newsics.com
ದಕ್ಷಿಣ ಕನ್ನಡ: ಕಾಶ್ಮೀರದಲ್ಲಿ ಉಗ್ರರ ದಾಳಿಗೆ ಸಿಲುಕಿ ಸಂತ್ರಸ್ತರಾದ, ಅನಾಥರಾದ ಮಕ್ಕಳಿಗೆ ಉಚಿತ ಶಿಕ್ಷಣ ನೀಡುವುದಾಗಿ ಪುತ್ತೂರಿನ ಅಂಬಿಕಾ ಮಹಾವಿದ್ಯಾಲಯ ಆಫರ್ ನೀಡಿದೆ.
ಕಾಶ್ಮೀರ ಕಣಿವೆಗಳಲ್ಲಿ ಈವರೆಗೆ ಹಲವು ಉಗ್ರ ದಾಳಿಗಳು ನಡೆದಿದ್ದು, ಈ ದಾಳಿಗಳಲ್ಲಿ ಹಲವು ಮಕ್ಕಳು ಅನಾಥರಾಗಿದ್ದಾರೆ. ಅಂತಹ ಮಕ್ಕಳಿಗೆ ಸರಿಯಾದ ವಿದ್ಯಾಭ್ಯಾಸ, ವಸತಿ ವ್ಯವಸ್ಥೆಗಳು ಸಿಗೋದು ಸುಲಭದ ಕಾರ್ಯವಲ್ಲ. ಅಂತಹ ಮಕ್ಕಳು ಯಾರಾದರೂ ಇದ್ದಲ್ಲಿ ಆ ಮಕ್ಕಳಿಗೆ ಮತ್ತು ಪಹಲ್ಗಾಮ್ ನಲ್ಲಿ ನಡೆದ ಪ್ರವಾಸಿಗರ ಮೇಲಿನ ದಾಳಿಯಲ್ಲಿ ಅನಾಥರಾದ ಮಕ್ಕಳಿಗೆ ಉಚಿತ ಶಿಕ್ಷಣ, ವಸತಿ ಸೇರಿದಂತೆ ಎಲ್ಲಾ ವ್ಯವಸ್ಥೆಗಳನ್ನು ಕಲ್ಪಿಸಲು ಅಂಬಿಕಾ ಮಹಾವಿದ್ಯಾಲಯ ಮುಂದಾಗಿದೆ.
ಎಲ್.ಕೆ.ಜಿ ಯಿಂದ ಹಿಡಿದು ಪದವಿತನಕದ ಎಲ್ಲಾ ಖರ್ಚುಗಳನ್ನು ನಟ್ಟೋಜ ಫೌಂಡೇಶನ್ ಟ್ರಸ್ಟ್ ನ ಅಡಿಯಲ್ಲಿ ಕಾರ್ಯಾಚರಿಸುತ್ತಿರುವ ಅಂಬಿಕಾ ಮಹಾವಿದ್ಯಾಲಯ ಭರಿಸಲಿದೆ. ಅನಾಥ ಮಕ್ಕಳು ಇರುವ ಬಗ್ಗೆ ಈಗಾಗಲೇ ಅಲ್ಲಿನ ಕೆಲವು ಸ್ಥಳೀಯ ಸಂಘ-ಸಂಸ್ಥೆಗಳೊಂದಿಗೆ ಸಂಪರ್ಕದಲ್ಲಿರುವ ಆಡಳಿತ ಮಂಡಳಿ ಈ ಬಗ್ಗೆ ಸಾರ್ವಜನಿಕರೂ ಮಾಹಿತಿ ನೀಡಿದಲ್ಲಿ, ಮಕ್ಕಳಿಗೆ ಬೇಕಾದ ಉನ್ನತ ಮಟ್ಟದ ಶಿಕ್ಷಣ ಕಲ್ಪಿಸುವ ವ್ಯವಸ್ಥೆ ಮಾಡಲಾಗುವುದು ಎಂದು ವಿದ್ಯಾಲಯದ ಅಧ್ಯಕ್ಷ ಸುಬ್ರಹ್ಮಣ್ಯ ನಟ್ಟೋಜ ಮನವಿ ಮಾಡಿದ್ದಾರೆ.
ಭಾರತೀಯ ಯೋಧರನ್ನು ಸನ್ಮಾನಿಸುವ, ಕಾಶ್ಮೀರಿ ಪಂಡಿತರ ಮಕ್ಕಳಿಗೆ ಶಿಕ್ಷಣ ನೀಡುವ ಹಲವು ವ್ಯವಸ್ಥೆಗಳನ್ನು ಸಂಸ್ಥೆ ಈಗಾಗಲೇ ನಿರ್ವಹಿಸಿಕೊಂಡು ಬರುತ್ತಿದ್ದು, ಇದರ ಸಾಲಿಗೆ ಇದೀಗ ಉಚಿತ ಶಿಕ್ಷಣ ಆಫರ್ ಕೂಡ ಸೇರ್ಪಡೆಗೊಂಡಿದೆ.