ ತಯಾರಾಗುವ ಈ ಗಣಪತಿಯ ಮೂರ್ತಿಯು ಭಗ್ನವಾಗದಂತೆ ಎಚ್ಚರಿಕೆಯಿಂದ ರೂಪಿಸಲಾಗುತ್ತದೆ. ಪರಿಸರ ಸ್ನೇಹಿಯಾದ ವಸ್ತುಗಳನ್ನು ಬಳಸಿ, ಕೈಯಿಂದ ರೂಪಿಸಲಾದ ಈ ಮೂರ್ತಿಗಳು ಭಕ್ತಿಯ ಜತೆಗೆ ಕಲಾತ್ಮಕ ಆಕರ್ಷಣೆಯನ್ನೂ ಹೊಂದಿವೆ.
ಅಮೆರಿಕಕ್ಕೆ ಸಾಗಿಸಲು ತಯಾರಾದ ಮೂರ್ತಿಗಳನ್ನು ವಿಶೇಷವಾಗಿ ಪ್ಯಾಕ್ ಮಾಡಲಾಗುತ್ತದೆ. ಒಂದು ಅಡಿ ಗಾತ್ರದ ಈ ಮೂರ್ತಿಯನ್ನು ವಿಮಾನದ ಕ್ಯಾಬಿನ್ ಬ್ಯಾಗ್ಗೆ ಸರಿಹೊಂದುವಂತೆ ರೂಪಿಸಲಾಗಿರುವುದು ವಿಶೇಷ.