newsics.com
ಬೆಳಕಿನ ಹಬ್ಬ ದೀಪಾವಳಿಯ ಸಡಗರ, ಸಂಭ್ರಮ ಮನ- ಮನೆಗಳಲ್ಲಿ ಅನಾವರಣಗೊಳ್ಳುತ್ತಿದೆ. ದೀಪಾವಳಿ ಆಚರಣೆಗೆ ವಿಶ್ವವೇ ಈಗ ಸಜ್ಜಾಗಿದೆ. ಮನೆಮನೆಯಲ್ಲೂ ವಿದ್ಯುತ್ ದೀಪಗಳ ಅಲಂಕಾರ, ಸ್ನೇಹಿತರು, ಬಂಧುಗಳೊಂದಿಗೆ ವಿನಿಮಯ ಮಾಡಿಕೊಳ್ಳಲು ಉಡುಗೊರೆ, ಸಿಹಿ ತಿನಿಸುಗಳ ಖರೀದಿ, ಪಟಾಕಿ ಖರೀದಿ ಜೋರಾಗಿಯೇ ನಡೆದಿದೆ.
ಕತ್ತಲೆಯಿಂದ ಬೆಳಕಿನೆಡೆಗೆ ಕೊಂಡೊಯ್ಯುವ ದೀಪಗಳ ಬೆಳಕಿನಲ್ಲಿ ವಿಶ್ವವನ್ನೇ ಮುಳುಗೇಳಿಸುವ ದೀಪಾವಳಿ ಹಿಂದೂಗಳಿಗೆ ಅತ್ಯಂತ ಪ್ರಮುಖ ಹಬ್ಬವೆಂದು ಪರಿಗಣಿಸಲಾಗಿದೆ.
ಐದು ದಿನಗಳ ಹಬ್ಬವಾದ ದೀಪಾವಳಿ ಆಚರಣೆಗಳು ಧನ್ತೇರಸ್ನಿಂದ ಪ್ರಾರಂಭವಾಗುತ್ತದೆ. ದೀಪಾವಳಿಯ ಒಂದು ದಿನ ಮುಂಚಿತವಾಗಿ ಭಾರತದ ಅನೇಕ ಭಾಗಗಳಲ್ಲಿ ಜನರು ಚೋಟಿ ಅಂದರೆ ಕಿರು ದೀಪಾವಳಿಯನ್ನು ಆಚರಿಸುತ್ತಾರೆ.
ಕಿರು ದೀಪಾವಳಿಯನ್ನು ಆಶ್ವಯುಜ ಕೃಷ್ಣ ಪಕ್ಷ ಕಾರ್ತಿಕ ಮಾಸದ ಕರಾಳ 14ನೇ ದಿನ ಅಥವಾ ಚತುರ್ದಶಿ ತಿಥಿಯಂದು ಆಚರಿಸಲಾಗುತ್ತದೆ. ಮರುದಿನ ಅಂದರೆ ದೀಪಾವಳಿ ಅಮಾವಾಸ್ಯೆಯಂದು ಲಕ್ಷ್ಮೀ ಪೂಜೆ ನೆರವೇರಿಸಲಾಗುತ್ತದೆ.
ಏನಿದು ಕಿರು ದೀಪಾವಳಿ?
ಕಿರು ದೀಪಾವಳಿಯು ಕೆಟ್ಟದ್ದರ ಮೇಲೆ ಒಳ್ಳೆಯದರ ವಿಜಯವನ್ನು ಸೂಚಿಸುತ್ತದೆ. ಭಾರತದಾದ್ಯಂತ ಬಹಳ ಉತ್ಸಾಹದಿಂದ ಇದನ್ನು ಆಚರಿಸಲಾಗುತ್ತದೆ. ನರಕಾಸುರನು ಸುಮಾರು 16 ಸಾವಿರ ಮಹಿಳೆಯರನ್ನು ಅಪಹರಿಸುತ್ತಾನೆ. ಈ ದಿನ ಶ್ರೀಕೃಷ್ಣನು ತನ್ನ ಪತ್ನಿ ಸತ್ಯಭಾಮೆಯ ಸಹಾಯದಿಂದ ರಾಕ್ಷಸ ರಾಜನನ್ನು ಸೋಲಿಸಿ ಅವನ ಸೆರೆಯಿಂದ ಮಹಿಳೆಯರನ್ನು ರಕ್ಷಿಸುತ್ತಾನೆ. ಈ ವಿಜಯವನ್ನು ಗುರುತಿಸಲು ಮತ್ತು ಶ್ರೀಕೃಷ್ಣನ ಆಶೀರ್ವಾದ ಪಡೆಯಲು ನರಕ ಚತುರ್ದಶಿಯನ್ನು ಆಚರಿಸಲಾಗುತ್ತದೆ. ಇದನ್ನು ನರಕ ಚೌದಾಸ್ ಮತ್ತು ನರಕ ನಿವಾರಣ್ ಚತುರ್ದಶಿ ಎಂದು ಕರೆಯಲಾಗುತ್ತದೆ. ಈ ದಿನ ಅನೇಕ ರಾಜ್ಯಗಳಲ್ಲಿ ಶ್ರೀ ಕೃಷ್ಣ ಮತ್ತು ಸತ್ಯಭಾಮೆಯನ್ನೂ ಪೂಜಿಸಲಾಗುತ್ತದೆ.
ಈ ದಿನ ಜನರು ತಮ್ಮ ಮನೆಗಳನ್ನು ದೀಪ, ಹೂವು, ಮೇಣದಬತ್ತಿಗಳಿಂದ ಅಲಂಕರಿಸುತ್ತಾರೆ. ಸಂಪತ್ತು ಮತ್ತು ಸಮೃದ್ಧಿ ದೇವತೆಯಾದ ಲಕ್ಷ್ಮಿ ದೇವಿಯು ಈ ದಿನ ತನ್ನ ಭಕ್ತರ ಮನೆಗಳಿಗೆ ಭೇಟಿ ನೀಡುತ್ತಾಳೆ ಎನ್ನುವ ನಂಬಿಕೆಯಿಂದ ಈ ಹಬ್ಬವನ್ನು ಆಚರಿಸಲಾಗುತ್ತದೆ.
ಈ ದಿನ ಬೆಳಗ್ಗೆ ಬೇಗ ಎದ್ದು ಜನರು ಅಭ್ಯಂಗ ಸ್ನಾನ ಮಾಡುತ್ತಾರೆ. ಇದು ಜೀವನದಲ್ಲಿ ನಕಾರಾತ್ಮಕ ಅಂಶ ಅಥವಾ ಶಕ್ತಿಯನ್ನು ತೆಗೆದುಹಾಕಿ ಸಕಾರಾತ್ಮಕತೆ, ಭರವಸೆ ಮತ್ತು ಸಮೃದ್ಧಿಯ ಹೊಸ ಆರಂಭವನ್ನು ಸೂಚಿಸುತ್ತದೆ.
ಲಕ್ಷ್ಮೀ ದೇವಿಯನ್ನು ಸ್ವಾಗತಿಸಲು ಮನೆ ಬಾಗಿಲಿನಲ್ಲಿ ಮಣ್ಣಿನ ದೀಪಗಳನ್ನು ಬೆಳಗಿಸಲಾಗುತ್ತದೆ, ವರ್ಣರಂಜಿತ ರಂಗೋಲಿಗಳನ್ನು ರಚಿಸಲಾಗುತ್ತದೆ.
ಸಂಪತ್ತು ಮತ್ತು ಸಮೃದ್ಧಿಗಾಗಿ ಭಗವಾನ್ ಕೃಷ್ಣ ಮತ್ತು ಲಕ್ಷ್ಮೀ ದೇವಿಯನ್ನು ಪೂಜಿಸಲಾಗುತ್ತದೆ.
ಪೂಜೆ ಮಾಡುವ ಮೊದಲು ಮನೆಯನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಿ, ಹೂವು ಮತ್ತು ರಂಗೋಲಿಗಳಿಂದ ಅಲಂಕರಿಸಿ. ಬಳಿಕ ಅಭ್ಯಂಗ ಸ್ನಾನ ಮಾಡಿ. ಈಶಾನ್ಯಕ್ಕೆ ಮುಖ ಮಾಡಿ ಕುಳಿತು ಪೂಜೆ ನೆರವೇರಿಸಿ.
ತುಪ್ಪದ ದೀಪವನ್ನು ಬೆಳಗಿಸಿ ಮತ್ತು ಅದನ್ನು ವಿಗ್ರಹಗಳ ಮುಂದೆ ಇರಿಸಿ. ಕೃಷ್ಣ, ಲಕ್ಷ್ಮಿ, ಯಮ ಮತ್ತು ಹನುಮಾನ್ ದೇವರನ್ನು ಪೂಜಿಸಿ.
ಚತುರ್ದಶಿ ತಿಥಿಯು ಅಕ್ಟೋಬರ್ 30ರಂದು ಮಧ್ಯಾಹ್ನ 1.15ರಿಂದ ಅಕ್ಟೋಬರ್ 31 ರಂದು ಮಧ್ಯಾಹ್ನ 3.52 ರವರೆಗೆ ಇರುತ್ತದೆ. ಅಭ್ಯಂಗ ಸ್ನಾನ ಮುಹೂರ್ತವು ಬೆಳಗ್ಗೆ 5.20 ರಿಂದ 6.32 ರವರೆಗೆ ಇರುತ್ತದೆ.
ಹಿಂದೂಗಳಿಗೆ ಕಿರು ದೀಪಾವಳಿ ಮತ್ತು ದೀಪಾವಳಿ ಮಹತ್ವದ ಹಬ್ಬಗಳಾಗಿವೆ. ಈ ದಿನದಂದು ಯಮ ದೇವರ ಹೆಸರಿನಲ್ಲಿ ದೀಪವನ್ನು ಬೆಳಗಿಸಲಾಗುತ್ತದೆ. ಈ ದಿನ ಯಮನನ್ನು ಪೂಜಿಸುವುದು ಎಲ್ಲಾ ಪಾಪಗಳಿಗೆ ಶಿಕ್ಷೆಯನ್ನು ತೊಡೆದುಹಾಕಲು ಸಹಾಯ ಮಾಡುತ್ತದೆ ಎಂದು ನಂಬಲಾಗಿದೆ.
ಲಕ್ಷ್ಮೀ ಪೂಜೆ:
ಕಾರ್ತಿಕ ಮಾಸದ ಅಮಾವಾಸ್ಯೆ ತಿಥಿಯಂದು ಲಕ್ಷ್ಮೀ, ಗಣೇಶ ಮತ್ತು ಸರಸ್ವತಿ ದೇವಿಯನ್ನು ಆರಾಧಿಸಲಾಗುತ್ತದೆ. ಮನೆಗೆ ಬರುವ ಲಕ್ಷ್ಮಿ ದೇವಿಯನ್ನು ಸ್ವಾಗತಿಸಲು ದೀಪಗಳನ್ನು ಬೆಳಗಿಸಲಾಗುತ್ತದೆ. ರಂಗೋಲಿ, ಹೂವುಗಳಿಂದ ಮನೆಯನ್ನು ಅಲಂಕರಿಸಲಾಗುತ್ತದೆ. ಜನರು ಕೂಡ ಪಟಾಕಿ ಸಿಡಿಸಿ ಸಂಭ್ರಮಿಸುತ್ತಾರೆ.
14 ವರ್ಷಗಳ ವನವಾಸದ ಅನಂತರ ಭಗವಾನ್ ರಾಮನು ಅಯೋಧ್ಯೆಗೆ ಹಿಂದಿರುಗಿದ ದಿನವನ್ನು ಇದು ಸೂಚಿಸುತ್ತದೆ. ಪಶ್ಚಿಮ ಬಂಗಾಳದಲ್ಲಿ ಈ ದಿನ ಕಾಳಿ ದೇವಿಯನ್ನು ಪೂಜಿಸಲಾಗುತ್ತದೆ. ಈ ದಿನ ಹೊಸ ವ್ಯಾಪಾರ ಆರಂಭ, ವ್ಯವಹಾರಗಳಿಗಾಗಿ ಹೊಸ ಖಾತೆ ತೆರೆಯುವ ಸಂಪ್ರದಾಯವಿದೆ.
ಗೋ ಪೂಜೆ:
ಬಲಿಪಾಡ್ಯಮಿ ಅಂದರೆ ನವೆಂಬರ್ 2ರಂದು ಗೋ ಪೂಜೆ ನೆರವೇರಿಸಲಾಗುತ್ತದೆ. ಮುಕ್ಕೋಟಿ ದೇವರುಗಳು ಈ ಗೋವಿನಲ್ಲಿವೆ ಎಂಬ ಪೂಜ್ಯ ಭಾವ ನಮ್ಮಲ್ಲಿದೆ.