newsics.com
ಬೆಂಗಳೂರು : ಬಿಎಂಟಿಸಿ 13ನೇ ಘಟಕದ ವೋಲ್ವೋ ಬಸ್ ನಿರ್ವಾಹಕ ಯೋಗೇಶ್ ಎಂಬುವವರಿಗೆ ಪ್ರಯಾಣಿಕನೋರ್ವ ಚಾಕು ಇರಿದಿದ್ದ ಘಟನೆ ನಡೆದಿತ್ತು. ಈ ಸುದ್ದಿ ಬೆನ್ನಲ್ಲೇ ಬಿಎಂಟಿಸಿ ಎಂಡಿಗೆ ಪತ್ರ ವನ್ನು ಸಿಬ್ಬಂದಿ ಬರೆದಿದ್ದಾರೆ.
ಈ ಘಟನೆ ಬೆನ್ನಲ್ಲೇ ಈಗ ಬಿಎಂಟಿಸಿಯ ಕಂಡಕ್ಟರ್, ಡ್ರೈವರ್ಗಳು ಬಿಎಂಟಿಸಿ ಎಂಡಿಗೆ ಪತ್ರ ಬರೆದಿದ್ದು ಗನ್ ಇಟ್ಟುಕೊಳ್ಳಲು ಅನುಮತಿ ನೀಡುವಂತೆ ಕೋರಿದ್ದಾರೆ.
ಬಿಎಂಟಿಸಿ ಎಂಡಿ ರಾಮಚಂದ್ರನ್ ಅವರಿಗೆ ಪತ್ರ ಬರೆದಿರುವ ಬಿಎಂಟಿಸಿಯ ಡ್ರೈವರ್, ಕಂಡಕ್ಟರ್ಗಳು ಆತ್ಮ ರಕ್ಷಣೆಗಾಗಿ ಗನ್ ಕೇಳಿದ್ದಾರೆ. ಮೊನ್ನೆ ಬಿಎಂಟಿಸಿ ಕಂಡಕ್ಟರ್ಗೆ ಚಾಕು ಇರಿತದ ಹಿನ್ನೆಲೆಯಲ್ಲಿ ಚಾಲಕ ಮತ್ತು ನಿರ್ವಾಹಕರಿಗೆ ಗನ್ ಲೈಸನ್ಸ್ ಪಡೆಯಲು ಅನುಮತಿ ನೀಡುವಂತೆ ಮನವಿ ಮಾಡಿದ್ದಾರೆ.
ಪತ್ರದಲ್ಲಿ ಏನಿದೆ?: 24 ಗಂಟೆ ತಮ್ಮ ಜೀವದ ಹಂಗು ತೊರೆದು ಬೃಹತ್ ಬೆಂಗಳೂರು ಮಹಾನಗರದ ಸಂಚಾರಿ ದಟ್ಟಣೆಯಲ್ಲಿ, ಕಲುಷಿತ ವಾಯುಮಾಲಿನ್ಯದಿಂದ ನಿರಂತರ ಕರ್ತವ್ಯ ನಿರ್ವಹಿಸುವ ಚಾಲಕ ಮತ್ತು ನಿರ್ವಾಹಕರು ಮಾನಸಿಕವಾಗಿ ಕುಗ್ಗಿ ಹೋಗಿರುತ್ತಾರೆ. ತಮ್ಮ ಕುಟುಂಬದ ಸದಸ್ಯರೊಂದಿಗೆ ಸಮಯ ಕಳೆಯಲು ಸಾಧ್ಯವಾಗಿರುವುದಿಲ್ಲ. ಆದರೆ, ಸಂಚಾರಿ ದಟ್ಟಣೆಯಲ್ಲಿ ವಾಹನ ಸವಾರರ ಹಾಗೂ ಬಸ್ಸಿನ ಪ್ರಯಾಣಿಕರ ಜೊತೆಯಲ್ಲಿ ಸಣ್ಣ ಸಣ್ಣ ವಿಷಯಗಳಿಗೆ ಗಲಾಟೆಯಾಗಿ ಅವರಿಂದ ಮಾರಣಾಂತಿಕ ಹಲ್ಲೆಗೆ ಒಳಗಾಗಿರುವುದು ಸರ್ವೆ ಸಾಮಾನ್ಯವಾಗಿದೆ. ಸಂಸ್ಥೆಯ ಕನ್ನಡಿಗ ನೌಕರರ ಮೇಲೆ ಅನ್ಯ ರಾಜ್ಯದ ಪ್ರಯಾಣಿಕರಿಂದ ಮಾರಣಾಂತಿಕ ಹಲ್ಲೆ ನಡೆಯುತ್ತಿದೆ. ಉದಾಹಣೆಗೆ ದಿನಾಂಕ:01/10/2024 ರಂದು ಘಟಕ-13 ನಿರ್ವಾಹಕರಿಗೆ ಮಾರಣಾಂತಿಕ ಹಲ್ಲೆ ನೆಡೆದ ಘಟನೆಯೇ ಸಾಕ್ಷಿಯಾಗಿರುತ್ತದೆ. ಆದ್ದರಿಂದ ಇವರುಗಳ ಜೀವ ರಕ್ಷಣೆಗಾಗಿ ಗನ್ ಲೈಸನ್ಸ್ ಪಡೆಯಲು ಅನುಮತಿ ಕೊಡಿಸಬೇಕಾಗಿ ಸಮಸ್ತ ಸಾರಿಗೆ ಸಂಸ್ಥೆಯ ನೌಕರರ ಪರವಾಗಿ ತಮ್ಮಲ್ಲಿ ಮನವಿಮಾಡಿಕೊಳ್ಳುತ್ತೇನೆ ಎಂದು ಬಿಎಂಟಿಸಿ ಕಂಡಕ್ಟರ್ ಕಂ ಡ್ರೈವರ್ ಯೋಗೇಶ್ ಗೌಡ ಅವರು ಪತ್ರ ಬರೆದಿದ್ದಾರೆ.