newsics.com/ನ್ಯೂಸಿಕ್ಸ್
ಪತ್ನಿಗೆ ಅಡುಗೆ ಬರಲ್ಲ, ಮನೆ ಕೆಲಸ ಮಾಡುತ್ತಿಲ್ಲ ಎಂದು ಪತಿ ಡಿವೋರ್ಸ್ಗೆ ಅಪ್ಲೈ ಮಾಡಿದ್ದ. ಇದಕ್ಕೆ ಕುಟುಂಬ ನ್ಯಾಯಾಲಯ ಒಪ್ಪಿ ಡಿವೋರ್ಸ್ ನೀಡಿತ್ತು, ಆದರೆ ಇದೀಗ ಇದನ್ನು ಹೈಕೋರ್ಟ್ ಮುಂದಿಟ್ಟಿದ್ದು, ಪತಿಗೆ ಬಿಗ್ ಶಾಕ್ ಎದುರಾಗಿದೆ.
ಈ ದಂಪತಿಯ ವಿವಾಹ 2002ರಲ್ಲಿ ನಡೆದಿತ್ತು. ಕೆಲವೇ ದಿನಗಳಲ್ಲಿ ಮನೆಯೊಳಗೆ ಜಗಳಗಳು ಆರಂಭವಾದವು ಎಂದು ಪತಿ ಹೇಳಿಕೊಂಡಿದ್ದರು. ಕೆಲವು ತಿಂಗಳುಗಳಲ್ಲೇ ಹೆಂಡತಿ ತನ್ನ ತವರು ಮನೆ ಸೇರಿದ್ದು, ನಂತರ 2004ರಲ್ಲಿ ಪತಿ ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಸಿದರು. ಈ ಕೇಸ್ನಲ್ಲಿ ಮಹತ್ವದ ತೀರ್ಪು ಹೊರಬಂದಿದೆ.
ಪತಿ ಚಾರ್ಟರ್ಡ್ ಅಕೌಂಟೆಂಟ್ (CA) ಆಗಿದ್ದು, ‘ಹೆಂಡತಿ ಸರಿಯಾಗಿ ವರ್ತಿಸುತ್ತಿರಲಿಲ್ಲ, ಮನೆಕೆಲಸ ಮಾಡುತ್ತಿರಲಿಲ್ಲ, ಅಡುಗೆ ಬರುತ್ತಿರಲಿಲ್ಲ. ನಮ್ಮ ಮಾತು ಕೇಳುತ್ತಿರಲಿಲ್ಲ, ಇದರಿಂದ ನನಗೆ ಮಾನಸಿಕ ಒತ್ತಡ ಉಂಟಾಯಿತು, ಇದು ಕ್ರೌರ್ಯ’ ಎಂದು ಆರೋಪಿಸಿದರು.
ಕುಟುಂಬ ನ್ಯಾಯಾಲಯ 2010ರಲ್ಲಿ ಪತಿಯ ಪರವಾಗಿ ತೀರ್ಪು ನೀಡಿ, ವಿಚ್ಛೇದನ ಮಂಜೂರು ಮಾಡಿತ್ತು. ಅಲ್ಲದೇ ಪತ್ನಿಗೆ ಜೀವನಾಂಶ ಕೊಡಬೇಕಿಲ್ಲ ಎಂದು ಹೇಳಿತ್ತು. ಇದಕ್ಕೆ ಕಾರಣವಾಗಿ, ಪತ್ನಿ ‘ಕಲೆ ಮತ್ತು ಕರಕುಶಲ’ ತರಗತಿಗಳ ಜಾಹೀರಾತು ನೀಡಿದ್ದನ್ನು ನೋಡಿ, ಅವಳಿಗೆ ಆದಾಯವಿದೆ ಎಂದು ಊಹಿಸಿತ್ತು. ಆದರೆ ಬಾಂಬೆ ಹೈಕೋರ್ಟ್ ಈ ನಿರ್ಣಯವನ್ನು ತಪ್ಪು ಎಂದು ಕಂಡಿತು. ಒಂದು ಜಾಹೀರಾತು ಕೊಟ್ಟಿದ್ದರಿಂದಲೇ ಆಕೆಗೆ ಸ್ಥಿರ ಆದಾಯದ ಮೂಲವಿದೆ ಎಂದು ಹೇಳಲು ಆಗುವುದಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.
ಪತ್ನಿ ತನ್ನ ಪ್ರತಿಕ್ರಿಯೆಯಲ್ಲಿ, ನನಗೆ ಕೇವಲ ಮನೆಕೆಲಸಗಳನ್ನು ಎಂದರೆ ಪಾತ್ರೆ ತೊಳೆಯುವುದು, ಬಟ್ಟೆ ತೊಳೆಯುವುದು, ಅಡುಗೆ, ಸ್ವಚ್ಛತೆ ಇವುಗಳನ್ನೇ ಮಾಡಿಸಲು ಒತ್ತಾಯಿಸಲಾಗುತ್ತಿತ್ತು, ಉಳಿದ ಆಹಾರವನ್ನೇ ತಿನ್ನಲು ಹೇಳಲಾಗುತ್ತಿತ್ತು ಎಂದು ಹೇಳಿಕೊಂಡಿದ್ದಾಳೆ. ಗಂಡ ಮತ್ತು ಅವನ ಮನೆಯವರ ಕಿರುಕುಳದಿಂದಲೇ ತಾನು ಗಂಡನ ಮನೆಯನ್ನು ಬಿಟ್ಟಿದ್ದೇನೆ ಎಂದಿದ್ದಾಳೆ. ಈ ಅಂಶಗಳನ್ನು ಕುಟುಂಬ ನ್ಯಾಯಾಲಯ ಯೋಗ್ಯವಾಗಿ ಪರಿಗಣಿಸಿರಲಿಲ್ಲ ಎಂದು ಹೈಕೋರ್ಟ್ ತಿಳಿಸಿದೆ.
ಹೈಕೋರ್ಟ್ನ ಮುಖ್ಯ ಮಾತು ಎಂದರೆ, ಹೆಂಡತಿ ಮನೆಕೆಲಸ ಮಾಡಲಿಲ್ಲ, ಅಡುಗೆ ಮಾಡಲಿಲ್ಲ ಅಷ್ಟೇ ಕಾರಣಕ್ಕೆ ಅದನ್ನು ‘ಮಾನಸಿಕ ಕ್ರೌರ್ಯ’ ಎಂದು ಕರೆಯಲು ಸಾಧ್ಯವಿಲ್ಲ. ನ್ಯಾಯಮೂರ್ತಿಗಳು ‘ಮದುವೆ ಒಂದು ಸಮಾನರ ಪಾಲುದಾರಿಕೆ; ಇದು ಸೇವಾ ಒಪ್ಪಂದವಲ್ಲ. ಹೆಂಡತಿಯನ್ನು ಸೇವಕಿಯಂತೆ ಕಾಣಲು ಕಾನೂನು ಅನುಮತಿಸುವುದಿಲ್ಲ’ ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ಅಂದರೆ, ಹೆಂಡತಿಯ ಮೇಲೆ ಮನೆಕೆಲಸವನ್ನು ಕಡ್ಡಾಯ ಕರ್ತವ್ಯವಾಗಿ ಕಾನೂನಿನ ಮೂಲಕ ಜಾರಿಗೊಳಿಸಲು ಸಾಧ್ಯವಿಲ್ಲ.
ಪತಿಯು ವೃತ್ತಿಪರವಾಗಿ CA ಆಗಿದ್ದು, ಉತ್ತಮ ಆದಾಯ ಗಳಿಸುವ ಸಾಮರ್ಥ್ಯ ಹೊಂದಿದ್ದರಿಂದ, ಅವನು ತನ್ನ ಹೆಂಡತಿಯನ್ನು ನಿರ್ವಹಿಸುವ ಜವಾಬ್ದಾರಿ ಹೊಂದಿದ್ದಾನೆ ಎಂದು ಹೈಕೋರ್ಟ್ ಹೇಳಿದೆ. ಆದ್ದರಿಂದ, ಪತ್ನಿಗೆ ತಿಂಗಳಿಗೆ 10,000 ರೂ. ಜೀವನಾಂಶ ಮತ್ತು ವಸತಿಗಾಗಿ ತಿಂಗಳಿಗೆ 10,000 ರೂ. ಪಾವತಿಸಲು ಆದೇಶಿಸಿದೆ. ಈ ತೀರ್ಪು ಮಹಿಳೆಯರ ಹಕ್ಕುಗಳನ್ನು ಬಲಪಡಿಸುತ್ತದೆ. ಮದುವೆ ಎಂಬುದು ಪರಸ್ಪರ ಗೌರವ ಮತ್ತು ಸಮಾನತೆಯ ಮೇಲೆ ನಿಂತ ಸಂಸ್ಥೆ, ಅದನ್ನು ಗಂಡನು ಮಾಲೀಕ, ಹೆಂಡತಿ ಸೇವಕಿ ಎನ್ನುವ ಹಳೆಯ ಮನೋಭಾವನೆಯಿಂದ ನೋಡಲು ಸಾಧ್ಯವಿಲ್ಲ ಎಂಬ ಸಂದೇಶವನ್ನು ಈ ತೀರ್ಪು ಸ್ಪಷ್ಟವಾಗಿ ನೀಡಿದೆ.
ಭಾಗ್ಯಲಕ್ಷ್ಮೀ ಧಾರಾವಾಹಿ ಸದ್ಯದಲ್ಲೇ ಸುಖಾಂತ್ಯ : ನಟಿ ಸುಷ್ಮಾ ರಾವ್ ಭಾವುಕ ಪೋಸ್ಟ್