newsics.com / ನ್ಯೂಸಿಕ್ಸ್
ಬೆಂಗಳೂರು: ದೇಶದಲ್ಲಿ ಮಾರಿಕೊಂಡವರು ಮತ್ತು ಮಾರಿಕೊಳ್ಳದವರು ಇದ್ದಾರೆ ಎಂಬುದು ಜನರಿಗೂ ಗೊತ್ತಿದೆ. ನಿಮಗೆ ಹೇಳಿದ್ದಲ್ಲ, ಮಾರಿಕೊಂಡವರಿಗೆ ಹೇಳಿದ್ದು. ನಾನು ಬಳಸಿದ ಪದಕ್ಕೆ ಬದ್ಧ ಎಂದು ಬಹುಭಾಷಾ ನಟ ಪ್ರಕಾಶ್ ರಾಜ್ ಹೇಳಿದರು.
ಮಾರಿಕೊಂಡವರು ಯಾರು ಎಂಬುದು ನನಗೆ ಗೊತ್ತಿದೆ. ನಿಮಗಲ್ಲ ಹೇಳಿದ್ದು. ಮಾರಿಕೊಂಡವರಿಗೆ ಹೇಳಿದ್ದು ಎಂದ ಪ್ರಕಾಶ್ ರಾಜ್, ಕ್ಷಮೆ ಕೇಳುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದರು.
ಧರ್ಮಸ್ಥಳ ಪ್ರಕರಣದಲ್ಲಿ ಚಿನ್ನಯ್ಯ ನೀಡಿರುವ ಹೇಳಿಕೆಗೆ ಪ್ರತಿಕ್ರಿಯೆ ನೀಡಲು ಪ್ರಕಾಶ್ ರಾಜ್ ಸುದ್ದಿಗೋಷ್ಠಿ ಕರೆದಿದ್ದರು.
ಈ ಬಗ್ಗೆ ತಮ್ಮ ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ಕರೆ ನೀಡಿದ್ದ ಅವರು, ‘ಮಾರಿಕೊಂಡ ಮಾಧ್ಯಮದವರಿಗೆ ವಿಶೇಷ ಆಹ್ವಾನ’ ಎಂದು ನಮೂದಿಸಿದ್ದರು.
ಬುಧವಾರ ಬೆಳಗ್ಗೆ ಸುದ್ದಿಗೋಷ್ಠಿ ಆರಂಭಿಸುತ್ತಿದ್ದಂತೆ ಕೆಲವರು, ‘ಮಾರಿಕೊಂಡವರು ಯಾರು ಎಂಬುದನ್ನು ಹೇಳಬೇಕು. ಇಲ್ಲದೇ ಇದ್ದರೆ ಕ್ಷಮೆ ಕೇಳಬೇಕು’ ಎಂದು ಪಟ್ಟು ಹಿಡಿದರು. ಒಂದೂವರೆ ತಾಸಿಗೂ ಹೆಚ್ಚು ಕಾಲ ಇದೇ ವಿಷಯದಲ್ಲಿ ವಾಗ್ವಾದ ನಡೆಯಿತು.
‘ಮಾರಿಕೊಂಡವರು, ಗೋದಿ ಮೀಡಿಯಾ ಎಂಬುದೆಲ್ಲ ಇದೆ. ನಿಮಗೆ ನೀಡಿದ ಅಧಿಕೃತ ಆಹ್ವಾನದಲ್ಲಿ ಆ ಪದ ಬಳಸಿಲ್ಲ. ನನ್ನ ವೈಯಕ್ತಿಕ ಜಾಲತಾಣ ಖಾತೆಯಲ್ಲಿ ಮಾರಿಕೊಂಡವರನ್ನೂ ಆಹ್ವಾನಿಸಿದ್ದೇನೆ. ಅಧಿಕೃತ ಆಹ್ವಾನ ನೋಡಿ ನೀವು ಬಂದಿದ್ದೀರಲ್ಲವೇ? ಏನೇ ಪ್ರಶ್ನೆ ಕೇಳಿ, ಯಾವುದೇ ಪದ ಬಳಸಿ ಕೆರಳಿಸಲು ಪ್ರಯತ್ನಿಸಿದರೂ ನನ್ನನ್ನು ರೊಚ್ಚಿಗೆಬ್ಬಿಸಲು ಸಾಧ್ಯವಿಲ್ಲ’ ಎಂದ ಪ್ರಕಾಶ್ರಾಜ್ ಕಣ್ಣರಳಿಸಿ, ಚಪ್ಪಾಳೆ ತಟ್ಟಿ, ಆಗಾಗ ಕೈಕಟ್ಟಿಕೊಂಡು ನಗುವ ವಿವಿಧ ಭಾವ ಭಂಗಿಗಳೊಂದಿಗೆ ಆಗಾಗ ಮೌನ ವಹಿಸುತ್ತಲೇ ಉತ್ತರ ನೀಡಿದರು.
‘ಇಷ್ಟು ಹೊತ್ತು ಸಮಾಧಾನಕರವಾಗಿಯೇ ಮಾತಾಡಿದ್ದೇನೆ. ನನ್ನ ಅಭಿಪ್ರಾಯವನ್ನು ನೀವು ಪ್ರಕಟ/ಬಿತ್ತರಿಸದೇ ಇದ್ದರೆ ವಿಡಿಯೊ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡುತ್ತೇನೆ’ ಎಂದೂ ಅವರು ಹೇಳಿದರು.
‘ತಾಕತ್ತಿದ್ದರೆ, ಮರ್ಯಾದೆ ಇದ್ದರೆ ಉತ್ತರ ಹೇಳಿ’ ಎಂದು ಕೆಲವರು ಒತ್ತಾಯಿಸಿದಾಗಲೂ, ‘ನಾನು ಅಧಿಕೃತವಾಗಿ ನೀಡಿದ ಆಹ್ವಾನದಿಂದಾಗಿ ಬಂದಿದ್ದೀರಿ. ಮತ್ಯಾಕೆ ಕುಂಬಳಕಾಯಿ ಕಳ್ಳ ಅಂದರೆ ಹೆಗಲು ಮುಟ್ಟಿ ನೋಡಿಕೊಳ್ಳುತ್ತೀರಿ’ ಎಂದು ಪ್ರಶ್ನಿಸಿದರು.
ಇಂಥವರೆಲ್ಲ ಮಾರಿಕೊಂಡವರು ಎಂದು ಸ್ಪಷ್ಟವಾಗಿ ಹೇಳಿ’ ಎಂದು ಒತ್ತಾಯಿಸಿದಾಗ, ‘ಅವರಿಗೂ ಹೆಂಡತಿ ಮಕ್ಕಳಿದ್ದಾರೆ. ಅವರು ಬದುಕಿಕೊಳ್ಳಲಿ ಎಂಬ ಕಾಳಜಿಯಿಂದ ಹೇಳುವುದಿಲ್ಲ. ಮಾರಿಕೊಂಡವರು ಯಾರು? ಮಾರಿಕೊಳ್ಳದವರು ಯಾರು ಎಂಬುದನ್ನು ಪತ್ತೆ ಹಚ್ಚಲು ಎಸ್ಐಟಿ ರಚಿಸುವಂತೆ ನೀವು- ನಾವು ಸೇರಿ ಮುಖ್ಯಮಂತ್ರಿಗೆ, ನ್ಯಾಯಾಲಯಕ್ಕೆ ಪತ್ರ ಬರೆಯೋಣ’ ಎಂದು ಹೇಳಿದರು.
ಕರ್ನಾಟಕದ ಮಾಧ್ಯಮದ ಬಗ್ಗೆ ಅಲ್ಲ, ಕರ್ನಾಟಕದ ಮಾಧ್ಯಮವನ್ನು ಹಾಳು ಮಾಡುತ್ತಿರುವ ಕೆಲವು ಮಾರಿಕೊಂಡವರ ಬಗ್ಗೆ ಅಷ್ಟೇ ಹೇಳಿದ್ದೇನೆ ಎಂದು ಹೇಳಿದ ಪ್ರಕಾಶ್ ರಾಜ್, ದೇವನೂರ ಮಹಾದೇವರ ಅವರ ‘ಮಾರಿಕೊಂಡವರು’ ಕಥೆ ಓದಿ ಗೊತ್ತಾಗುತ್ತದೆ ಎಂದು ಮಾತು ತೇಲಿಸಿದರು. ‘ಮಾರಿಕೊಂಡವರು ಯಾರು ಎಂಬುದು ನಿಮಗೇ ಗೊತ್ತಿದೆ. ಆದರೂ ಕೇಳುತ್ತೀರಿ’ ಎಂದು ಕುಟುಕಿದರು.
ಕ್ಷಮೆ ಕೇಳಲು ಸಾವರ್ಕರ್ ಅಲ್ಲ:
ಕ್ಷಮೆ ಕೇಳಲು ನಾನು ಸಾವರ್ಕರ್ ಅಲ್ಲ. ಸುದ್ದಿಗೋಷ್ಠಿ ಕರೆಯದಿರಲು ನಾನು ಪ್ರಧಾನಿಯೂ ಅಲ್ಲ ಎಂದು ಪ್ರಕಾಶ್ ರಾಜ್ ಹೇಳಿದರು. ‘ಮಾರಿಕೊಂಡವರು’ ಪದಕ್ಕೆ ಕ್ಷಮೆಯಾಚಿಸಬೇಕು ಎಂದು ಕೆಲವರು ಒತ್ತಾಯಿಸಿದಾಗ ಅವರು ಹೀಗೆ ಪ್ರತಿಕ್ರಿಯಿಸಿದರು.
‘ನಾನು ಉತ್ತರವನ್ನು ಹೇಳಿಯಾಗಿದೆ. ನೀವು ಬಯಸುವ ಉತ್ತರವನ್ನು ನಾನು ಹೇಳಲು ಸಾಧ್ಯವಿಲ್ಲ. ನಾನು ಏನು ಹೇಳಬೇಕೋ ಅದನ್ನೇ ಹೇಳುತ್ತೇನೆ. ಅದು ಸಮಂಜಸವಲ್ಲ ಎಂದು ನಿಮಗೆ ಅನ್ನಿಸಿದರೆ ಹಾಗೇ ಬರೆದುಬಿಡಿ. ಮಾರಿಕೊಂಡ ಮಾಧ್ಯಮ ಎಂಬುದು ಲೇವಡಿಯಲ್ಲ. ನನ್ನ ನೋವು ಎಂದರು.
US support India ಮೋದಿ ಪ್ರಧಾನಿಯಾಗಿರುವಾಗ ಭಾರತದ ಮೇಲೆ ಯಾರೇ ದಾಳಿ ಮಾಡಿದರೂ ನೆರವಿಗೆ ನಾವಿದ್ದೇವೆ: ಟ್ರಂಪ್