newsics.com
ತೆಲಂಗಾಣ: ಶಾಲೆಯಿಂದ ತಡವಾಗಿ ಬಂದನೆಂಬ ಕಾರಣಕ್ಕೆ ತಂದೆಯೇ ಮಗನನ್ನು ಕೊಂದಿರುವ ಘಟನೆ ತೆಲಂಗಾಣದ ಯದಾದ್ರಿ ಭುವನಗಿರಿ ಜಿಲ್ಲೆಯ ಚೌಟುಪ್ಪಲ್ ಮಂಡಲದ ಅರೆಗುಡೆಮ್ ಗ್ರಾಮದಲ್ಲಿ ನಡೆದಿದೆ.
ಕಟ್ಟಾ ಸೈದುಲು ಮಗನನ್ನು ಕೊಂದ ಆರೋಪಿ. ಸೈದುಲು ಮತ್ತು ಆತನ ಹೆಂಡತಿ ಕೃಷಿ ಕೂಲಿ ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದರು. ಅವರಿಗೆ ಮೂವರು ಮಕ್ಕಳಿದ್ದಾರೆ. ಅವರನ್ನು ಖಾಸಗಿ ಶಾಲೆಗಳಲ್ಲಿ ಓದಿಸುತ್ತಿದ್ದಾರೆ.
ಈ ನಡುವೆ ಕೆಲವು ದಿನಗಳಿಂದ ಸೈದುಲು ಮದ್ಯದ ಚಟಕ್ಕೆ ಬಿದ್ದಿದ್ದ. ನಿರಂತರವಾಗಿ ಮದ್ಯ ಸೇವಿಸಿ ತನ್ನ ಕುಟುಂಬ ಸದಸ್ಯರಿಗೆ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ.
ಕಿರಿಯ ಮಗ ಭಾನು (14) ಚೌಟುಪ್ಪಲ್ನ ಅನ್ನಾ ಮೆಮೋರಿಯಲ್ ಶಾಲೆಯಲ್ಲಿ 9 ನೇ ತರಗತಿಯಲ್ಲಿ ಓದುತ್ತಿದ್ದ. ಕಳೆದ ಶನಿವಾರ (ಫೆ.8) ಶಾಲೆಯಲ್ಲಿ ನಡೆದ ಬೀಳ್ಕೊಡುಗೆ ಕೂಟದಲ್ಲಿ ಭಾನು ಕೂಡ ಭಾಗವಹಿಸಿದ್ದ. ಇದರಿಂದಾಗಿ ತಡರಾತ್ರಿ ಮನೆಗೆ ಬಂದಿದ್ದಾನೆ. ಇದರಿಂದ ಕೋಪಗೊಂಡ ಕುಡುಕ ತಂದೆ ಸೈದುಲು, ಭಾನುವನ್ನು ಹೊಡೆದಿದ್ದಾನೆ.
ಭಾನುವಿನ ಎದೆಗೆ ಬಲವಾದ ಪೆಟ್ಟು ಬಿದ್ದು ಪ್ರಜ್ಞೆ ತಪ್ಪಿದ್ದಾನೆ. ತಕ್ಷಣ ಕುಟುಂಬ ಸದಸ್ಯರು ಬಾಲಕನನ್ನು ಚೌಟುಪ್ಪಲ್ಲೊದಲ್ಲಿರುವ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದರು. ಭಾನುವನ್ನು ಪರೀಕ್ಷಿಸಿದ ವೈದ್ಯರು ಅವನು ಈಗಾಗಲೇ ಮೃತಪಟ್ಟಿದ್ದಾನೆ ಎಂದು ಹೇಳಿದರು. ಮೃತದೇಹವನ್ನು ಚೌಟುಪ್ಪಲ್ ಸರ್ಕಾರಿ ಆಸ್ಪತ್ರೆಯಿಂದ ಮನೆಗೆ ತಂದ ಕುಟುಂಬ ಸದಸ್ಯರು, ಮರಣೋತ್ತರ ಪರೀಕ್ಷೆ ಬೇಡ ಎಂದು ಹೇಳಿದ್ದಾರೆ ಎನ್ನಲಾಗಿದೆ.
ಈ ಘಟನೆಯ ಬಗ್ಗೆ ಸರ್ಕಾರಿ ಆಸ್ಪತ್ರೆ ಅಧಿಕಾರಿಗಳು ಸಹ ಪೊಲೀಸರಿಗೆ ಯಾವುದೇ ಮಾಹಿತಿಯನ್ನು ನೀಡಲಿಲ್ಲ. ಏಕೆಂದರೆ ತಾನು ಹೊಡೆದಿದ್ದರಿಂದ ಮಗ ಸಾವನ್ನಪ್ಪಿದ್ದಾನೆ ಎಂದು ಯಾರಿಗೂ ಹೇಳಬಾರದೆಂದು ಸೈದುಲು ಬೆದರಿಕೆ ಹಾಕಿದ್ದ. ಕುಟುಂಬ ಸದಸ್ಯರು ಬೆಳಗಿನ ಜಾವದಲ್ಲಿ ಭಾನುವಿನ ದೇಹವನ್ನು ಸದ್ದಿಲ್ಲದೆ ಹೂಳಲು ಪ್ರಯತ್ನಿಸಿದರು. ಆದರೆ, ಗ್ರಾಮಸ್ಥರಿಂದ ವಿಷಯ ತಿಳಿದ ಪೊಲೀಸರು ಅಂತ್ಯಕ್ರಿಯೆಯನ್ನು ತಡೆದರು. ಇದರಿಂದ ಪೊಲೀಸರು ಮತ್ತು ಕುಟುಂಬ ಸದಸ್ಯರ ನಡುವೆ ವಾಗ್ವಾದ ನಡೆಯಿತು.
ಭಾನುವನ್ನು ಅವನ ತಂದೆಯೇ ಕೊಂದಿದ್ದಾನೆಂದು ದೃಢಪಡಿಸಲಾಯಿತು. ಪೊಲೀಸರು ಭಾನುವಿನ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಚೌಟುಪ್ಪಲ್ ಸರ್ಕಾರಿ ಆಸ್ಪತ್ರೆಗೆ ಸಾಗಿಸಿದರು. ಕುಡಿದ ಅಮಲಿನಲ್ಲಿ ಪುಟ್ಟ ಮಗನನ್ನು ಕೊಂದ ಸೈದುಲು ಮೇಲೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
Operation Devil Hunt ಆಪರೇಷನ್ ಡೆವಿಲ್ ಹಂಟ್ ಮೂಲಕ 1,308 ಜನ ಅರೆಸ್ಟ್
KUMBH CROWD MASSIVE JAM ಮಹಾಕುಂಭಮೇಳದಲ್ಲಿ ವಿಶ್ವದ ಅತಿದೊಡ್ಡ ಟ್ರಾಫಿಕ್ ಜಾಮ್, ವೈರಲ್ ವಿಡಿಯೋ ನೋಡಿ
PM Modi ಮೂರು ದಿನ ಉಪವಾಸವಿದ್ದು ಮೋದಿ ಸಂದರ್ಶನ ಮಾಡುವೆ: ಅಮೆರಿಕ ಪಾಡ್ಕಾಸ್ಟರ್