newsics.com
ನವದೆಹಲಿ: ಟೀಂ ಇಂಡಿಯಾದಲ್ಲಿ ಇರ್ಫಾನ್ ಪಠಾಣ್ ಹಾಗೂ ಯೂಸುಫ್ ಪಠಾಣ್ ರಾಮ ಲಕ್ಷ್ಮಣರೆಂದೇ ಖ್ಯಾತರು.
ಈ ಜೋಡಿ ಹಲವು ಬಾರಿ ಜತೆಯಾಗಿ ಭಾರತಕ್ಕೆ ಗೆಲುವು ತಂದುಕೊಟ್ಟಿದ್ದಾರೆ. ಮೈದಾನದೊಳಗೆ ಇದ್ದಾಗಲೂ ಹಾಗೂ ಮೈದಾನದಾಚೆ ಕೂಡ ಒಬ್ಬರನ್ನೊಬ್ಬರು ಗೌರವಿಸಿಕೊಳ್ಳುತ್ತಾರೆ.
ಆದರೀಗ ಈ ಇಬ್ಬರು ಕ್ರಿಕೆಟ್ ಸಹೋದರರು ವರ್ಲ್ಡ್ ಚಾಂಪಿಯನ್ಶಿಪ್ ಅಫ್ ಲೆಜೆಂಡ್ಸ್ ಟೂರ್ನಿಯಲ್ಲಿ ಸೌಥ್ ಆಫ್ರಿಕಾ ಚಾಂಪಿಯನ್ಸ್ ಎದುರಿನ ಪಂದ್ಯದಲ್ಲಿ ಮೈದಾನದಲ್ಲಿಯೇ ತಾಳ್ಮೆ ಕಳೆದುಕೊಂಡ ಅಪರೂಪದ ಘಟನೆ ನಡೆದಿದೆ.
ದಕ್ಷಿಣ ಆಫ್ರಿಕಾ ಚಾಂಪಿಯನ್ಸ್ ಎದುರಿನ ಪಂದ್ಯದಲ್ಲಿ ಡೇಲ್ ಸ್ಟೇಯ್ನ್ ಎಸೆದ 19ನೇ ಓವರ್ನಲ್ಲಿ ಇರ್ಫಾನ್ ಪಠಾಣ್ ಲೋಪ್ಟೆಡ್ ಶಾಟ್ ಬಾರಿಸಿದರು. ಈ ವೇಳೆ ಎರಡನೇ ರನ್ ಪಡೆಯುವ ಯತ್ನದಲ್ಲಿ ಇರ್ಫಾನ್ ಹಾಗೂ ಯೂಸುಫ್ ನಡುವೆ ಗೊಂದಲ ಉಂಟಾದ್ದರಿಂದ ಇರ್ಫಾನ್ ಪಠಾಣ್ ರನೌಟ್ ಆಗಿ ಪೆವಿಲಿಯನ್ ಸೇರಿದರು.
ಇರ್ಫಾನ್ ಪಠಾಣ್, ಅನಾಯಾಸವಾಗಿ ಎರಡನೇ ರನ್ ಪಡೆಯುವ ಯತ್ನ ನಡೆಸಿದರು. ಆದರೆ ಯೂಸುಫ್ ಪಠಾಣ್ ಕೊಂಚ ತಡಬಡಾಯಿಸಿದ್ದರಿಂದ ಅನಾವಶ್ಯಕವಾಗಿ ಇರ್ಫಾನ್ ಪಠಾಣ್ ರನೌಟ್ ಆಗುವ ಮೂಲಕ ವಿಕೆಟ್ ಕೈಚೆಲ್ಲಿದರು.
ಇರ್ಫಾನ್ ಪಠಾಣ್ ಔಟ್ ಆಗುತ್ತಿದ್ದಂತೆಯೇ ತಾಳ್ಮೆ ಕಳೆದುಕೊಂಡು ಸಹೋದರ ಯೂಸುಫ್ ಪಠಾಣ್ ಅವರ ಮೇಲೆ ರೇಗಾಡಿದರು. ಈ ವಿಡಿಯೋವೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಆದರೆ, ಆ ಹೊತ್ತಿಗಾಗಲೇ ಆ ಪಂದ್ಯವನ್ನು ದಕ್ಷಿಣ ಆಫ್ರಿಕಾ ಗೆದ್ದಾಗಿತ್ತು. ಮೊದಲು ಬ್ಯಾಟ್ ಮಾಡಿದ್ದ ದಕ್ಷಿಣ ಆಫ್ರಿಕಾ ಚಾಂಪಿಯನ್ಸ್ ತಂಡವು ನಿಗದಿತ 20 ಓವರ್ಗಳಲ್ಲಿ 8 ವಿಕೆಟ್ ಕಳೆದುಕೊಂಡು 210 ರನ್ ಬಾರಿಸಿತ್ತು.
ಭಾರತ ತಂಡವು ಸೆಮಿಫೈನಲ್ಗೆ ಅರ್ಹತೆ ಪಡೆಯಲು ಕನಿಷ್ಠ 153 ರನ್ ಬಾರಿಸಬೇಕಿತ್ತು. ಭಾರತ ತಂಡವು ಅಂತಿಮವಾಗಿ 6 ವಿಕೆಟ್ ಕಳೆದುಕೊಂಡು 156 ರನ್ ಗಳಿಸುವ ಮೂಲಕ ಪಂದ್ಯ ಸೋತರೂ, ಸೆಮಿಫೈನಲ್ಗೆ ಅರ್ಹತೆ ಪಡೆಯಿತು.
ದೊಡ್ಡ ಮೊತ್ತ ಬೆನ್ನತ್ತಿದ ಇಂಡಿಯಾ ಚಾಂಪಿಯನ್ಸ್ ತಂಡವು 11.3 ಓವರ್ಗಳಲ್ಲಿ 77 ರನ್ ಗಳಿಸುವಷ್ಟರಲ್ಲಿ ಅಗ್ರಕ್ರಮಾಂಕದ 5 ಬ್ಯಾಟರ್ಗಳು ಪೆವಿಲಿಯನ್ ಸೇರಿದ್ದರು. ಆದರೆ ಕೊನೆಯಲ್ಲಿ ಯೂಸುಫ್ ಪಠಾಣ್ ಅಜೇಯ 54 ಹಾಗೂ ಇರ್ಫಾನ್ ಪಠಾಣ್ 35 ರನ್ ಸಿಡಿಸುವ ಮೂಲಕ ತಂಡ ಸೆಮೀಸ್ಗೆ ಅರ್ಹತೆ ಪಡೆಯುವಂತೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದರು.
Irfan Pathan is furious litterly.pic.twitter.com/s0OyDJ3mOT
— Manoj Tiwari (@ManojTiwariIND) July 11, 2024
ಪುರುಷರನ್ನು ಬೈದು, ಅವಮಾನಿಸಿ ತಿಂಗಳಿಗೆ ಕೋಟಿ ಕೋಟಿ ಸಂಪಾದಿಸ್ತಾಳೆ ಈ ಮಹಿಳೆ!