newsics.com
ತುಮಕುರು: ಪ್ರೀತಿಯ ಬಲೆಗೆ ಬಿದ್ದ ವಿವಾಹಿತ ಮಹಿಳೆ, ಗಂಡ ಮಕ್ಕಳನ್ನೇ ಬಿಟ್ಟು ಪ್ರಿಯಕರನ ಜೊತೆ ಓಡಿಹೋಗಿದ್ರೆ, ಇದರಿಂದ ಮನನೊಂದ ಗಂಡ ಆತ್ಮಹತ್ಯೆಗೆ ಶರಣಾಗಿದ್ದಾನೆ. ಈ ಘಟನೆ ನಡೆದಿರೋದು ತುಮಕೂರು ತಾಲೂಕಿನ ಹೊಸಹಳ್ಳಿ ಗ್ರಾಮದಲ್ಲಿ.
ಹೊಸಹಳ್ಳಿ ಗ್ರಾಮದ ದೇವರಾಜ್ ಎಂಬಾತ ದಾಬಸ್ ಪೇಟೆ ಮೂಲದ ಮಾಧವಿ ಎಂಬಾಕೆಯನ್ನ ಕಳೆದ 17 ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದ. ಈ ದಂಪತಿ ಅದೇ ಊರಿನಲ್ಲಿ ಪುಟ್ಟ ಅಂಗಡಿಯನ್ನ ಇಟ್ಟುಕೊಂಡು ಜೀವನ ಸಾಗಿಸುತ್ತಿತ್ತು. ಗಂಡ-ಹೆಂಡತಿ ಇಬ್ಬರೂ ಅಂಗಡಿಯಲ್ಲಿ ವ್ಯಾಪಾರ ನಡೆಸುತ್ತಿದ್ರು. ಗಂಡ ಇಲ್ಲದ ಸಂದರ್ಭದಲ್ಲಿ ಪತ್ನಿ ಮಾಧವಿ ಒಬ್ಬಳೇ ಅಂಗಡಿಯಲ್ಲಿ ಇರುತ್ತಿದ್ದಳು. ಇನ್ನು ಈ ಅಂಗಡಿಗೆ ಪ್ರತಿನಿತ್ಯ ಹೋಗುತ್ತಿದ್ದ ಅದೇ ಊರಿನ ಆನಂದ್ ಎಂಬಾತ, ದೇವರಾಜ್ ಪತ್ನಿ ಮಾಧವಿ ಜೊತೆ ಸ್ನೇಹ, ಸಲುಗೆ ಬೆಳೆಸಿಕೊಂಡಿದ್ದಾನೆ. ನಂತರ ಪ್ರೀತಿ-ಪ್ರೇಮ ಅಂತಾ ಬಲೆಗೆ ಬೀಳಿಸಿಕೊಂಡಿದ್ದ ಆನಂದ, ಕಳೆದ ಮೂರು ತಿಂಗಳ ಹಿಂದೆ ಮಾಧವಿಯನ್ನ ಓಡಿಸಿಕೊಂಡು ಹೋಗಿದ್ದಾನೆ.
ಮನನೊಂದ ದೇವರಾಜ್ ವಿಷ ಕುಡಿದು ಆತ್ಮಹತ್ಯೆಗೆ ಶರಣಾಗಿದ್ದಾನೆ. ಆತ್ಮಹತ್ಯೆಗೂ ಮೊದಲು ಡೆತ್ ನೋಟ್ ಬರೆದಿಟ್ಟಿರುವ ದೇವರಾಜ್, ಹೆಂಡತಿಯನ್ನ ಓಡಿಸಿಕೊಂಡು ಹೋದ ಆನಂದ್ ತನಗೆ ಧಮ್ಕಿ ಹಾಕಿದ್ದ ವಿಚಾರವನ್ನ ಹೇಳಿಕೊಂಡಿದ್ದಾನೆ.
ಆನಂದ್ ಮತ್ತು ಹೆಂಡತಿಯ ಹೆಸರು ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಪ್ರಧಾನಿ ಮೋದಿ, ಕುಮಾರಸ್ವಾಮಿ, ಜಿಲ್ಲಾಧಿಕಾರಿ, ಪೊಲೀಸ್ ವರಿಷ್ಟಾಧಿಕಾರಿ ಸೇರಿದಂತೆ ಹಲವರಿಗೆ ಡೆತ್ ನೋಟ್ ಬರೆದು, ಇಬ್ಬರಿಗೂ ಶಿಕ್ಷೆ ಕೊಡಿಸುವಂತೆ ಮನವಿ ಮಾಡಿಕೊಂಡಿದ್ದಾನೆ. ತುಮಕೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಎಫ್ ಐಆರ್ ದಾಖಲಾಗಿದೆ.