newsics.com
ಬೆಂಗಳೂರು: ತುಮಕೂರು ನಗರದಲ್ಲಿ ನಡೆದ ಕಬಡ್ಡಿ ಪಂದ್ಯಾವಳಿಯಲ್ಲಿ ಕಾನೂನು ಬಾಹಿರವಾಗಿ ಬೆಟ್ಟಿಂಗ್ ನಡೆಸಿದ ಆರೋಪಕ್ಕೆ ಸಂಬಂಧಿಸಿದಂತೆ ಎಫ್ಐಆರ್ ದಾಖಲಿಸಿ ತನಿಖೆ ನಡೆಸಲು ಸೂಚನೆ ನಿಡಿದ್ದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ಆದೇಶ ಪ್ರಶ್ನಿಸಿ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರು ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದು, ಗುರುವಾರ ಮಧ್ಯಾಹ್ನ ವಿಚಾರಣೆ ನಡೆಯಲಿದೆ.
ಬೆಳಗ್ಗೆ ಕಲಾಪ ಪ್ರಾರಂಭವಾಗುತ್ತಿದದ್ದಂತೆ ಅರ್ಜಿದಾರರ ಪರ ವಕೀಲರು, ನ್ಯಾಯಮೂರ್ತಿ ಸುನೀಲ್ ದತ್ತ ಯಾದವ್ ಅವರಿದ್ದ ಪೀಠದಲ್ಲಿ ಪ್ರಸ್ತಾಪಿಸಿ, ತುರ್ತು ವಿಚಾರಣೆಗೆ ಪರಿಗಣಿಸಬೆಕು ಎಂದು ಕೋರಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಪೀಠ, ಮಧ್ಯಾಹ್ನ 2.30ಕ್ಕೆ ವಿಚಾರಣೆಗೆ ಪರಿಗಣಿಸುವುದಾಗಿ ತಿಳಿಸಿತು.
ವಿಶೇಷ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿರುವ, ಡಾ. ಪರಮೆಶ್ವರ್, ತಾನು ಯಾವುದೇ ಬೆಟ್ಟಿಂಗ್ ಗುಂಪುಗಳಲ್ಲಿಲ್ಲ. ತಮ್ಮ ವಿರುದ್ಧ ಸಂಘಟಿತ ಬೆಟ್ಟಿಂಗ್ ಚಟುವಟಿಕೆ ನಡೆಸಿರುವ ಆರೋಪವಿಲ್ಲ. ಅಲ್ಲದೆ, ಬೆಟ್ಟಿಂಗ್ಗೆ ಪ್ರಚೋದನೆ ನೀಡಿರುವುದು, ಪಿತೂರಿ ಅಥವಾ ಉದ್ದೇಶಪೂರ್ವಕ ಸಹಾಯ ಮಾಡಿರುವ ಸಂಬಂಧ ಯಾವುದೇ ಪುರಾವೆಗಳಿಲ್ಲ. ಸಾರ್ವಜನಿಕ ಸಮಾರಂಭದಲ್ಲಿ ಮಾಡಿದ ತಪ್ಪಾದ ಹೇಳಿಕೆಯನ್ನು ಆಧರಿಸಿ ಖಾಸಗಿ ದೂರು ದಾಖಲಿಸಲಾಗಿದೆ. ಇದು ಕಾನೂನು ಪ್ರಕ್ರಿಯೆಯ ದುರುದ್ದೇಶಪೂರಿತ ದುರುಪಯೋಗವಾಗಿದೆ. ಅಲ್ಲದೆ, ಅಪರಾಧ ಆರೋಪ ಸಂಬಂಧ ಮೂಲಭೂತ ಕಾನೂನು ಅಂಶಗಳನ್ನು ಸರಿಯಾಗಿ ಪರಿಗಣಿಸದೆ ಈ ಆದೇಶ ನೀಡಲಾಗಿದೆ. ಅಲ್ಲದೆ, ಅರ್ಜಿದಾರರ ವಿರುದ್ಧ ಯಾವುದೇ ನೇರ ಅಥವಾ ಪರೋಕ್ಷ ಪಾತ್ರ, ಕೃತ್ಯ ಅಥವಾ ವಸ್ತು ಸಾಕ್ಷ್ಯಾಧಾರಗಳಿಲ್ಲ. ಅವರ ವಿರುದ್ಧದ ಆರೋಪ ಕಾನೂನು ಪ್ರಕ್ರಿಯೆಯ ಸ್ಪಷ್ಟ ದುರುಪಯೋಗವಾಗಿದೆ. ಭಾರತದ ಸಂವಿಧಾನದ 21ನೇ ವಿಧಿ ಅಡಿಯ ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗಲಿದೆ. ಆದ್ಧರಿಂದ ವಿಶೇಷ ನ್ಯಾಯಾಲಯದ ಆದೇಶವನ್ನು ರದ್ದುಪಡಿಸಬೇಕು ಎಂದು ಕೋರಿದ್ದಾರೆ.
2025ರ ಅಕ್ಟೋಬರ್ 19ರಂದು ತುಮಕೂರಿನಲ್ಲಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳ ಕಬಡ್ಡಿ ಪಂದ್ಯಾವಳಿ ಆಯೋಜಿಸಲಾಗಿತ್ತು. ಈ ವೇಳೆ ದಕ್ಷಿಣ ಕನ್ನಡ ಮತ್ತು ವಿಜಯಪುರ ತಂಡಗಳು ಮುಖಾಮುಖಿಯಾಗಿದ್ದವು. ಪಂದ್ಯದಲ್ಲಿ ದಕ್ಷಿಣ ಕನ್ನಡ ಗೆಲುವು ಸಾಧಿಸಲಿದೆ ಎಂಬುದಾಗಿ ಜಿಲ್ಲಾಧಿಕಾರಿ ನಾಗಭೂಷಣ್ ಅವರೊಂದಿಗೆ ಗೃಹ ಸಚಿವ ಡಾ. ಜಿ.ಪರಮೇಶ್ವರ್ 500 ರೂ. ಬೆಟ್ಟಿಂಗ್ ಕಟ್ಟಿದ್ದರು. ಪಂದ್ಯ ಮುಗಿದ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದ ಡಾ.ಪರಮೇಶ್ವರ್ ಅವರು, ದಕ್ಷಿಣ ಕನ್ನಡ ಗೆಲ್ಲುವುದಾಗಿ ಜಿಲ್ಲಾಧಿಕಾರಿಗಳೊಂದಿಗೆ ಬೆಟ್ಟಿಂಗ್ ಕಟ್ಟಿ 500 ರೂ. ಕಳೆದುಕೊಂಡುಬಿಟ್ಟೆ ಎಂದು ಹೇಳಿದ್ದರು.
ಈ ಸಂಬಂಧ ಖಾಸಗಿ ದೂರು ದಾಖಲಿಸಿದ್ದ ಹೆಚ್.ಆರ್. ನಾಗಭೂಷಣ್ ಅವರ ಅರ್ಜಿ ವಿಚಾರಣೆ ನಡೆಸಿದ್ದ ಕೋರ್ಟ್, ಗೃಹ ಸಚಿವರು ಹಾಗೂ ತುಮಕೂರುhttps://www.newsics.com/2026/04/23/sslc-result-94-1-result-girls-are-strong-this-time-too/ ಜಿಲ್ಲಾಧಿಕಾರಿ ವಿರುದ್ಧ ಎಫ್ಐಆರ್ ದಾಖಲಿಸಿ ತನಿಖೆ ನಡೆಸುವಂತೆ ಆದೇಶಿಸಿತ್ತು. ಇದನ್ನು ಪ್ರಶ್ನಿಸಿ ಪರಮೇಶ್ವರ್ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.
SSLC Result: ಎಸ್ಎಸ್ಎಲ್ಸಿ ಫಲಿತಾಂಶ : ದಕ್ಷಿಣ ಕನ್ನಡ ಫಸ್ಟ್, ಉಡುಪಿಗೆ ದ್ವಿತೀಯ ಸ್ಥಾನ