newsics.com
ಹುಬ್ಬಳ್ಳಿ: ಇಲ್ಲಿ ನಡೆದ 5 ವರ್ಷದ ಬಾಲಕಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಎನ್ಕೌಂಟರ್ ಮಾಡಿ ಪಿಎಸ್ಐ ಅನ್ನಪೂರ್ಣಾ ರಾಜ್ಯಕ್ಕೇ ಮಾದರಿಯಾಗಿದ್ದಾರೆ. ಲೇಡಿ ಸಿಂಗ್ ಎಂದೇ ಖ್ಯಾತರಾಗಿಬಿಟ್ಟಿದ್ದಾರೆ.
ತಮ್ಮ ವೈಯಕ್ತಿಕ ಬದುಕನ್ನೂ ಲೆಕ್ಕಿಸದೆ ರಿಸ್ಕ್ ತೆಗೆದುಕೊಂಡ ಪಿಎಸ್ಐ ಅನ್ನಪೂರ್ಣಾ ಅವರ ಹಿನ್ನೆಲೆಯೂ ರೋಚಕವಾಗಿದೆ.
ಜನರ ಆಕ್ರೋಶಕ್ಕೆ ಕಾರಣವಾಗಿದ್ದ ಹುಬ್ಬಳ್ಳಿ 5 ವರ್ಷದ ಬಾಲಕಿ ಕೊಲೆ ಪ್ರಕರಣದಲ್ಲಿ ಆರೋಪಿಯನ್ನು ಎನ್ಕೌಂಟರ್ ಮಾಡಿ, ಸೂಕ್ತ ಸಮಯದಲ್ಲಿ ದಿಟ್ಟ ಹೆಜ್ಜೆಯಿಟ್ಟ ಅಶೋಕ ನಗರ ಪೊಲೀಸ್ ಠಾಣೆ ಲೇಡಿ ಪಿಎಸ್ಐ ಅನ್ನಪೂರ್ಣಾ ರಾಜ್ಯಕ್ಕೆ ಮಾದರಿ ಅಧಿಕಾರಿ ಎನಿಸಿದ್ದಾರೆ.
ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲ್ಲೂಕು ಗುಜನಟ್ಟಿ ಗ್ರಾಮದ ನಿವಾಸಿಯಾಗಿರುವ ಅನ್ನಪೂರ್ಣ ಅವರು ಬಡತನದ ರೈತಾಪಿ ಕುಟುಂಬದಿಂದ ಬಂದವರು.
ಧಾರವಾಡ ಕೃಷಿ ವಿಶ್ವವಿದ್ಯಾಲಯದಲ್ಲಿ ಎಂಎಸ್ಸಿ ಪದವಿ ಮುಗಿಸಿ, ಕಳೆದ ವರ್ಷ ಯುಪಿಎಸ್ಸಿ ಪರೀಕ್ಷೆ ಬರೆದು ಪ್ರೀಲಿಮ್ಸ್ ಕ್ಲಿಯರ್ ಮಾಡಿದ್ದರು. ಪಿಎಸ್ಐ ಆಗಿ ಆಯ್ಕೆಯಾಗಿ 2018ರಲ್ಲಿ ಸೇವೆಗೆ ಸೇರ್ಪಡೆಯಾಗಿದ್ದರು.
ಮುಂದಿನ ತಿಂಗಳು ಅವರ ಮದುವೆ ನಿಗದಿಯಾಗಿದ್ದು, ವೈಯಕ್ತಿಕ ಜೀವನವನ್ನೂ ಲೆಕ್ಕಿಸದೇ ಆರೋಪಿಯನ್ನು ಬಲಿ ತೆಗೆದುಕೊಂಡಿದ್ದಾರೆ.
ಬಾಲಕಿ ಕೊಲೆಯಾದ ಬಳಿಕ ಪಿಎಸ್ಐ ಅನ್ನಪೂರ್ಣಾ ಆಕೆಯ ಮುಖವನ್ನು ನೋಡಿ ಆಸ್ಪತ್ರೆಯಲ್ಲಿಯೇ ಕಣ್ಣೀರು ಹಾಕಿದ್ದರು. ಆಗಲೇ ಆರೋಪಿ ಸಿಕ್ಕಿದ್ದರೆ ತಕ್ಕ ಕ್ರಮ ಕೈಗೊಳ್ಳುವುದಾಗಿ ಶಪಥ ಮಾಡಿದ್ದರು. ಕಾಕತಾಳೀಯೆಂಬಂತೆ ಪಿಎಸ್ಐ ಅನ್ನಪೂರ್ಣಾ ತಂಡಕ್ಕೇ ಆರೋಪಿ ಸೆರೆಸಿಕ್ಕಿದ್ದಾನೆ. ಬಂಧಿಸಲು ಹೋದಾಗ ಆರೋಪಿ ತಮ್ಮ ಮೇಲೆ ದಾಳಿಗೆ ಯತ್ನಿಸಿದ್ದು, ಆತ್ಮರಕ್ಷಣೆಗಾಗಿ 2 ಸುತ್ತು ಗಾಳಿಯಲ್ಲಿ ಗುಂಡು ಹಾರಿಸಿ ಶರಣಾಗಲು ಸೂಚಿಸಿದರೂ ಲೆಕ್ಕಿಸದೆ ತಪ್ಪಿಸಿಕೊಳ್ಳಲು ಹೋದಾಗ ಕಾಲಿನತ್ತ ಗುಂಡು ಹಾರಿಸಿದರು. ಆದರೆ ಗುಂಡು ಬೆನ್ನಿಗೆ ತಾಗಿ ಗಾಯಗೊಂಡ ಆರೋಪಿಯನ್ನು ಕಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿತ್ತು. ಚಿಕಿತ್ಸೆ ಫಲಿಸದೇ ಆಸ್ಪತ್ರೆಯಲ್ಲಿಯೇ ಸಾವನ್ನಪ್ಪಿದ್ದ.
ಘಟನೆ ಏನು?
ಸೈಕೋಪಾತ್ ಒಬ್ಬ ಐದು ವರ್ಷದ ಬಾಲಕಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿ, ಕತ್ತು ಹಿಸುಕಿ ಕೊಲೆ ಮಾಡಿರುವ ಘಟನೆ ಹುಬ್ಬಳ್ಳಿಯ ಅಶೋಕನಗರ (Ashok Nagar) ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿತ್ತು. ಬಿಹಾರ ಮೂಲದ ಸೈಕೋಪಾತ್ ಬಾಲಕಿಯನ್ನ ಶೆಡ್ಗೆ ಕರೆದೊಯ್ದು ಅತ್ಯಾಚಾರಕ್ಕೆ ಯತ್ನಿಸಿದ್ದ. ಬಾಲಕಿ ಚೀರಾಟ ಕೇಳಿ ಅಲ್ಲೇ ಇದ್ದ ಸ್ಥಳೀಯರು ಶೆಡ್ನತ್ತ ಬಂದಿದ್ದರು. ಜನ ಬರುತ್ತಿರುವುದನ್ನು ಕಂಡ ಸೈಕೋಪಾತ್ ಭಯದಿಂದ ಬಾಲಕಿಯ ಕತ್ತು ಹಿಸುಕಿ ಕೊಲೆ ಮಾಡಿ, ಎಸ್ಕೇಪ್ ಆಗಿದ್ದ.
Rain alert ರಾಜ್ಯದ ವಿವಿಧೆಡೆ ಮುಂದಿನ ಒಂದು ವಾರ ವರುಣನ ಆರ್ಭಟ – ಈ ಜಿಲ್ಲೆಗಳಲ್ಲಿ ಭಾರೀ ಮಳೆಯ ಮುನ್ಸೂಚನೆ!
Relationship Astrology:ಗಂಡ ಹೆಂಡತಿ ತಪ್ಪಾಗಿಯೂ ಈ ದಿನದಂದು ಒಂದಾಗಬಾರದು