Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ಬೆಂಗಳೂರು: 21 ದಿನಗಳ ಕಾಲ ಮಾತ್ರ ಪತಿಯೊಂದಿಗೆ ವಾಸ ಮಾಡಿ ವರದಕ್ಷಿಣೆ ಕಿರುಕುಳ ಆರೋಪದಡಿ ವಿಚ್ಛೇದನ ಕೋರಿದ್ದ ಮಹಿಳೆಗೆ ವಿವಾಹ ಸ್ವರ್ಗದಲ್ಲಿ ನಿಶ್ಚಯವಾಗಿ ಭೂಮಿಯ ಮೇಲೆ ನಡೆಯುವ ಪವಿತ್ರ ಬಂಧನವಾಗಿದೆ ಎಂದು ಕರ್ನಾಟಕ ಹೈಕೋರ್ಟ್ ಹೇಳಿದೆ.ಸಾಕ್ಷ್ಯಾಧಾರಗಳಿಲ್ಲ ಎಂದು ವಿಚ್ಛೇದನ ಅರ್ಜಿಯನ್ನು ವಜಾ ಮಾಡಿದೆ. ವಿಚ್ಛೇದನ ಮಂಜೂರು ಮಾಡುವಂತೆ ಕೋರಿ ಪತ್ನಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಜಯಂತ್ ಬ್ಯಾನರ್ಜಿ ಮತ್ತು ನ್ಯಾಯಮೂರ್ತಿ ಉಮೇಶ್ ಎಂ.ಅಡಿಗ ಅವರಿದ್ದ ವಿಭಾಗೀಯ ಪೀಠ ಈ ಆದೇಶ ನೀಡಿದೆ.’ಹಿಂದೂ ಕಾನೂನಿನಲ್ಲಿ ವಿವಾಹ ಸ್ವರ್ಗದಲ್ಲಿ ನಿಶ್ಚಯವಾಗಿ ಭೂಮಿಯ ಮೇಲೆ ನಡೆಯುವ ಬಂಧನವಾಗಿದೆ’ ಎಂದು ತಿಳಿಸಿದೆ.
ವಿವಾಹ ಕೇವಲ ಸಾಮಾಜಿಕ ಒಪ್ಪಂದ ಮಾತ್ರವಲ್ಲದೆ ವಿಧಿಯಿಂದ ವಿಧಿಸಲ್ಪಟ್ಟ ದೈವಿಕ ಪಾಲುದಾರಿಕೆಯ ಸಂಕೇತವಾಗಿರಲಿದೆ. ಆದರೆ, ಅರ್ಜಿದಾರ ಪತ್ನಿ ಮದುವೆ ಎಂದರೆ ಮಕ್ಕಳಾಟವೆಂದು ಭಾವಿಸಿ, ತನ್ನ ಶಿಕ್ಷಣ ಮುಂದುವರಿಸಲು ಪೋಷಕರ ಮನೆಗೆ ತೆರಳುವುದಕ್ಕಾಗಿ ಆಧಾರರಹಿತ ಆರೋಪ ಮಾಡಿದಂತೆ ತೋರುತ್ತಿದೆ ಎಂದು ಪೀಠ ತಿಳಿಸಿತು.
ಅರ್ಜಿದಾರ ಪತ್ನಿ ಕೇವಲ 21 ದಿನಗಳ ಕಾಲ ಮಾತ್ರ ಪತಿಯೊಂದಿಗೆ ವಾಸ ಮಾಡಿದ್ದಾರೆ. ಈ ಅವಧಿಯಲ್ಲಿ ದಂಪತಿಯ ನಡುವೆ ಯಾವುದೇ ಗೊಂದಲಗಳಿರಲಿಲ್ಲ. ಆದರೆ, ವರದಕ್ಷಿಣೆ ಕಿರುಕುಳದ ಆರೋಪದಲ್ಲಿ ತವರು ಮನೆಗೆ ಹಿಂದಿರುಗಿರುವುದಾಗಿ ಆರೋಪಿಸಿದ್ದಾರೆ. ವಾಸ್ತವವಾಗಿ ಆಷಾಢ ಮಾಸಕ್ಕಾಗಿ ತಾಯಿ ಮನೆಗೆ ಬಂದಿದ್ದು, ವರದಕ್ಷಿಣೆ ಕಿರುಕುಳ ನೀಡಿ ಮನೆಯಿಂದ ಹೊರಹಾಕಿಲ್ಲ ಎಂಬ ಅಂಶ ಗೊತ್ತಾಗಿದೆ. ಹೀಗಾಗಿ, ಈ ಆರೋಪವು ಸಂಶಯಾಸ್ಪದದಿಂದ ಕೂಡಿದೆ. ಈ ಎಲ್ಲಅಂಶಗಳು ಅರ್ಜಿದಾರರ ನಡವಳಿಕೆ ವಿಶ್ವಾಸಾರ್ಹವಲ್ಲ. ಕೇವಲ ಪತಿಯಿಂದ ವಿಚ್ಛೇದನ ಪಡೆಯಲು ವರದಕ್ಷಿಣೆ ಕಿರುಕುಳ ಆರೋಪ ಮಾಡಲಾಗಿದೆ ಎಂದು ಪೀಠ ಹೇಳಿದೆ.
ಬೆಂಗಳೂರಿನಲ್ಲಿ 2012ರ ಮೇ 30ರಂದು ಆತ ಮತ್ತು ಆಕೆಯ ವಿವಾಹವಾಗಿತ್ತು. ಮದುವೆಯ ಬಳಿಕ ತುಮಕೂರಿನಲ್ಲಿದ್ದ ಪತಿಯ ಮನೆಯಲ್ಲಿ 21 ದಿನಗಳ ಕಾಲ ವಾಸವಿದ್ದಾರೆ. ಪತಿ 50 ಸಾವಿರ ರೂ. ಹೆಚ್ಚುವರಿ ವರದಕ್ಷಿಣೆ ನೀಡುವಂತೆ ಒತ್ತಾಯಿಸಿದ್ದರು. ಅಷ್ಟು ಮೊತ್ತ ಕೊಡಲು ಸಾಧ್ಯವಾಗದಿದ್ದಾಗ ಪತಿ – ಪತ್ನಿಯ ನಡುವೆ ಜಗಳಕ್ಕೆ ಕಾರಣವಾಗಿತ್ತು ಎನ್ನಲಾಗಿದೆ. ಬಳಿಕ ಪತ್ನಿ ವಿಚ್ಛೇದನ ಮತ್ತು ಶಾಶ್ವತ ಪರಿಹಾರ ಮತ್ತು ಜೀವನಾಂಶ ನೀಡುವಂತೆ ಕೋರಿ ಕೌಟುಂಬಿಕ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ್ದ ಕೌಟುಂಬಿಕ ನ್ಯಾಯಾಲಯ ಅರ್ಜಿ ವಜಾಗೊಳಿಸಿ ಆದೇಶಿಸಿತ್ತು. ಅದನ್ನು ಪ್ರಶ್ನಿಸಿ ಪತ್ನಿ ಹೈಕೋರ್ಟ್ ಮೆಟ್ಟಿಲೇರಿದ್ದರು.
ಅದು ಪ್ರಕೃತಿ ನಿಯಮ, ನಾಚಿಕೆ ಪಡೋದ್ಯಾಕೆ?; ನಟಿ ಅನಸೂಯಾ ಹೇಳಿಕೆ ವೈರಲ್