newsics.com
ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ನಾಡಹಬ್ಬ ದಸರಾ ಸಂಭ್ರಮ ಮನೆಮಾಡಿದೆ.
ಶನಿವಾರ ಸಂಜೆ 4:30ರ ಕುಂಭಲಗ್ನದಲ್ಲಿ ಜಂಬೂಸವಾರಿಯ ಪ್ರಮುಖ ಆಕರ್ಷಣೆಯಾದ ಅಂಬಾರಿಯಲ್ಲಿನ ಶಕ್ತಿದೇವತೆ ಚಾಮುಙಡೇಶ್ವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಪುಷ್ಪಾರ್ಚಣೆ ಮಾಡಿದರು.
750 ಕೆ.ಜಿ ತೂಕದ ಚಿನ್ನದ ಅಂಬಾರಿಯಲ್ಲಿರುವ ಸರ್ವಾಲಂಕಾರಭೂಷಿತೆ ನಾಡಿನ ಅಧಿದೇವತೆ ಚಾಮುಂಡೇಶ್ವರಿಗೆ ಪುಷ್ಪಾರ್ಚನೆ ಮಾಡಿದರು.
ಇದಕ್ಕೂ ಮೊದಲು ಸುರಿದ ಮಳೆಯನ್ನೂ ಲೆಕ್ಕಿಸದೆ 750 ಕೆಜಿ ತೂಕದ ಚಿನ್ನದಂಬಾರಿ ಹೊತ್ತ ಅಭಿಮನ್ಯು ಅರಮನೆ ಆವರಣದಲ್ಲಿ ಗಜಗಾಂಭೀರ್ಯದಿಂದ ಹೆಜ್ಜೆ ಹಾಕುತ್ತಾ ಸಾಗುತ್ತಿರುವ ದೃಶ್ಯವನ್ನು ಸಾವಿರಾರು ಜನ ಕಣ್ತುಂಬಿಕೊಂಡರು.
ಅಂಬಾರಿ ಹೊತ್ತ ಅಭಿಮನ್ಯು ಆನೆಯೊಂದಿಗೆ ಗಜಪಡೆ ಅರಮನೆಯಿಂದ ಬನ್ನಿಮಂಟಪದವರೆಗೆ ಸುಮಾರು 5 ಕಿ.ಮೀ.ಗೂ ಹೆಚ್ಚು ದೂರ ಸಾಗಲಿದೆ
ಇದಕ್ಕೂ ಮೊದಲು ಅರಮನೆ ಬಲರಾಮ ದ್ವಾರದ ಕೋಟೆ ಆಂಜನೇಯ ದೇವಾಲಯದ ಬಳಿ ನಂದಿಧ್ವಜಕ್ಕೆ ಮುಖ್ಯಮಂತ್ರಿ ಹಾಗೂ ಗಣ್ಯರು ಪೂಜೆ ಸಲ್ಲಿಸಿದ ಬಳಿಕ ವಿಜಯದಶಮಿ ಮೆರವಣಿಗೆಗೆ ಚಾಲನೆ ನೀಡಿದರು.
ನಾಡಿನ ಕಲೆ, ಸಂಸ್ಕೃತಿ ಸೇರಿದಂತೆ ವಿವಿಧ ಇಲಾಖೆಗಳ ಪ್ರಗತಿ ಬಿಂಬಿಸುವ ಸುಮಾರು 51 ಸ್ತಬ್ಧಚಿತ್ರಗಳು ಹಾಗೂ ಕಲಾ ತಂಡಗಳ ಮೆರವಣಿಗೆ ನಡೆಯುತ್ತಿದೆ.
ಬೆಳಗ್ಗೆ ಪಟ್ಟದ ಆನೆ, ಪಟ್ಟದ ಕುದುರೆ, ಪಟ್ಟದ ಹಸುವಿನೊಂದಿಗೆ ದೇವರನ್ನು ಅರಮನೆಗೆ ಕರೆತರಲಾಯಿತು. ಬೆಳಗ್ಗೆ 10.15ರ ಸುಮಾರಿಗೆ ಉತ್ತರ ಪೂಜೆಯ ಬಳಿಕ ಆನೆ ಬಾಗಿಲಿನ ಮುಂಭಾಗದಲ್ಲಿ ಜಟ್ಟಿ ಕಾಳಗ ಜರುಗಿತು. ಬಳಿಕ ವಿಜಯಯಾತ್ರೆ ಹೊರಡುವ ಕನ್ನಡಾಂಬೆ ದೇವಾಲಯದ ಒಳಭಾಗದಲ್ಲಿರುವ ಬನ್ನಿ ಮರಕ್ಕೆ ಯದುವೀರ್ ಪೂಜೆ ಸಲ್ಲಿಸಿದರು. ನಂತರ ರಾಜವಂಶಸ್ಥರು ಮನೆಗೆ ಮರಳುವ ಮೂಲಕ ನವರಾತ್ರಿಯ 10 ದಿನದ ಧಾರ್ಮಿಕ ಕಾರ್ಯಗಳು ಸಂಪನ್ನಗೊಂಡವು.