newsics.com
ಬೆಂಗಳೂರು: ನಗರದಲ್ಲಿ ಮಾರಾಟವಾಗುವ ತರಕಾರಿಗಳಲ್ಲಿ ವಿಷಾಂಶ ಮತ್ತು ಮೆಟಲ್ ಅಂಶ ಪತ್ತೆಯಾಗಿರುವ ಬಗ್ಗೆ ಸಮಗ್ರ ಅಧ್ಯಯನಕ್ಕಾಗಿ ಉನ್ನತ ಮಟ್ಟದ ಸಮಿತಿ ರಚನೆ ಮಾಡುವಂತೆ ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ (ಸಿಪಿಸಿಬಿ) ಸೂಚಿಸಿದೆ.
ಎನ್ಜಿಟಿಗೆ ಸಲ್ಲಿಸಬೇಕಾದ ವಿಶ್ಲೇಷಣಾ ಫಲಿತಾಂಶಗಳು ಮತ್ತು ವರದಿಯನ್ನು ಅಂತಿಮಗೊಳಿಸಲು ನಾಲ್ಕು ತಿಂಗಳ ಕಾಲಾವಕಾಶ ನೀಡಲಾಗಿದೆ.
ಪರಿಸರ ನಿರ್ವಹಣಾ ನೀತಿ ಸಂಶೋಧನಾ ಸಂಸ್ಥೆ (ಇಎಂಪಿಆರ್ಐ) ನಡೆಸಿದ ಅಧ್ಯಯನದಲ್ಲಿ ತರಕಾರಿಗಳಲ್ಲಿ ಲೋಹದ ಅಂಶ ಪತ್ತೆಯಾಗಿರುವ ಬಗ್ಗೆ ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯ ದಕ್ಷಿಣ ಪೀಠ ವಿವರಗಳನ್ನು ಕೋರಿತ್ತು. ಅದರ ಬೆನ್ನಲ್ಲೇ ಇದೀಗ ಉನ್ನತ ಮಟ್ಟದ ಸಮಿತಿ ರಚನೆ ಬಗ್ಗೆ ಪ್ರಸ್ತಾಪಿಸಲಾಗಿದೆ.
ಬೆಂಗಳೂರಿನ ತರಕಾರಿಗಳ ಸುಮಾರು 400 ಮಾದರಿಗಳ ಅಧ್ಯಯನ ನಡೆಸಿದ್ದ ಇಎಂಪಿಆರ್ಐ, ತರಕಾರಿಗಳಲ್ಲಿ ಕಬ್ಬಿಣ, ಕ್ಯಾಡ್ಮಿಯಮ್, ಸೀಸ ಮತ್ತು ನಿಕಲ್ ಅಂಶಗಳು ಆಹಾರ ಮತ್ತು ಕೃಷಿ ಸಂಸ್ಥೆಯು ಸೂಚಿಸಿದ ಮಿತಿಗಳಿಗಿಂತ ಹೆಚ್ಚಾಗಿದೆ ಎಂದು ಹೇಳಿತ್ತು.
ಹೆವಿ ಮೆಟಲ್ಸ್ ಮತ್ತು ಕೀಟನಾಶಕಗಳ ಮಾದರಿಗಳ ಬಗ್ಗೆ ಎಫ್ಎಸ್ಎಸ್ಎಐ- ಅನುಮೋದಿತ ಪ್ರಯೋಗಾಲಯಗಳಲ್ಲಿ ಮಾತ್ರ ಅಧ್ಯಯನ ಕೈಗೊಳ್ಳಬೇಕು. ತರಕಾರಿಗಳಲ್ಲಿನ ಅವಶೇಷಗಳನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ನಿರ್ದೇಶನ ಪ್ರಕಾರ, ಎಫ್ಎಸ್ಎಸ್ಎಐ ಸೂಚಿಸಿದ ಮಾನದಂಡಗಳೊಂದಿಗೆ ಮಾತ್ರ ಹೋಲಿಸಬೇಕು ಎಂದು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ಹೇಳಿದೆ.
ಸಮಿತಿಯಲ್ಲಿ ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟಗಳ ಸಂಘ (ಎಫ್ಎಸ್ಎಸ್ಎಐ) ಮತ್ತು ಭೋಪಾಲ್ನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೋಲ್ ಸೈನ್ಸ್ನ ಸದಸ್ಯರು ಇರಬೇಕು. ಬೆಂಗಳೂರಿನ ಸಿಪಿಸಿಬಿ ಪ್ರಾದೇಶಿಕ ನಿರ್ದೇಶಕರು, ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯ ಕರ್ನಾಟಕ ವಿಭಾಗದ ಸದಸ್ಯರೊಬ್ಬರು ಮತ್ತು ಬೆಂಗಳೂರು ಕೃಷಿ ವಿಜ್ಞಾನ ವಿಶ್ವವಿದ್ಯಾಲಯದ ಸದಸ್ಯರೊಬ್ಬರು ಸಮಿತಿಯಲ್ಲಿರಬೇಕು ಎಂದು ಸೂಚಿಸಲಾಗಿದೆ.
ನ್ಯಾಯಮೂರ್ತಿ ಪುಷ್ಪಾ ಸತ್ಯನಾರಾಯಣ ಮತ್ತು ತಜ್ಞ ಸದಸ್ಯ ಸತ್ಯಗೋಪಾಲ್ ಕೊರ್ಲಪಾಟಿ ಅವರಿದ್ದ ಎನ್ಜಿಟಿ ಪೀಠವು ಅಕ್ಟೋಬರ್ 15 ರ ವಿಚಾರಣೆಯಲ್ಲಿ ಡಿಸೆಂಬರ್ 2 ರೊಳಗೆ ಅಂತಿಮ ವರದಿ ಸಲ್ಲಿಸುವಂತೆ ಮಂಡಳಿಗೆ ಸೂಚಿಸಿದೆ ಎಂದು ವರದಿಗಳು ಹೇಳಿವೆ.
ಬೀಚ್ ನಲ್ಲಿ ಗೋವಾದ ಮಾದರಿ ಅನುಸರಿಸಲಿದೆ ಕರ್ನಾಟಕ: ಪ್ರವಾಸೋದ್ಯಮ ಇಲಾಖೆ
ಹೆಂಡತಿಯ ಲೈಂಗಿಕ ಆಟ ತಾಳಲಾರದೆ ಸುಸ್ತಾದ ಗಂಡ! ವಿಚ್ಛೇದನಕ್ಕೆ ಅಸ್ತು ಎಂದ ಹೈಕೋರ್ಟ್
ಬಾಟಲ್ ಕ್ಯಾಪ್ಗೆ ಸ್ತ್ರೀ ಗುಪ್ತಾಂಗ ಹೋಲಿಕೆ: ನಟಿ ನಿಯಾ ಶರ್ಮಾ ವಿರುದ್ಧ ಆಕ್ರೋಶ, ವಿಡಿಯೋ ನೋಡಿ