newsics.com/ನ್ಯೂಸಿಕ್ಸ್
ಚಿಕ್ಕೋಡಿ(ಬೆಳಗಾವಿ): ಕೇಂದ್ರ ಲೋಕಸೇವಾ ಆಯೋಗ (UPSC)ವು ಭಾರತೀಯ ಅರಣ್ಯ ಸೇವೆ (ಇಂಡಿಯನ್ ಫಾರೆಸ್ಟ್ ಸರ್ವೀಸ್) ಪರೀಕ್ಷೆಯ ಫಲಿತಾಂಶವನ್ನು ಶುಕ್ರವಾರ ಪ್ರಕಟಿಸಿದ್ದು, ಕನ್ನಡಿಗನಿಗೆ ಪ್ರಥಮ ರ್ಯಾಂಕ್ ಲಭಿಸಿದೆ.
ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಸವದಿ ಗ್ರಾಮದ ಬಸವರಾಜ್ ದರೇಪ್ಪ ಕೆಂಪವಾಡ ಅವರು ಅಖಿಲ ಭಾರತ ಮಟ್ಟದಲ್ಲಿ ಪ್ರಥಮ ರ್ಯಾಂಕ್ ಗಳಿಸುವ ಮೂಲಕ ದೇಶದ ಗಮನ ಸೆಳೆದಿದ್ದಾರೆ. ಸಾಮಾನ್ಯ ರೈತನ ಮಗನ ಅದ್ವಿತೀಯ ಸಾಧನೆಗೆ ಅಭಿನಂದನೆಗಳ ಮಹಾಪೂರ ಹರಿದುಬರುತ್ತಿದೆ.
ಸತತ ಪರಿಶ್ರಮದಿಂದ ಬಸವರಾಜ್ ಅವರು ಕೇವಲ ತಮ್ಮ ಎರಡನೇ ಪ್ರಯತ್ನದಲ್ಲಿಯೇ ಟಾಪರ್ ಆಗಿದ್ದಾರೆ. ಇವರ ಅಪ್ರತಿಮ ಸಾಧನೆಯಿಂದ ಕುಟುಂಬಸ್ಥರಲ್ಲಿ ಹಾಗೂ ಸವದಿ ಗ್ರಾಮದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿದೆ.
ಹುಟ್ಟೂರಲ್ಲಿ ಪ್ರಾಥಮಿಕ ಶಿಕ್ಷಣ: ಸಾಮಾನ್ಯ ರೈತನ ಪುತ್ರನಾಗಿರುವ ಬಸವರಾಜ್ ಅವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಹುಟ್ಟೂರು ಸವದಿ ಗ್ರಾಮದಲ್ಲೇ ಪೂರೈಸಿದ್ದರು. ಬಳಿಕ ಅಥಣಿ ಪಟ್ಟಣದಲ್ಲಿ ಮುಂದಿನ ವಿದ್ಯಾಭ್ಯಾಸ ಮುಗಿಸಿ ನಂತರ ಶಿರಸಿಯ ಕಾಲೇಜಿನಲ್ಲಿ ಪದವಿ ವ್ಯಾಸಂಗ ಪಡೆದರು. ಪದವಿ ನಂತರ ಬೆಂಗಳೂರಿನಲ್ಲಿ ಯುಪಿಎಸ್ಸಿ ಪರೀಕ್ಷೆಗಾಗಿ ಕಠಿಣ ಸಿದ್ಧತೆ ನಡೆಸಿದ್ದರು.
’ನನ್ನ ಸತತ ಪ್ರಯತ್ನದ ಫಲವಾಗಿ ಈ ಸಾಧನೆ ಮಾಡಲು ಸಾಧ್ಯವಾಗಿದೆ. ವಿಶೇಷವಾಗಿ ಗ್ರಾಮೀಣ ಪ್ರದೇಶದಲ್ಲಿ ಕಲಿತ ನಾನು, ಓರ್ವ ರೈತನ ಮಗನಾಗಿ ಈ ಹಂತಕ್ಕೆ ತಲುಪಿದ್ದು ನನಗೆ ಅತೀವ ಹೆಮ್ಮೆ ತಂದಿದೆ’ ಎಂದು ಐಎಫ್ಎಸ್ ಟಾಪರ್ ಹರ್ಷ ವ್ಯಕ್ತಪಡಿಸಿದರು.
‘ನಾನು ಯಾವುದೇ ವಿಶೇಷ ಕೋರ್ಸ್ಗಳ ಮೊರೆಹೋಗಲಿಲ್ಲ. ಹಿರಿಯರ ನಿರಂತರ ಮಾರ್ಗದರ್ಶನದಂತೆ ಓದಿ ಈ ಪರೀಕ್ಷೆಯಲ್ಲಿ ಉತ್ತೀರ್ಣನಾಗಲು ಸಾಧ್ಯವಾಯಿತು. ಸದ್ಯಕ್ಕೆ ನಾನು ಬೆಂಗಳೂರಿನಲ್ಲಿದ್ದು, ಇನ್ನು ಎರಡು-ಮೂರು ದಿನಗಳಲ್ಲಿ ನನ್ನ ಸ್ವಗ್ರಾಮಕ್ಕೆ ಆಗಮಿಸುತ್ತೇನೆ’ ಎಂದು ಬಸವರಾಜ್ ತಿಳಿಸಿದ್ದಾರೆ.
ಗ್ರಾಮದಲ್ಲಿ ಸಂಭ್ರಮ: ಗ್ರಾಮದ ಹೆಮ್ಮೆಯ ಪುತ್ರನ ಸಾಧನೆಗೆ ಇಡೀ ಊರೇ ಸಂಭ್ರಮಿಸುತ್ತಿದ್ದು, ಬಸವರಾಜ್ ಅವರ ಆಗಮನಕ್ಕಾಗಿ ಗ್ರಾಮಸ್ಥರು ಕಾತುರದಿಂದ ಕಾಯುತ್ತಿದ್ದಾರೆ.
ಮೂವರ ಸಾಧನೆ:
ಐಎಫ್ಎಸ್ ಟಾಪರ್ಸ್: ಐಎಫ್ಎಸ್ ಫಲಿತಾಂಶದಲ್ಲಿ ಕರ್ನಾಟಕದ ಬಸವರಾಜ್ ಪ್ರಥಮ ಸ್ಥಾನ ಗಳಿಸಿದ್ದಾರೆ. ಅಂಶುಮನ್ ಕುಮಾರ್ ದ್ವಿತೀಯ ರ್ಯಾಂಕ್ ಮತ್ತು ಸಿದ್ಧಾರ್ಥ್ ತೃತೀಯ ರ್ಯಾಂಕ್ ಪಡೆದಿದ್ದಾರೆ.
ಯುಪಿಎಸ್ಸಿಯಲ್ಲಿ ಬೆಳಗಾವಿ ಯುವಕರ ಸಾಧನೆ: ಕಳೆದ ತಿಂಗಳು ಪ್ರಕಟವಾದ ಯುಪಿಎಸ್ಸಿ ಫಲಿತಾಂಶದಲ್ಲಿ ಬೆಳಗಾವಿ ಜಿಲ್ಲೆಯ ಯುವಕರು ಸಾಧನೆ ಮಾಡಿ, ಗಮನ ಸೆಳೆದಿದ್ದರು. ಬೆಳಗಾವಿಯ ರಾಹುಲ್ ಪಾಟೀಲ್ 224ನೇ ರ್ಯಾಂಕ್, ಬಸವರಾಜ್ ಪಾಟೀಲ್ 739ನೇ ಶ್ರೇಯಾಂಕ ಗಳಿಸಿ ಗಮನ ಸೆಳೆದಿದ್ದರು.
ನಂಬರ್ ಗೇಮ್ನಲ್ಲಿ ದಳಪತಿ ವಿನ್! ಟಿವಿಕೆ ಸರ್ಕಾರದಲ್ಲಿ ಇಬ್ಬರು ಡಿಸಿಎಂ?