newsics.com/ನ್ಯೂಸಿಕ್ಸ್
ಕಲಬುರಗಿ ನಗರದಲ್ಲಿ ನೀಟ್ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡ ಘಟನೆಗೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ವಿದ್ಯಾರ್ಥಿನಿ ಭಾಗ್ಯಶ್ರೀ ಆತ್ಮಹತ್ಯೆ ಮಾಡಿಕೊಳ್ಳಲು ನೀಟ್ ಪರೀಕ್ಷೆ ರದ್ದತಿ ಕಾರಣ ಅಲ್ಲ ಎಂದು ತಿಳಿದುಬಂದಿದೆ.
ಮೃತ ಭಾಗ್ಯಶ್ರೀಯ ತಂದೆ ಹೇಳಿಕೆಯೇ ಉಲ್ಟಾ
ನೀಟ್ ಪರೀಕ್ಷೆ ರದ್ದತಿಗಾಗಿ ಕಲಬುರಗಿ ವಿದ್ಯಾರ್ಥಿನಿ ಭಾಗ್ಯಶ್ರೀ ಆರ್. ಪಾಟೀಲ್ ಆತ್ಮಹತ್ಯೆ ಎನ್ನಲಾದ ಪ್ರಕರಣ ಸಂಬಂಧಪಟ್ಟಂತೆ ಮೃತ ಭಾಗ್ಯಶ್ರೀಯ ತಂದೆ ರಾಜಶೇಖರ ಪಾಟೀಲ್, ನೀಟ್ ಪರೀಕ್ಷೆ ರದ್ದುಪಡಿಸಿದ್ದರಿಂದ ಮಗಳು ಮನನೊಂದಿದ್ದಳು ಎಂದು ಹೇಳಿಕೆ ನೀಡಿದ್ದರು. ಆದ್ರೀಗ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಳ್ಳಲು ಅಸಲಿ ಕಾರಣ ಏನು ಅನ್ನೋದು ಬಯಲಾಗಿದೆ.
ಭಾಗ್ಯಶ್ರೀ ಪಿಯುಸಿನೇ ಪಾಸ್ ಆಗಿರಲಿಲ್ಲ
ವಿದ್ಯಾರ್ಥಿನಿ ಭಾಗ್ಯಶ್ರೀ ಆತ್ಮಹತ್ಯೆ ಮಾಡಿಕೊಳ್ಳಲು ನೀಟ್ ಪರೀಕ್ಷೆ ರದ್ದತಿ ಕಾರಣ ಅಲ್ಲ ಎಂದು ತಿಳಿದುಬಂದಿದೆ. ಅಸಲಿಗೆ ಭಾಗ್ಯಶ್ರೀ ಪಿಯುಸಿನೇ ಪಾಸ್ ಆಗಿರಲಿಲ್ಲ, ಆದರೂ ಮನೆಯಲ್ಲಿ ಶೇಕಡ 92 ರಷ್ಟು ಅಂಕ ಪಡೆದಿದ್ದೇನೆ ಎಂದು ಪೋಷಕರ ಬಳಿ ಹೇಳಿಕೊಂಡಿದ್ದಳು. ಆದ್ರೆ, ಮರುಪರೀಕ್ಷೆಯಲ್ಲಿ ಪಾಸ್ ಆಗೇ ತೀರುತ್ತೇನೆ ಎನ್ನುವ ನಿರೀಕ್ಷೆಯಲ್ಲಿದ್ದ ಭಾಗ್ಯಶ್ರೀಗೆ ಫಲಿತಾಂಶ ಶಾಕ್ ನೀಡಿತ್ತು.
ಮೊದಲ ಪ್ರಯತ್ನದಲ್ಲಿ 369 ಅಂಕ ಪಡೆದಿದ್ದ ಭಾಗ್ಯಶ್ರೀ, ಸಪ್ಲಿಮೆಂಟ್ರಿಯಲ್ಲಿ 365 ಅಂಕ ಗಳಿಸಿ ಮತ್ತೂ ಫೇಲ್ ಆಗಿದ್ದರು. ವಿದ್ಯಾರ್ಥಿನಿ ಭಾಗ್ಯಶ್ರೀಯ ದ್ವಿತೀಯ ಪಿಯುಸಿ ಮಾರ್ಕ್ಸ್ ಕಾರ್ಡ್ ಲಭ್ಯವಾಗಿದ್ದು, ಇಂಟರ್ನಲ್ ಅಂಕ 20 ಸೇರಿ ಗಣಿತದಲ್ಲಿ ಪಡೆದಿದ್ದು ಒಟ್ಟು 24 ಅಂಕ ಮಾತ್ರ ಗಳಿಸಿದ್ದರು. ಭಾಗ್ಯಶ್ರೀ ಥಿಯರಿ ಗಣಿತದಲ್ಲಿ ಪಡೆದಿದ್ದು ಕೇವಲ 4 ಅಂಕ ಮಾತ್ರ ಗಳಿಸಿದ್ದರು. ಆದ್ರೆ ಸಪ್ಲಿಮೆಂಟ್ರಿಯಲ್ಲಿ ಪಾಸ್ ಆಗುವ ನಿರೀಕ್ಷೆ ಹೊಂದಿದ್ದ ಭಾಗ್ಯಶ್ರೀ ಹೆತ್ತವರ ಮುಂದೆ ಪಿಯುಸಿ ಪಾಸ್ ಎಂದು ಹೇಳಿಕೊಂಡಿದ್ದರು.
ಸದ್ಯ, ಘಟನೆ ಸಂಬಂಧ ಸ್ಟೇಷನ್ ಬಜಾರ್ ಠಾಣೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ವಿದ್ಯಾರ್ಥಿನಿ ಭಾಗ್ಯಶ್ರೀ ಆತ್ಮಹತ್ಯೆ ಮಾಡಿಕೊಳ್ಳಲು ಸಪ್ಲಿಮೆಂಟ್ರಿ ಫಲಿತಾಂಶ ಕೈಕೊಟ್ಟಿದ್ದೇ ಕಾರಣನಾ? ಅಥವಾ ಭಾಗ್ಯಶ್ರೀ ಆತ್ಮಹತ್ಯೆಗೆ ಬೇರೆ ಏನಾದ್ರೂ ಕಾರಣ ಇದ್ಯಾ? ಎಂದು ಪೊಲೀಸರ ತನಿಖೆಯಿಂದಷ್ಟೇ ಸತ್ಯ ಬಯಲಾಗಬೇಕಿದೆ. ಆದ್ರೆ ಭಾಗ್ಯಶ್ರೀ ಆತ್ಮಹತ್ಯೆಗೆ ನೀಟ್ ಪರೀಕ್ಷೆ ರದ್ದತಿ ಕಾರಣ ಅಲ್ಲ ಅನ್ನೋದು ಮಾತ್ರ ಸ್ಪಷ್ಟವಾಗಿದೆ.