newsics.com
ಅಹಮದಾಬಾದ್: ಗುಜರಾತ್ನ ಅಹಮದಾಬಾದ್ನಲ್ಲಿ ಸಂಭವಿಸಿದ ಏರ್ ಇಂಡಿಯಾ ವಿಮಾನ ದುರಂತಕ್ಕೆ ಸಂಬಂಧಿಸಿದಂತೆ ಒಂದೊಂದೇ ಸಂಗತಿಗಳು ಹೊರಬರುತ್ತಿವೆ. ವಿಮಾನ ಅಪಘಾತಕ್ಕೀಡಾದ ಬಳಿಕ ರಕ್ಷಣಾ ತಂಡಗಳು ಎದುರಿಸಿದ ಸವಾಲು ಎಂತದ್ದೆಂಬುದರ ಕುರಿತಾದ ವರದಿ ಬಂದಿದೆ.
ವಿಮಾನ ಅಪಘಾತದ ಬಳಿಕ ಇಂಧನ ಟ್ಯಾಂಕ್ ಸ್ಫೋಟಗೊಂಡಿತ್ತು. ಕಿತ್ತಳೆ ಬಣ್ಣದ ಬೆಂಕಿ ಉಂಡೆಗಳು ಇಡೀ ಪ್ರದೇಶವನ್ನು ಆವರಿಸಿದ್ದವು. ಹೀಗಾಗಿ, ಅಪಘಾತದ ಸ್ಥಳ ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ 1000 ಡಿಗ್ರಿ ಸೆಲ್ಸಿಯಸ್ ಉಷ್ಣಾಂವಿತ್ತು. ಇದು ರಕ್ಷಣಾ ಕಾರ್ಯಾಚರಣೆ ನಡೆಸಲು ಅವಕಾಶವೇ ನೀಡಲಿಲ್ಲ ಎಂದು ಅಧಿಕಾರಿ ತಿಳಿಸಿದ್ದಾರೆ.
ಆ ಸ್ಥಳದಿಂದ ನಾಯಿ ಮತ್ತು ಪಕ್ಷಿಗಳು ಸಹ ತಪ್ಪಿಕೊಳ್ಳಲು ಸಾಧ್ಯವಾಗಲಿಲ್ಲ ಎಂದು ಅವರು ಅಪಘಾತದ ಭೀಕರತೆಯನ್ನು ವಿವರಿಸಿದ್ದಾರೆ.
ಅಹಮದಾಬಾದ್ನಿಂದ ಲಂಡನ್ಗೆ ಹೊರಟಿದ್ದ ಏರ್ ಇಂಡಿಯಾ ವಿಮಾನವು ಟೇಕಾಫ್ ಆದ ಕೆಲವೇ ಕ್ಷಣಗಳಲ್ಲಿ ಪತನಗೊಂಡು, ಗುಜರಾತ್ನ ಮಾಜಿ ಮುಖ್ಯಮಂತ್ರಿ ವಿಜಯ್ ರೂಪಾನಿ ಸೇರಿದಂತೆ ಕನಿಷ್ಠ 265 ಮಂದಿ ಮೃತಪಟ್ಟಿದ್ದಾರೆ. ವಿಮಾನವು ನಿಲ್ದಾಣದ ಸಮೀಪದ ಮೇಘಾನಿ ನಗರದಲ್ಲಿನ ಬಿ.ಜೆ ವೈದ್ಯಕೀಯ ಕಾಲೇಜಿನ ವೈದ್ಯರು, ವೈದ್ಯಕೀಯ ವಿದ್ಯಾರ್ಥಿಗಳು ಮತ್ತು ದಾದಿಯರ ವಸತಿ ನಿಲಯ ಸಮುಚ್ಚಯದ ಮೇಲೆ ಬಿದ್ದಿದ್ದರಿಂದ ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗಿದೆ.