newsics.com
ಬೀದರ್ : ಮೇಲ್ಜಾತಿ ಬಾಲಕಿಯನ್ನು ಪ್ರೀತಿಸುತ್ತಿದ್ದ ದಲಿತ ಬಾಲಕನನ್ನು ಬಾಲಕಿ ಮನೆಯವರು ಮನಬಂದಂತೆ ಥಳಿಸಿದ್ದರಿಂದ ಆತ ಸಾವನ್ನಪ್ಪಿರುವ ಘಟನೆ ಬೀದರ್ ನ ಕುಶನೂರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಕಿಯ ತಂದೆ ಹಾಗೂ ಸಹೋದರನನ್ನು ಬಂಧಿಸಲಾಗಿದೆ.
ಮೃತ ಯುವಕನನ್ನು ಬೇಡಕುಂದಾ ಗ್ರಾಮದ ನಿವಾಸಿ ಸುಮಿತ್ (19) ಎಂದು ತಿಳಿದುಬಂದಿದೆ.ರಕ್ಷಾಳ್ ಗ್ರಾಮದ ಬಾಲಕಿಯನ್ನು ಸುಮಿತ್ ಪ್ರೀತಿಸುತಿದ್ದ. ರವಿವಾರದಂದು ನಮ್ಮ ಮನೆ ಕಡೆಗೆ ಬಾ ಎಂದು ಸುಮಿತ್ ನನ್ನು ಹುಡುಗಿ ಕರೆದಿದ್ದಳು. ಹುಡುಗಿಯನ್ನು ಭೇಟಿ ಮಾಡಲು ಹೋದ ಸುಮಿತ್ ನನ್ನು, ಹುಡುಗಿಯ ಅಪ್ಪ, ಅಣ್ಣ ಮತ್ತು ಸಂಬಂಧಿಕರು ಮನೆಯಲ್ಲಿ ಕೂಡಿ ಹಾಕಿ ಹಲ್ಲೆ ನಡೆಸಿದ್ದರು. ಸುಮಿತ್ ಮನೆಯಿಂದ ಹೊರಗಡೆ ಹೋದ ನಂತರ ಬಾಲಕಿಯ ಅಣ್ಣ ಮತ್ತು ಆತನ ಗೆಳೆಯರು ಸೇರಿಕೊಂಡು ಮತ್ತೆ ಆತನ ಮೇಲೆ ಹಲ್ಲೆ ನಡೆಸಿದ್ದಾರೆ.
ಗಂಭೀರವಾಗಿ ಗಾಯಗೊಂಡಿದ್ದ ಯುವಕನಿಗೆ ಮಹಾರಾಷ್ಟ್ರದ ಉದಗೀರ್, ಲಾತೂರ್ನಲ್ಲಿ ಚಿಕಿತ್ಸೆ ಕೊಡಿಸಲಾಗಿದೆ. ಆದರೆ, ಚಿಕಿತ್ಸೆ ಫಲಿಸದೆ ಬಾಲಕ ಮೃತಪಟ್ಟಿದ್ದಾನೆ. ನಗರದ ಬ್ರಿಮ್ಸ್ನಲ್ಲಿ ಶವದ ಮರಣೋತ್ತರ ಪರೀಕ್ಷೆ ನಡೆಸಿ, ಕುಟುಂಬದವರಿಗೆ ಒಪ್ಪಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕೊಲೆಗೆ ಕಾರಣರಾದವರನ್ನು ಬಂಧಿಸಬೇಕು ಎಂದು ಆಗ್ರಹಿಸಿ ಸುಮಿತ್ ಪೋಷಕರು ಕೆಲಕಾಲ ಬ್ರಿಮ್ಸ್ ಎದುರು ಧರಣಿ ನಡೆಸಿದರು. ಸುಮಿತ್ ಅವರ ತಂದೆ ವಿಜಯಕುಮಾರ ಮಾರುತಿ ಅವರು ಕೊಟ್ಟಿರುವ ದೂರಿನ ಮೇರೆಗೆ ಕುಶನೂರ ಪೊಲೀಸ್ ಠಾಣೆಯಲ್ಲಿ SC/ST ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.